ಪಕ್ಷ ಬಿಡುವವರಿಗೆ ಸನ್ಮಾನ ಮಾಡಲು ಮುಂದಾದ ಕುಮಾರಣ್ಣ: ಏನಿದರ ಹಿಂದಿನ ಅಸಲಿಯತ್ತು?
ತನ್ನ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ತಾನು ಸಿಎಂ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದ್ದು ಬಿಜೆಪಿಯವರು. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಟಾರ್ಗೆಟ್ ಮಾಡುತ್ತಿರುವುದು ಕಾಂಗ್ರೆಸ್ ನಾಯಕರನ್ನು.
ಕಳೆದ ಕೆಲವು ತಿಂಗಳ ವಿದ್ಯಮಾನಗಳನ್ನು ಅವಲೋಕಿಸುತ್ತಾ ಬಂದರೆ, ಕುಮಾರಸ್ವಾಮಿ, ಸಮ್ಮಿಶ್ರ ಸರಕಾರ ಪತನಕ್ಕೆ ಕಾಂಗ್ರೆಸ್ಸಿನ ಕೆಲವರು ಕಾರಣ ಎನ್ನುತ್ತಿದ್ದಾರೆಯೇ ಹೊರತು, ಬಿಜೆಪಿಯವರನ್ನು ದೂರುತ್ತಿರುವುದು ಕಮ್ಮಿ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಅಕ್ಷರಸಃ ಕಿಡಿಕಾರುತ್ತಿರುವ ಕುಮಾರಸ್ವಾಮಿ, ಬಿಜೆಪಿಗೆ ಹತ್ತಿರುವಾಗುತ್ತಿದ್ದಾರೆಯೇ ಎನ್ನುವ ಸಂಶಯ ಮೂಡಲು ಕಾರಣ, ಎರಡು ಬಾರಿ ಯಡಿಯೂರಪ್ಪನವರನ್ನು ಕುಮಾರಸ್ವಾಮಿ ಭೇಟಿಯಾಗಿರುವುದು.
ಎರಡು ಕ್ಷೇತ್ರಗಳ ಉಪಚುನಾವಣೆ, ಒಕ್ಕಲಿಗ ರಾಜಕೀಯದ ವಿಚಾರದಲ್ಲಿ ದಿನ ಬೆಳಗಿದ್ದರೆ, ಕುಮಾರಸ್ವಾಮಿ - ಸಿದ್ದರಾಮಯ್ಯ - ಡಿ.ಕೆ.ಶಿವಕುಮಾರ್ ನಡುವೆ ವಾಗ್ಯುದ್ದ ನಡೆಯುತ್ತಿದೆ. ಈ ನಡುವೆ, ತಮ್ಮವರೇ ಪಕ್ಷ ಬಿಡಲು ಮುಂದಾದರೆ, ಅವರಿಗೆ ಸನ್ಮಾನ ಮಾಡಲು ಸಿದ್ದ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿಯ ಈ ಅಗ್ರೇಸ್ಸೀವ್ ರಾಜಕಾರಣದ ಹಿಂದಿನ ಮರ್ಮ ಏನಿರಬಹುದು?

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ
ಕೆಲವು ದಿನಗಳ ಹಿಂದೆ ಮೈಸೂರು ಜಿಲ್ಲಾ ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಜಿಟಿಡಿ ಮತ್ತು ಕುಮಾರಸ್ವಾಮಿ ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವುದು ಗೊತ್ತಿರುವ ವಿಷಯ. ಈ ವಿಚಾರದಲ್ಲಿ ಪರೋಕ್ಷವಾಗಿ ಎಚ್ಡಿಕೆ ಮಾತಾಡಿದ್ದು ಹೀಗೆ..

ಜಿಟಿಡಿ, ಕುಮಾರಸ್ವಾಮಿ ಹಳಸಿದ ಸಂಬಂಧ
"ಈ ಹಿಂದೆ ಮೂವರು ಪಕ್ಷ ಬಿಟ್ಟು ಹೋದಾಗ, ಜೆಡಿಎಸ್ ಕಥೆ ಮುಗಿಯಿತು ಎಂದವರಿದ್ದಾರೆ. ಆದರೆ, ನಮ್ಮ ಪಕ್ಷ ಮುಳುಗಿತಾ" ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, "ಯಾರು ಪಕ್ಷ ಬಿಡುವವರಿದ್ದರೂ ಬಿಡಲಿ, ನಾನೇ ಅವರಿಗೆ ಮೈಸೂರು ಪೇಟ ತೊಡಿಸಿ, ಹೂಹಾರ ಹಾಕಿ, ಸನ್ಮಾನ ಮಾಡಿ ಕಳುಹಿಸಿ ಕೊಡುತ್ತೇನೆ"ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರನ್ನು ಉಲ್ಲೇಖಿಸಿ ಹೇಳಿದರು.

ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ
ಇತ್ತೀಚಿನ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ದ, ಅದರಲ್ಲೂ ಸಿದ್ದರಾಮಯ್ಯನವರ ವಿರುದ್ದ ಒಂದೇ ಸಮನೆ ತಿರುಗಿ ಬೀಳುತ್ತಿದ್ದಾರೆ. ಬಿಎಸ್ವೈ ಆಡಳಿತ ಶೈಲಿಯಲ್ಲಿ ಹಲವು ಹುಳುಕುಗಳಿದ್ದರೂ, ಸರಕಾರವನ್ನು ಅಷ್ಟಾಗಿ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿಲ್ಲ. ಕಾಂಗ್ರೆಸ್ ಅನ್ನು ಸಿದ್ದರಾಮಯ್ಯನವರೇ ಮುಳುಗಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
Recommended Video

ಎಚ್ಡಿಕೆ, ಬಿಎಸ್ವೈ ಅವರನ್ನು ಎರಡೆರಡು ಬಾರಿ ಭೇಟಿಯಾಗಿದ್ದರು
ಜೆಡಿಎಸ್ ಶಾಸಕರು ಕ್ಷೇತ್ರಾನುದಾನದ ವಿಚಾರದಲ್ಲಿ ಕುಮಾರಸ್ವಾಮಿ ಜೊತೆ ಅಸಮಾಧಾನವನ್ನು ಹೊಂದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಕಾರಣಕ್ಕಾಗಿಯೋ ಏನೋ, ಎಚ್ಡಿಕೆ, ಬಿಎಸ್ವೈ ಅವರನ್ನು ಎರಡೆರಡು ಬಾರಿ ಭೇಟಿಯಾಗಿದ್ದರು. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ಮುನ್ನ, ಮೋದಿಯೇ ಆಫರ್ ನೀಡಿದ್ದರು ಎನ್ನುವುದನ್ನೂ ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿಯವರ ಸದ್ಯದ ಅಗ್ರೆಸ್ಸೀವ್ ರಾಜಕಾರಣ ನೋಡುತ್ತಿದ್ದರೆ, ಅವರು ಬಿಜೆಪಿಗೆ ಹತ್ತಿರುವಾಗುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.












Click it and Unblock the Notifications