ನನಗೆ ಜೀವ ಬೆದರಿಕೆ ಇದೆ: ಅನುಪಮಾ ಶೆಣೈ
ಬೆಂಗಳೂರು, ಜೂನ್ 13: ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಡಿವೈಎಸ್ಪಿ ಸ್ಥಾನಕ್ಕೆ ಅನುಪಮಾ ಶೈಣೆ ನೀಡಿದ ರಾಜೀನಾಮೆ ಅಂಗೀಕಾರವಾಗಿದೆ. ಕೂಡ್ಲಿಗಿಯಿಂದ ತವರು ಮನೆಗೆ ತೆರಳುವೆ ಎಂದಿದ್ದ ಶೆಣೈ ಅವರು ಎಲ್ಲಿದ್ದಾರೆ? ಇನ್ನೂ ಸ್ಪಷ್ಟವಾಗಿಲ್ಲ. 'ಮಾತಿಗಿಂತ ಕೃತಿ ಮೇಲು' ಎಂದು ನಮ್ಮ ಪ್ರತಿನಿಧಿಗೆ ಸಂದೇಶ ಕಳಿಸಿರುವ ಅವರು, ತಮಗೆ ಜೀವ ಬೆದರಿಕೆ ಇರುವುದನ್ನು ಒಪ್ಪಿಕೊಂಡಿದ್ದಾರೆ.
ಈ ನಡುವೆ ಉಡುಪಿ ಜಿಲ್ಲೆ ಉಚ್ಚಿಲದಲ್ಲಿರುವ ಅನುಪಮಾ ಶೆಣೈ ಅವರ ತಾಯಿ ನಳಿನಿ ಅವರ ಮೂಲಕ ಶೆಣೈ ಅವರ ಸಂಪರ್ಕ ಸಾಧಿಸಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ. ನನ್ನ ಮಗಳಿಗೆ ರಕ್ಷಣೆ ಬೇಕಿದೆ, ರಾಜೀನಾಮೆ ಅಂಗೀಕಾರ ಸರಿಯಲ್ಲ ಎಂದಿದ್ದಾರೆ. [ಪೂರ್ಣ ವಿವರ ಇಲ್ಲಿ ಓದಿ]

ಜನರ ದನಿಯಾಗಲು ಅನುಪಮಾ ಬಯಸಿದ್ದಾರೆ ಎಂದು ಆಪ್ತರು ಹೇಳುತ್ತಿದ್ದಾರೆ. ಭಟ್ಕಳದಲ್ಲಿ ತಮ್ಮ ಆಪ್ತ ಸಂಬಂಧಿಕರ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ, ಅವರ ಮುಂದಿನ ನಡೆ ಇನ್ನೂ ಸ್ಪಷ್ಟವಾಗಿಲ್ಲ. ಅನುಪಮಾ ಶೆಣೈ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಸ್ಟೇಟಸ್ ಗಳು ಇನ್ನೂ ನಿಂತಿಲ್ಲ. 'ಕೊನೇಯ ವಾರ್ನಿಂಗ್, ಗೂಬೆ change ಆಗ್ಬೇಕ್, ನಾಳೆಯಿಂದ ಹೋರಾಟ ಮತ್ತೆ ಶುರು' ಎಂದು ಬರೆಯಲಾಗಿದೆ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]
ಫೇಸ್ ಬುಕ್ ಖಾತೆ ನನ್ನದ್ದಲ್ಲ ಎಂದು ಅನುಪಮಾ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಖಾತೆ ಹ್ಯಾಕ್ ಆಗಿದೆ ಎಂದು ದೂರು ನೀಡಲು ಮುಂದಾಗಿಲ್ಲ. ಸಮಾಜಿಕ ಜಾಲ ತಾಣಗಳ ಬಗ್ಗೆ ತಿಳಿದಿಲ್ಲ ಎಂದಿರುವ ಅನುಪಮಾ ಅವರು ಮಾಧ್ಯಮ ಪ್ರತಿನಿಧಿಗಳ ನೆರವನ್ನು ಕೋರಿದ್ದಾರೆ. ಸಮಾನ ಮನಸ್ಕ ಪತ್ರಕರ್ತರ ವಾಟ್ಸಪ್ ಗುಂಪು ರಚಿಸಿ ಅದರಲ್ಲಿ ಸತ್ಯವನ್ನು ಮೊದಲಿಗೆ ಹೊರ ಹಾಕಲು ಮುಂದಾಗಿದ್ದಾರೆ.[ಅನುಪಮಾ ಶೆಣೈ ಕ್ವಿಕ್ ಫ್ರೊಫೈಲ್]
ಇನ್ನೊಂದೆಡೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ಸಾಧ್ಯತೆ ಗೋಚರಿಸುತ್ತಿದ್ದು, ಸಂಪುಟದಿಂದ ಕೈಬಿಡಬಹುದಾದ ಸಚಿವರ ಪಟ್ಟಿಯಲ್ಲಿ ವಿವಾದಿತ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಹೆಸರು ಇರುವುದು ಸುಳ್ಳಲ್ಲ. ಅನುಪಮಾ ಅವರಿಗೆ ಬೆದರಿಕೆ ಇದ್ದರೂ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿಲ್ಲ. ಸಂಘಟನೆಗಳ ನೆರವು ಸಿಕ್ಕಿದ್ದರೂ, ಪಕ್ಷಗಳು ಅವರಿಗೆ ಇನ್ನೂ ಅಭಯ ನೀಡಿಲ್ಲ.












Click it and Unblock the Notifications