ದೇವೇಗೌಡ್ರೇ, ಕರೆಕ್ಟಾಗಿ ಹೇಳಿ ಚುನಾವಣೆಗೆ ನಿಲ್ತಿರೋ, ಇಲ್ವೋ?
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಇತ್ತೀಚಿನ ದಿನಗಳಲ್ಲಿ ತೀವ್ರ ಭಾವುಕತೆಗೆ ಒಳಗಾಗುತ್ತಿದ್ದಾರೆ. ಅದೂ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲಾದ ಮೇಲಂತೂ ಗೌಡ್ರು ಕಣ್ಣೀರಿಡುವುದು, ಭಾವೋದ್ವೇಗಕ್ಕೆ ಒಳಗಾಗುತ್ತಿರುವುದು ತುಸು ಹೆಚ್ಜೇ ಆಗುತ್ತಿದೆ.
ಅಸಂಖ್ಯಾತ ರಾಜಕೀಯ ಶಿಷ್ಯ ಬಳಗವನ್ನು, ಅಭಿಮಾನಿಗಳನ್ನು, ಕಾರ್ಯಕರ್ತರನ್ನು ಹೊಂದಿರುವ ಗೌಡ್ರು ಕಣ್ಣೀರಿಟ್ಟರೆಂದರೆ ಅದು ಹೆಚ್ಚಾಗಿ ಸುದ್ದಿಯಾಗುವುದಿಲ್ಲ. ಯಾಕೆಂದರೆ ಗೌಡ್ರು ಕಣ್ಣೀರಿಡುವುದು ಹೊಸದೇನಲ್ಲ.
ಆದರೂ, ಬೆಂಬಿಡದಂತೆ ಪಕ್ಷಕ್ಕೆ ಎದುರಾಗುತ್ತಿರುವ ಸೋಲು, ಆಂತರಿಕ ಭಿನ್ನಮತ, ರಾಜಕೀಯ ಎದುರಾಳಿಗಳು ಮುನ್ನಡೆ ಸಾಧಿಸುತ್ತಿರುವುದು, ಕುಮಾರಸ್ವಾಮಿಗೆ ಇನ್ನೂ ಸರಿಯಾಗಿ ಪಕ್ಷದ ಮೇಲೆ ಹಿಡಿತ ಸಿಗದೇ ಇರುವುದು ಗೌಡ್ರನ್ನು ಚಿಂತೆಗೀಡು ಮಾಡಿದೆಯೇ?
ರಾಜಕೀಯವಾಗಿ ಇಟ್ಟ ಹೆಜ್ಜೆಯವನ್ನು ಸುಲಭವಾಗಿ ಹಿಂದಕ್ಕೆ ಪಡೆಯದ ಗೌಡ್ರ ಇತ್ತೀಚಿನ ನೋವಿನ ಮಾತುಗಳ ಹಿಂದೆ ಪಕ್ಷದ ಭವಿಷ್ಯದ ಚಿಂತೆ ಅಡಗಿರಬಹುದೇ ಎನ್ನುವ ಸಂಶಯ ಪಕ್ಷದ ಮೂಲ ಕಾರ್ಯಕರ್ತರನ್ನು ಕಾಡುತ್ತಿರುವುದಂತೂ ನಿಜ. (ಕೂದಲೆಳೆ ಅಂತರದಲ್ಲಿ ಪಾರಾದ ಗೌಡರು)
ಮತ್ತೆ, ಮಗುದೊಮ್ಮೆ ದೇವೇಗೌಡ್ರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಹೇಳಿಕೆಯನ್ನು ತುಮಕೂರಿನಲ್ಲಿ ನೀಡಿದ್ದಾರೆ. ಯಾವುದೇ ಚುನಾವಣೆ ಸದ್ಯ ಎದುರಿಲ್ಲದಿದ್ದರೂ, ಇದು ದೇವೇಗೌಡ್ರ ಖಡಕ್, ಅಂತಿಮ ನಿರ್ಧಾರವೇ ಎನ್ನುವುದು ಗೊತ್ತಾಗಬೇಕಿದೆ.
ಮಾಧ್ಯಮದವರಿಗೆ ಬುದ್ದಿಮಾತು ಹೇಳಿದ ಗೌಡ್ರು ಮತ್ತು ಅವರ ಭಾವೋದ್ವೇಗಕ್ಕೆ ಈ ಕಾರಣಗಳಿರಬಹುದೇ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಪತ್ರಕರ್ತರಿಗೆ ಗೌಡ್ರ ಬುದ್ದಿ, ಕಿವಿಮಾತು
ಪ್ರಧಾನಿಯಾಗಿದ್ದಾಗ ನನ್ನನ್ನು 'ನಿದ್ದೆ ಮಾಡುವ ಪಿಎಂ' ಎಂದು ಮಾಧ್ಯಮದವರು ತೇಜೋವಧೆ ಮಾಡಿದ್ದರು. ಮಾಧ್ಯಮಗಳು ಮತ್ತು ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು, ನೆಗೆಟಿವ್ ಆಗಿ ಬರೆಯಬಾರದೆಂದು ಇತ್ತೀಚೆಗೆ ಗೌಡ್ರು ಪತ್ರಕರ್ತರಿಗೆ ಬುದ್ದಿಮಾತನ್ನು ಹೇಳಿದ್ದರು.

ಇದೇ ಕೊನೆ ಚುನಾವಣೆ ಎಂದಿದ್ದು ಗೌಡ್ರೇ ಅಲ್ವೇ
ಅದೆಷ್ಟೋ ಬಾರಿ ದೇವೇಗೌಡ್ರು ರಾಜೀನಾಮೆ ನೀಡುತ್ತೇನೆ, ಇದೇ ನನ್ನ ಕೊನೆಯ ಚುನಾವಣೆ, ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ, ಮುಂತಾದ ಹೇಳಿಕೆಗಳನ್ನು ನೀಡಿದ್ದು ಖುದ್ದು ಗೌಡ್ರೇ ವಿನಹ, ಅದು ಮಾಧ್ಯಮದವರ ಸೃಷ್ಟಿಯಲ್ಲ ಅಥವಾ ಮಾಧ್ಯಮದವರ ತಪ್ಪು ಕಲ್ಪನೆಯೂ ಆಗಿರಲಿಲ್ಲ ಎನ್ನುವುದು ಜನತೆಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

ದೆಹಲಿಯಲ್ಲಿ ಜನತಾ ಪರಿವಾರಕ್ಕೆ ಚಾಲನೆ
ಬಿಜೆಪಿ ಗೆಲುವಿಗೆ ಬ್ರೇಕ್ ಹಾಕಲು ಜೆಡಿಎಸ್, ಜೆಡಿಯು, ಎಸ್ಪಿ, ಆರ್ಜೆಡಿ ಸೇರಿದಂತೆ ಆರು ಪಕ್ಷಗಳ ಒಕ್ಕೂಟದ ಹೊಸ ರಾಜಕೀಯ ರಂಗ ಉದಯವಾಗಿದ್ದಂತೂ ಹೌದು. ಆದರೂ ಒಕ್ಕೂಟದ ಮುಖಂಡರ ನಡುವಿನ ಹೊಂದಾಣಿಕೆ, ನಿರೀಕ್ಷಿತ ಮಟ್ಟದಲ್ಲಿ ಸಾಗದ ಒಕ್ಕೂಟದ ಕಾರ್ಯವೈಖರಿ, ದೇವೇಗೌಡ್ರ ನೋವಿಗೆ ಕಾರಣವಿರಬಹುದೇ?

ತುಮಕೂರಿನ ಘಟನೆ
ದೇವರು, ಭವಿಷ್ಯವನ್ನು ಅತಿಹೆಚ್ಚು ನಂಬುವ ಗೌಡ್ರಿಗೆ ತುಮಕೂರಿನಲ್ಲಿ ಎರಡು ದಿನದ ಹಿಂದೆ ಧಾರ್ಮಿಕ ಸಮಾರಂಭದಲ್ಲಿ ನಡೆದ ಘಟನೆ ಮತ್ತಷ್ಟು ನೋವು ತಂದಿದೆ ಎನ್ನುವ ಸುದ್ದಿಯಿದೆ. ಅಲ್ಲದೇ ಗೌಡ್ರು ಇತ್ತೀಚೆಗೆ ಮಾಟ, ಮಂತ್ರದಿಂದ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎನ್ನುವ ಮಾರ್ಮಿಕ ಹೇಳಿಕೆ ಕಾರ್ಯಕರ್ತರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದೆ.

ಡಿ ಕೆ ಶಿವಕುಮಾರ್
ಡಿಕೆಶಿ ಮತ್ತು ಗೌಡ್ರ ಕುಟುಂಬದ ನಡುವಿನ ಜಿದ್ದು ರಾಜಕೀಯ ಮೇಲಾಟಕ್ಕಿಂತ ಹೆಚ್ಚಾಗಿ ಒಕ್ಕಲಿಗ ಸಮುದಾಯದಲ್ಲಿ ಮೇಲುಗೈ ಸಾಧಿಸಲು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇತ್ತೀಚೆಗೆ ಮುಗಿದ ಅಸೆಂಬ್ಲಿ ಅಧಿವೇಶನದಲ್ಲಿ ಡಿಕೆಶಿ, ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ನಿಂದಿಸಿದಾಗ ಕುಮಾರಸ್ವಾಮಿ ನೋವಿನಿಂದ ಸದನದಿಂದ ಹೊರ ನಡೆದಿದ್ದರು. ಆ ಸಮಯದಲ್ಲಿ ಪಕ್ಷದ ಶಾಸಕರಿಂದ ನಿರೀಕ್ಷಿತ ಮಟ್ಟದಲ್ಲಿ ಗೌಡ್ರ ಕುಟುಂಬಕ್ಕೆ ಬೆಂಬಲ ಸಿಗಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಒಂದಾಗದ ಚೆಲುವ, ಜಮೀರ್, ಬಾಲಕೃಷ್ಣ
ಪಕ್ಷದ ಆಂತರಿಕ ಭಿನ್ನಮತವೇ ಗೌಡ್ರ ನೋವಿಗೆ ಮೂಲ ಕಾರಣವಿದ್ದರೂ ಇರಬಹುದು. ಮುನಿಸಿಕೊಂಡು ದೂರವಾಗಿದ್ದ ಪಕ್ಷದ ಕಟ್ಟಾಳುಗಳಾದ ಚೆಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ ಎದುರಿಗೆ ಒಂದಾಗಿದ್ದರೂ ಕುಮಾರಸ್ವಾಮಿ ಜೊತೆಗಿನ ಸಂಬಂಧ ಇನ್ನೂ ಹೊಗೆಯಾಡುತ್ತಿರುವುದು ಗೌಡ್ರಿಗೆ ನುಂಗಲಾರದ ತುತ್ತಾಗಿದೆಯೇ?

ಎಚ್ ಡಿ ರೇವಣ್ಣ
ಶಾಸಕರಾಗಿದ್ದರೂ, ಸಕ್ರಿಯ ರಾಜಕಾರಣದಲ್ಲಿ ಅಷ್ಟೇನೂ ಆಸಕ್ತಿ ತೋರದ ರೇವಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹತ್ತಿರವಾಗುತ್ತಿದ್ದಾರೆಯೇ ಎನ್ನುವ ನೋವೂ ಗೌಡ್ರಿಗೆ ಕಾಡುತ್ತಿರಬಹುದು. ಅದಕ್ಕೆ ಪೂರಕ ಎನ್ನುವಂತೆ ಸಿದ್ದು, ರೇವಣ್ಣ ಪರವಾಗಿ ಹಲವಾರು ಸಂದರ್ಭದಲ್ಲಿ ಬ್ಯಾಟ್ ಮಾಡುತ್ತಿರುವುದೂ ಗೌಡ್ರ ಚಿಂತೆಗೆ ಕಾರಣವಾಗಿರಬಹುದು.












Click it and Unblock the Notifications