"ಜಿ.ಪರಮೇಶ್ವರ್ ಅವರೇ ಮುಂದಿನ ಸಿಎಂ"
ಬೆಂಗಳೂರು, ಸೆಪ್ಟೆಂಬರ್, 11: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಕೇಳಿ ಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡಕಾರುತ್ತಿವೆ. ಮತ್ತೊಂದೆಡೆ ಸಿಎಂ ಬದಲಾವಣೆ ಕೂಗುಗಳು ಕೂಡ ಕೇಳಿಬರುತ್ತಿದ್ದು, ಇದೀಗ ಜಿ.ಪರಮೇಶ್ವರ್ ಅವರೇ ಮುಂದಿನ ಸಿಎಂ ಎಂದು ಅಭಿಮಾನಿಗಳು ಕೂಗಿದರು. ಇದಕ್ಕೆ ಸಚಿವ ಪರಮೇಶ್ವರ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 11) ಜನರ ಅಹವಾಲುಗಳನ್ನು ಸಚಿವ ಜಿ.ಪರಮೇಶ್ವರ್ ಸ್ವೀಕರಿಸಿದರು. ಈ ವೇಳೆ ಅಭಿಮಾನಿಗಳು ಜಿ.ಪರಮೇಶ್ವರ್ ಅವರೇ ಮುಂದಿನ ಸಿಎಂ ಎಂದಿ ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್ ಅವರು ಹೇ.. ಸುಮ್ನೆ ಇರಪ್ಪಾ.. ಹಾಗೆಲ್ಲಾ ಮಾತನಾಡಬಾರದು ಎಂದು ಅಭಿಮಾನಿಗಳಿಗೆ ಬೈದು ಹೇಳಿದ ಘಟನೆ ನಡೆಯಿತು.

ಸಿಎಂ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬರುತ್ತಿದ್ದಂತೆ ರಾಜ್ಯದಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿಬಿಟ್ಟಿದೆ. ಈಗಾಗಲೇ ಹಲವರು ನಾನೇ ಮುಂದಿನ ಸಿಎಂ ಎಂದು ಹೇಳಿಕೊಂಡಿರುವ ಉದಾಹರಣೆಗಳು ಇವೆ. ಅಲ್ಲದೆ, ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ ಪಾಟೀಲ್ ಸಹ ಸಿಎಂ ಆಗುವ ಬಯಕೆಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಹಾಗಾದರೆ ಅವರು ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ನೀಡಲಾಗಿದೆ ಗಮನಿಸಿ.
ಎಂಬಿ ಪಾಟೀಲ್ ಹೇಳಿದ್ದೇನು?: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆಯಂತೂ ಇಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಅವರೇ ಮುಂದುವರೆಯುತ್ತಾರೆ. ಇನ್ನು ಸಿಎಂ ಆಗುವುದಕ್ಕೆ ಸೀನಿಯಾರಿಟಿ ಬೇಕಿಲ್ಲ. ಆದರೂ ಒಂದು ಮಾತು ಹೇಳುತ್ತೇನೆ. ಕಾಂಗ್ರೆಸ್ನಲ್ಲಿ ನಾನು ಕೂಡ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರ.
ಶಿವಾನಂದ ಪಾಟೀಲ್ ಅಂತೂ ಸಿಎಂ ಆಗುವುದಿಲ್ಲ. ಇನ್ನು ಅವರು ಇದೀಗ ಜನತಾ ದಳದಿಂದ ಕಾಂಗ್ರೆಸ್ಗೆ ಬಂದಿದ್ದಾರೆ. ಸಿಎಂ ಬದಲಾವಣೆಯಂತಹ ಸನ್ನಿವೇಶ ಸದ್ಯ ಇದೀಗ ಬಂದಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ, ಮುಂದೆಯೂ ಇರುತ್ತಾರೆ. ಮತ್ತೊಂದೆಡೆ ನಾನು ಕೂಡ ಹಿರಿಯ ಸದಸ್ಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂಂದು ಹೇಳಿದ್ದಾರೆ.
ಇನ್ನು ಮುಡಾ ಪ್ರಕರಣವನ್ನು ಬೇರೆ ಕಡೆ ತಿರುಗಿಸಲು ನಟ ದರ್ಶನ್ ಫೋಟೋ ಲೀಕ್ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಹ್ಲಾದ್ ಜೋಶಿ ತಿಳಿದವರಾಗಿದ್ದಾರೆ. ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣ ಹಾಗೂ ಆರೋಪವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಆದ್ದರಿಂದ ದರ್ಶನ್ & ಗ್ಯಾಂಗ್ ಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಿದರು.
ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಇದರಲ್ಲಿ ಸಿದ್ದರಾಮಯ್ಯನವರ ಪಾಲು ಏನಿದೆ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸ್ಸು ಬೇಡ , ರಾಜ್ಯಪಾಲರ ನಡವಳಿಕೆ ಮಾತ್ರ ಕಾನೂನು ಬಾಹಿರವಾಗಿದೆ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications