ನಂದಿತಾ ಸಾವಿನ ಮಧ್ಯೆ ಇದೇನಿದು ಜನಿವಾರದ ಗಲಾಟೆ
ಶಿವಮೊಗ್ಗ, ಬೆಂಗಳೂರು, ನ 7: ತೀರ್ಥಹಳ್ಳಿ ಶಾಲಾ ವಿದ್ಯಾರ್ಥಿನಿ ನಂದಿತಾ ಅನುಮಾನಾಸ್ಪದ ಸಾವಿನ ಘಟನೆಯನ್ನು ಆಡಳಿತ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಯಥೇಚ್ಚವಾಗಿ ಬಳಸಿಕೊಳ್ಳುತ್ತಿದೆ.
ಈ ಘಟನೆಯಲ್ಲಿ ಕಾಂಗ್ರೆಸ್ ಈಗಾಗಲೇ ಆಣೆ ಪ್ರಮಾಣ, ದೇವರು ದಿಂಡ್ರು, ಧರ್ಮಸ್ಥಳ ಮಂಜುನಾಥನನ್ನು ಎಳೆದು ತಂದಾಗಿದೆ. ಈಗ ಜನಿವಾರ ಪದದ ಪ್ರಯೋಗವೂ ನಡೆದುಹೋಗಿದೆ.
ಧರ್ಮಸ್ಥಳದಲ್ಲಿ ಬಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ ಎನ್ನುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸವಾಲಿಗೆ, ಬಿಜೆಪಿಯ ಮಾಜಿ ಶಾಸಕ ಆರಗ ಜ್ಞಾನೇಂದ್ರ ಪಾಟಿ ಸವಾಲೆಸೆದಿದ್ದಾರೆ. (ನಂದಿತಾ ಸಾವಿಗೆ ಕಂಬನಿ ಮಿಡಿದ ತೀರ್ಥಹಳ್ಳಿ)
ಚಿತ್ರರಂಗದಲ್ಲಿ ಇರಬೇಕಾದ ವ್ಯಕ್ತಿ ರಾಜಕೀಯದಲ್ಲಿ ಇದ್ದಾರೆ. ಇದೇ ಕಿಮ್ಮನೆ ಅಂದು ಮಾತನಾಡಿದ್ದೇನು? ಹಿರಿಯ ನಾಯಕ ಎ ಕೆ ಸುಬ್ಬಯ್ಯನವರ ಬಗ್ಗೆ ಕೇವಲವಾಗಿ ಮಾತನಾಡಿದ್ದ ಕಿಮ್ಮನೆಗೆ ಅದೆಲ್ಲಿಂದ ದೇವರ ಮೇಲೆ ಭಕ್ತಿ ಬಂತು ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಅಂದು ಭಾಷಣ ಮಾಡುತ್ತಾ ಸಚಿವ ಕಿಮ್ಮನೆ, ತೀರ್ಥಹಳ್ಳಿಗೆ ಎ ಕೆ ಸುಬ್ಬಯ್ಯವರನ್ನು ಕರೆಸಿ ಅವರ ಜುಟ್ಟು, ಜನಿವಾರ ಎಲ್ಲವನ್ನು ಕಿತ್ತು ಹಾಕಾಬೇಕೆಂದು ಕಿಮ್ಮನೆ ರತ್ನಾಕರ ಭಾಷಣ ಮಾಡಿದ್ದರು. ಈಗ ಧರ್ಮಸ್ಥಳ, ದೇವರು ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ.
ನಾವೂ ದೇವರನ್ನು ನಂಬಿದವರು, ಕಿಮ್ಮನೆಯವರಿಂದ ಕಲಿಯುವುದು ಬೇಕಾಗಿಲ್ಲ. ನಂದಿತಾ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸಿ ಸತ್ಯಾಂಸ ಬಯಲಿಗೆಳೆಯಲಿ ಎನ್ನುವುದು ನಮ್ಮ ಆಶಯ ಎಂದು ಜ್ಞಾನೇಂದ್ರ ಹೇಳಿದ್ದಾರೆ.
ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಸಚಿವ ಕಿಮ್ಮನೆ ರತ್ನಾಕರ ಗುರುವಾರ (ನ 6) ಸಂಸದೆ ಶೋಭಾ ಕರಂದ್ಲಾಜೆಯವರು ಯಕ್ಷಗಾನದ ಪಾತ್ರಧಾರಿಯಂತೆ ಆಡುತ್ತಿದ್ದಾರೆ. ಅವರಿಗೆ ಆಗರ ಜ್ಞಾನೇಂದ್ರ ಸೇರಿದಂತೆ ಕೆಲವರು ಬೆಂಬಲ ನೀಡುತ್ತಿದ್ದಾರೆ.
ನಂದಿತಾ ಸಾವಿನ ಪ್ರಕರಣದ ತನಿಖೆ ಮುಗಿದ ನಂತರ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಅದರಂತೇ, ಶೋಭಾ ಕರಂದ್ಲಾಜೆ ಕೂಡ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಧರ್ಮಸ್ಥಳಕ್ಕೆ ಬಂದು ರಾಜೀನಾಮೆ ನೀಡಲಿ ಎಂದು ಬಿಜೆಪಿ ಮುಖಂಡರಿಗೆ ಕಿಮ್ಮನೆ ರತ್ನಾಕರ ಸವಾಲೆಸೆದಿದ್ದರು.












Click it and Unblock the Notifications