ಕಚೇರಿ, ನಿವಾಸದ ಮೇಲೆ ಐಟಿ ದಾಳಿ; ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 10 : "ನಾವು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಇನ್ನಾವುದೇ ವ್ಯವಹಾರವನ್ನು ನಡೆಸುತ್ತಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಗತ್ಯವಾಗಿರುವ ಮಾಹಿತಿ ನೀಡುತ್ತೇವೆ" ಎಂದು ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ ಅವರ ಬೆಂಗಳೂರಿನ ನಿವಾಸ, ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ, "ಖಾಸಗಿ ಬಸ್ ಸೇರಿದಂತೆ ನಾವು ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಕೇವಲ ಶಿಕ್ಷಣ ಸಂಸ್ಥೆಯನ್ನು ಮಾತ್ರ ನಡೆಸುತ್ತಿದ್ದೇವೆ. ಶಿಕ್ಷಣ ಸಂಸ್ಥೆ ಸಹ ನಮ್ಮ ತಂದೆಯವರು ಮಾಡಿದ್ದು, ನಮ್ಮದು ಯಾವುದೇ ಬ್ಯುಸಿನೆಸ್ ಇಲ್ಲ" ಎಂದರು.

"ಯಾವ ಕಾರಣಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನಗೆ ಈ ಬಗ್ಗೆ ಬೇರೆ ಮಾಹಿತಿಯೂ ಇಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಯಾವ ಮಾಹಿತಿ ಬೇಕೋ ಅದನ್ನು ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
"ನಮ್ಮ ಶಿಕ್ಷಣ ಸಂಸ್ಥೆ 56, 58 ವರ್ಷಕ್ಕೂ ಹಳೆಯದು. ನಾವು ಎಲ್ಲಾ ರೀತಿಯ ಆದಾಯ ತೆರಿಗೆಯನ್ನು ಪಾವತಿಸಿದ್ದೇವೆ. ಯಾವ ಕಾರಣಕ್ಕೆ ದಾಳಿ ನಡೆಸಲಾಗಿದೆ. ಅವರಿಗೆ ಯಾವ ಮಾಹಿತಿ ಬೇಕಿದೆ ಗೊತ್ತಿಲ್ಲ. ರಾಜಕೀಯ ಪ್ರೇರಿತವಾಗಿಯೂ ದಾಳಿ ಆಗಿರಬಹುದು" ಎಂದು ಪರಮೇಶ್ವರ ಹೇಳಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಜಿ. ಪರಮೇಶ್ವರ ನಿವಾಸದ ಮೇಲೆ 7 ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನಲ್ಲಿರುವ ಪರಮೇಶ್ವರ ಒಡೆತನದ ಸಿದ್ದಾರ್ಥ ಕಾಲೇಜಿನ ಮೇಲೆಯೂ ದಾಳಿ ನಡೆದಿದೆ. ಐಟಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯನ್ನು ಮುಂದುವರೆಸಿದೆ.












Click it and Unblock the Notifications