ಸಿದ್ದುಗೆ ಲಕ್ವ ಹೋಡೀಲಿ ಅಂದು, ಕ್ಷಮೆ ಯಾಚಿಸಿದ ಬಿಜೆಪಿ ಮುಖಂಡ
ಚಾಮರಾಜನಗರ, ಗುಂಡ್ಲುಪೇಟೆ, ಸೆ 10: ರಾಜ್ಯ ರಾಜಕಾರಣಿಗಳ ಆರೋಪ, ಪ್ರತ್ಯಾರೋಪ ತೀರಾ ಕೆಳಮಟ್ಟಕ್ಕೆ ಇಳಿದಿದೆ. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಇವರೇನಾ ಎಂದು ವ್ಯಾಕರಿಕೆ ಬರುವಂತೆ ಮಾಡುತ್ತಿದ್ದಾರೆ ನಮ್ಮ ರಾಜಕೀಯ ಪುಢಾರಿಗಳು.
ಹಿರಿಯ ಮುಖಂಡರೂ ಮತ್ತು ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾದವರು ರಾಜ್ಯದ ಮುಖ್ಯಮಂತ್ರಿಗೆ, ಅವರ ಕುಟುಂಬಕ್ಕೆ ಮತ್ತು ಸಮಸ್ತ ರಾಜ್ಯ ಸಚಿವರ ಕುಟುಂಬಕ್ಕೆ 'ಲಕ್ವ ಹೋಡೀಲಿ' ಎಂದು ಹೇಳಿಕೆ ನೀಡಿ ಕರ್ನಾಟಕ ರಾಜಕಾರಣವನ್ನು ನೀಚಮಟ್ಟಕ್ಕೆ ಇಳಿಸಿದ್ದಾರೆ.
ರಾಜಕೀಯ ಎಂದ ಮೇಲೆ ಒಬ್ಬರೊನ್ನೊಬ್ಬರು ದೂರುವುದು ಸಾಮಾನ್ಯವಾದರೂ, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಚಾಮರಾಜ ನಗರ ಜಿಲ್ಲೆಯಲ್ಲಿ ನೀಡಿದ 'ಲಕ್ವಾ ಹೇಳಿಕೆ' ಈಗ ತೀವ್ರ ಟೀಕೆಗೆ ಗುರಿಯಾಗಿದೆ.
ಮಾತಿನ ಭರಾಟೆಯಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುವಲ್ಲಿ ಹೆಸರುವಾಸಿಯಾಗಿರುವ ಈಶ್ವರಪ್ಪ ಮಂಗಳವಾರ (ಸೆ 8) ನಡೆದ ಸಭೆಯೊಂದರಲ್ಲಿ ಲಕ್ವ ಹೋಡೀಲಿ ಎಂದು ಹೇಳಿಕೆ ನೀಡಿದ್ದರು. (ಸಿನಿಮಾ ಸ್ಪೈಲಲ್ಲಿ ಪಂಚ್ ಕೊಟ್ಟ ಜಗ್ಗೇಶ್)
ತಾನು ನೀಡಿದ ಹೇಳಿಕೆ ಎಂದಿನಂತೆ ವ್ಯಾಪಕ ಟೀಕೆಗೆ ಗುರಿಯಾದ ನಂತರ, ಸಾರ್ವಜನಿಕವಾಗಿ ಈಶ್ವರಪ್ಪ ಒಂದು ದಿನದ ನಂತರ ಕ್ಷಮೆಯಾಚಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಬೆಂಗಳೂರು ಉಸ್ತುವಾರಿ ರಾಮಲಿಂಗ ರೆಡ್ಡಿ ನಸುನಗುತ್ತಲೇ, ಸರಿಯಾಗಿ ತಿರುಗೇಟು ನೀಡಿದ್ದಾರೆ, ಜೊತೆಗೆ ವಿಧಾನಸೌಧದಲ್ಲಿ ಲಿಂಬೆಹಣ್ಣು ಇಟ್ಟಿದ್ದು ಈಶ್ವರಪ್ಪವವರೇ ಎನ್ನುವ ರೀತಿಯಲ್ಲಿ ಮಾತನ್ನಾಡಿದ್ದಾರೆ. ಮುಂದೆ ಓದಿ..
ಹನೂರಿನಲ್ಲಿ ಈಶ್ವರಪ್ಪ
ಚಾಮರಾಜ ನಗರ ಜಿಲ್ಲೆ ಹನೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಚೈತನ್ಯ ಯಾತ್ರೆಯಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ, ರಾಜ್ಯದಲ್ಲಿ 457 ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ರಾಜ್ಯ ಸರ್ಕಾರ ಕೊಲೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಮಹದೇವ ಪ್ರಸಾದ್ ಕೊಲೆಗಡುಕರು ಎಂದು ಗಂಭೀರ ಆರೋಪ ಮಾಡಿದ್ದರು.
ಲಕ್ವಾ ಹೋಡೀಲಾ
ಪ್ರಧಾನಿ ಮೋದಿಯವರನ್ನು ದಿನಕ್ಕೊಮ್ಮೆ ಜಪ ಮಾಡದೇ ಇದ್ದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿದ್ದೆ ಬರೋಲ್ಲಾಂತ ಕಾಣುತ್ತೆ. ಲೋಕಸಭೆ ಚುನಾವಣೆ ವೇಳೆ ಮೋದಿ ಓರ್ವ ನರಹಂತಕ, ಕೊಲೆಗಡುಕ ಎಂದು ಸಿದ್ದು ದೂರಿದ್ದರು. ಇದೀಗ ಮೋದಿ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿಗಳು, ಅವರ ಕುಟುಂಬಕ್ಕೆ ಮತ್ತು ಸಚಿವರಿಗೆ ಲಕ್ವಾ ಹೋಡೀಲಾ ಎಂದು ಈಶ್ವರಪ್ಪ ಅಸಂಬದ್ದ ಹೇಳಿಕೆ ನೀಡಿದ್ದರು.
ಬಂದ್ ವಿಫಲಗೊಳಿಸಲು ಪ್ರಯತ್ನಿಸಿದರು
ರೈತರ ಆತ್ಮಹತ್ಯೆ ಖಂಡಿಸುವ ಸಲುವಾಗಿ ಮತ್ತು ಸರಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘ ಕರೆ ನೀಡಿದ್ದ ಬಂದ್ ಗೆ ಬಿಜೆಪಿ ಬೆಂಬಲ ನೀಡಿತ್ತು. ನಾವು ಬಂದ್ ಗೆ ಬೆಂಬಲ ನೀಡಿದ್ದೇವೆ ಎನ್ನುವ ಕಾರಣಕ್ಕಾಗಿ ಅಧಿಕಾರಿಗಳನ್ನು ಬಳಸಿಕೊಂಡು ಬಂದ್ ವಿಫಲಗೊಳಿಸಲು ಸಿದ್ದು ಸರಕಾರ ಯತ್ನಿಸಿತ್ತು ಎಂದು ಈಶ್ವರಪ್ಪ ಗುಂಡ್ಲುಪೇಟೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕ್ಷಮೆಯಾಚಿಸಿದ ಈಶ್ವರಪ್ಪ
ತನ್ನ ಲಕ್ವಾ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈಶ್ವರಪ್ಪ, ಸಿದ್ದರಾಮಯ್ಯನವರ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ರೈತರಿಗೆ ಆಗುತ್ತಿರುವ ತೊಂದರೆ ನೋಡಿ ವಿಷಾದದಿಂದ ಆ ಮಾತು ಹೇಳಿದ್ದೆ, ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ. ನನ್ನಿಂದ ಈ ರೀತಿಯ ತಪ್ಪು ಆವಾಗಾವಗ ಆಗುತ್ತಲೇ ಇರುತ್ತದೆ. ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ರಾಮಲಿಂಗ ರೆಡ್ಡಿ ಪ್ರತ್ಯುತ್ತರ
ಈಶ್ವರಪ್ಪ ಅವರ ಹೇಳಿಕೆಯನ್ನು ರಾಜ್ಯ ರಾಜಕಾರಣದಲ್ಲಿ ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಈ ಹಿಂದೆ ವಿಧಾನಸೌಧದ ಸೌತ್ ಬ್ಲಾಕಿನಲ್ಲಿ ಲಿಂಬೆಹಣ್ಣು ಇಟ್ಟು ಯಡಿಯೂರಪ್ಪ ಸರಕಾರಕ್ಕೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆಂದು ಗುಲ್ಲೆಬ್ಬೆಸಿದ್ದರು ಎಂದು ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.