ಪ್ರಜ್ವಲ್ ವಿರುದ್ಧದ ಕ್ರಮಕ್ಕೆ ಯಾವುದೇ ತಕರಾರು ಇಲ್ಲ- ಹೆಚ್.ಡಿ ದೇವೇಗೌಡ ಫಸ್ಟ್ ರಿಯಾಕ್ಷನ್
ಬೆಂಗಳೂರು, ಮೇ 18: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕೊನೆಗೂ ಮೌನ ಮುರಿದಿದ್ದಾರೆ. ಪ್ರಕರಣದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ದೇವೇಗೌಡರು, ಪ್ರಕರಣ ಸಂಬಂಧ ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಯಾವುದೇ ತಕರಾರು ಇಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ರೇವಣ್ಣ ಅವರ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಎಂದು. ಒಂದು ಕೇಸ್ನಲ್ಲಿ ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ತೀರ್ಪು ಇದೆ. ಅದು ಯಾವ ರೀತಿ ನಡೆಯಿತು ಎನ್ನುವುದನ್ನು ವಿಶ್ಲೇಷಣೆ ಮಾಡಲ್ಲ ಎಂದು ಎಂದರು.

ಕುಮಾರಸ್ವಾಮಿ ಈ ವಿಚಾರದಲ್ಲಿ ಯಾವುದೇ ಚ್ಯುತಿ ಇಲ್ಲದ ರೀತಿ ಸಂಬಂಧ ಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಸೇರಿಸಿ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳಿ ಅಂದಿದ್ದಾರೆ. ಎಲ್ಲದಕ್ಕೂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಹಿನ್ನಡೆ ಮಾಡಬೇಕು ಎನ್ನುವ ಷಡ್ಯಂತ್ರ ನಿಜ. ಇದರಲ್ಲಿ ತುಂಬಾ ಜನ ಇದ್ದಾರೆ. ಅವರ ಹೆಸರು ನಾನು ಹೇಳುವುದಿಲ್ಲ. ಕುಮಾರಸ್ವಾಮಿ ಅವರು ಏನು ಮಾಡಬೇಕು ಅಂತ ಹೇಳಿದ್ದಾರೆ ಎಂದರು.
ದೇವರಾಜೇಗೌಡರು ಏನು ಹೇಳಿದ್ದಾರೆ ಎಲ್ಲವನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ. ದೇವರಾಜೇಗೌಡರ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ. ಎಲ್ಲ ವಿಚಾರದಲ್ಲೂ ಕುಮಾರಸ್ವಾಮಿಯವರು ರಿಯಾಕ್ಟ್ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಯಾವುದೇ ವಿಚಾರ ಬಂದರೂ ಹೋರಾಟದ ಛಲ ಇದೆ ಅವರಿಗೆ. ಚುನಾವಣೆಯಲ್ಲಿ ಎಲ್ಲ ಕಡೆ ನಾನು ಪ್ರಚಾರ ಮಾಡಿದ್ದೇನೆ. ಜೂನ್ 4 ರಂದು ಫಲಿತಾಂಶ ಬಂದ ಮೇಲೆ ನಮ್ಮ ಆಫೀಸ್ನಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾರನ್ನು ಭೇಟಿ ಮಾಡುವುದಿಲ್ಲ ಎಂದರು.












Click it and Unblock the Notifications