ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ: ಇನ್ಸೈಡ್ ಮಾಹಿತಿ ಹೊರಹಾಕಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಕೈಜೋಡಿಸಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಈ ಬೆಳವಣಿಗೆಗಳ ನಡುವೆಯೇ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ನಿರ್ಣಾಯಕವಾಗಲಿದೆ ಎಂದು ಬೊಮ್ಮಾಯಿ ಸೋಮವಾರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
'ಇದು ( ಬಿಜೆಪಿ- ಜೆಡಿಎಸ್ ಮೈತ್ರಿ ) ಅತೀ ಮುಖ್ಯವಾದುದು. ಇದನ್ನೇ ಜನರು ನಿರೀಕ್ಷಿಸುತ್ತಿದ್ದಾರೆ. ಆ ರೀತಿಯ ಮೈತ್ರಿ ನಡೆದರೆ ಲೋಕಸಭೆ ಚುನಾವಣೆಯಲ್ಲಿ ಅದು ಪ್ರಮುಖ ಪಾತ್ರ ವಹಿಸಲಿದೆ' ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡುತ್ತಿದ್ದಾರೆ. ಆದರೆ, ಸೋಮವಾರ ಬೆಳಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷಕ್ಕೆ 'ಮಹಾಘಟಬಂಧನ್' ಅಥವಾ 'ಎನ್ಡಿಎ'ಯಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ.

ಮಹಾಘಟಬಂಧನ್, ವಿರೋಧ ಪಕ್ಷಗಳ ಮೈತ್ರಿಕೂಟವಾಗಿದೆ. ಎನ್ಡಿಎ ಬಿಜೆಪಿ ನೇತೃತ್ವದ ಮೈತ್ರಿಕೂಟವಾಗಿದೆ.
ಎನ್ಡಿಎ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲು ಇನ್ನೂ ಸಮಯವಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.
'ಮಹಾಘಟಬಂಧನ್' ಸಭೆಯಲ್ಲಿ 'ಬಂಧನ್' ಇಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ಸೋಲಿಸುವುದು ಈ ಸಭೆಯ ಏಕೈಕ ಗುರಿಯಾಗಿದೆ. ದೀನದಲಿತರು ರಾಷ್ಟ್ರಕ್ಕೆ ಪ್ರಧಾನಿಯವರ ಕೊಡುಗೆಯನ್ನು ನೆನಪಿಸಿಕೊಳ್ಳುವುದರಿಂದ ವಿರೋಧ ಪಕ್ಷಗಳ ಸಫಲವಾಗುವುದಿಲ್ಲ. ಅವರು ಪ್ರತಿಪಕ್ಷವಾಗಿ ವಿಫಲರಾಗಿದ್ದಾರೆ. ಸೊನ್ನೆಗೆ ಸೊನ್ನೆಯನ್ನು ಸೇರಿಸಿದರೆ ಉತ್ತರ ಸೊನ್ನೆ ಎಂಬುದು ಈ ಘಟಬಂಧನದ ಸ್ಥಿತಿಯಾಗಿದೆ ಎಂದು ಬೊಮ್ಮಾಯಿ ಛೇಡಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ 'ಮಹಾಘಟಬಂಧನ್' ಇಂದು ಬೆಂಗಳೂರಿನಲ್ಲಿ ಸಭೆ ಸೇರಲಿದೆ. ಇದು 2 ದಿನಗಳ ಸಭೆಯನ್ನು ನಡೆಸುತ್ತಿದೆ. ಜುಲೈ 18 ರಂದು ದೆಹಲಿಯಲ್ಲಿ ಎನ್ಡಿಎ ತನ್ನ ಮೈತ್ರಿ ಪಕ್ಷಗಳ ಸಭೆಯನ್ನು ಕರೆದಿದೆ.
ಜೆಡಿಎಸ್ಗೆ ಪ್ರತ್ಯೇಕ ಆಹ್ವಾನ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೋಮವಾರ ಹೇಳಿದ್ದಾರೆ.
'ಮೋದಿ ಸರ್ಕಾರವನ್ನು ವಿರೋಧಿಸುವ ಪಕ್ಷಗಳು ನಮ್ಮೊಂದಿಗೆ ಸೇರಬಹುದು. ಅವರನ್ನು (ಜೆಡಿಎಸ್) ಸಭೆಗೆ ಪ್ರತ್ಯೇಕವಾಗಿ ಆಹ್ವಾನಿಸುವ ಅಗತ್ಯವಿಲ್ಲ' ಎಂದು ವೇಣುಗೋಪಾಲ್ ತಿಳಿಸಿದ್ದಾರೆ.












Click it and Unblock the Notifications