Breaking: ಸ್ವಾತಂತ್ರ್ಯ ಅಮೃತ ಮಹೋತ್ಸವ: 1.20 ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ- ಬೊಮ್ಮಾಯಿ
ಬೆಂಗಳೂರು, ಆ.13: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದಲ್ಲಿ ಸುಮಾರು 1.20 ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ ರಾಜ್ಯದಲ್ಲಿ ಪ್ರಾರಂಭವಾಗಿದೆ. ಸರ್ಕಾರದಿಂದ ಈಗಾಗಲೇ 1.08 ಕೋಟಿ ಧ್ವಜಗಳನ್ನು ವಿತರಿಸಲಾಗಿದೆ. ಇದಲ್ಲದೆ, ಸಂಘ ಸಂಸ್ಥೆಗಳೂ ಸಹ ಕೈ ಜೋಡಿಸಿದ್ದು ಮೂರು ದಿನಗಳ ಅಭಿಯಾನದಲ್ಲಿ 1.20 ಕೋಟಿ ರಾಷ್ಟ್ರಧ್ವಜಗಳು ಹಾರಾಡುತ್ತವೆ ಎಂದು ಹೇಳಿದರು.

ಹರ್ ಘರ್ ತಿರಂಗಾ ಪ್ರತಿ ಹಳ್ಳಿಯಲ್ಲೂ ವಿಸ್ತಾರಗೊಂಡಿದೆ. ಜನರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜಗಳನ್ನು ಹಾಕುತ್ತಿದ್ದಾರೆ. ವಾಸ್ತವವಾಗಿ ಅಭಿಯಾನ ಇಂದಿನಿಂದ ಆಂಭವಾಗುತ್ತಿದ್ದರೂ ಸಹ ಕಳೆದ ಎರಡು ದಿನಗಳಿಂದಲೇ ಜನರಿಂದ ಸ್ಪಂದನೆ ವ್ಯಕ್ತವಾಗುತ್ತಿದೆ. ಶಾಲಾ ಮಕ್ಕಳು ಎಲ್ಲಾ ಕಡೆ ಪಥಸಂಚಲನ ನಡೆಸಿ ಧ್ವಜದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿವೆ. ಅಮೃತ ಮಹೋತ್ಸವ ನೆನಪಿಗೆ ದೇಶದ ಎಲ್ಲಾ ಜನರಿಂದಲೂ ಧ್ವಜ ಹಾರಿಸುವ ಅಭಿಯಾನ ನಡೆಸುವ ಮೂಲಕ ನಾವೆಲ್ಲರೂ ಒಂದು, ನಾವೆಲ್ಲರೂ ದೇಶಭಕ್ತರು ಎಂದು ಸಾರಲಾಗುತ್ತದೆ. ಅಲ್ಲದೆ, ಮುಂದಿನ 25 ವರ್ಷ ಭಾರತದ ಭವ್ಯ ಭವಿಷ್ಯಕ್ಕೆ ಸಂಕಲ್ಪ ಮಾಡಲಾಗುತ್ತದೆ. ಜಾತಿ, ಮತ, ಭೇದ ಬಿಟ್ಟು ಭಾರತವನ್ನು ಶಕ್ತಿಶಾಲಿಯಾಗಿ ರೂಪಿಸಲು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.












Click it and Unblock the Notifications