ಬಿಜೆಪಿ ಭ್ರಷ್ಟಾಚಾರ: '10-15 ಪರಪ್ಪನ ಅಗ್ರಹಾರ ಜೈಲುಗಳು ಬೇಕು'
ಬೆಂಗಳೂರು, ಆಗಸ್ಟ್ 25: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರಕಾರ ಇದ್ದಾಗ ಭೂ ವ್ಯವಹಾರಗಳಲ್ಲಿ ಅಕ್ರಮ ನಡೆದು ಸ್ವತಃ ಕೈಗಾರಿಕಾ ಸಚಿವರೇ ಜೈಲಿಗೆ ಹೋದರು. ಅದರೂ ಬಿಜೆಪಿ ಪಾಠ ಕಲಿತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೃಷಿ ಭೂಮಿಯನ್ನು ಸರಕಾರ ನಿರ್ದಯವಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಕುಮಾರಸ್ವಾಮಿ ಮಾಧ್ಯಮಗಳ ಜತೆ ಮಾತನಾಡಿದರು.
"ಅಷ್ಟೆಲ್ಲಾ ಆದರೂ ಕೂಡ ಬಿಜೆಪಿಗೆ ಇನ್ನೂ ಬುದ್ದಿ ಬಂದಿಲ್ಲ. ಈಗಿನ ಕೈಗಾರಿಕಾ ಸಚಿವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ಇದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದು ಮುರುಗೇಶ್ ನಿರಾಣಿ ಮಾಡುತ್ತಿರುವ ಘನಂದಾರಿ ಕೆಲಸ. ಇವರ ದೃಷ್ಟಿಯಲ್ಲಿ ರೈತರು ಬದುಕುವ ಹಾಗೆಯೇ ಇಲ್ಲ. ಬೆಂಗಳೂರಿನಲ್ಲಿಯೂ ಬದಕಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ" ಎಂದು ಕುಮಾರಸ್ವಾಮಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.
"ಕೇವಲ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಕೈಗಾರಿಕೆ ಬರಬೇಕು ಎಂಬ ಚಿಂತನೆ ಬಿಡಿ, ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಬೇಕೆ ವಿನಾ ಫಲವತ್ತಾದ ಜಮೀನನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ" ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧವೂ ಹರಿಹಾಯ್ದ ಮಾಜಿ ಮುಖ್ಯಮಂತ್ರಿಗಳು; "ರೈತರ ಆಕ್ರೋಶಕ್ಕೆ ಒಳಗಾಗುವ ನಡವಳಿಕೆ ಒಳ್ಳೆಯದಲ್ಲ. ಎಷ್ಟು ದಿನ ನಿಮ್ಮ ದಬ್ಬಾಳಿಕೆ ನಡೆಯಲಿದೆ? ಅಧಿಕಾರ ಶಾಶ್ವತ ಅಲ್ಲ. ಯಾರೇ ಮಂತ್ರಿ ಇರಲಿ, ಅಧಿಕಾರ ದುರಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಇದಕ್ಕೆಲ್ಲ ಮುಂದೆ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ" ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಸಿಸೋಡಿಯಾ ಅವರನ್ನು ಹಿಡಿಯಲು ಹೊರಟಿದ್ದಾರೆ
"ರಾಜ್ಯದಲ್ಲಿ ಅಕ್ರಮ, ಅನ್ಯಾಯಗಳು ಎಷ್ಟು ಮೇರೆ ಮೀರಿವೆ ಎಂದರೆ, ತಪ್ಪಿತಸ್ಥರಿಗೆ ಒಂದು ಪರಪ್ಪನ ಆಗ್ರಹಾರ ಜೈಲು ಸಾಲುವುದಿಲ್ಲ. ಈಗಿನ ಭ್ರಷ್ಟಾಚಾರ ನೋಡಿದರೆ 10-15 ಪರಪ್ಪನ ಅಗ್ರಹಾರ ಜೈಲುಗಳು ಬೇಕು. ಇಷ್ಟೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇಟ್ಟುಕೊಂಡು ಪಾಪ.. ಸಿಸೋಡಿಯಾ ಅವರನ್ನು ಹಿಡಿಯಲು ಹೊರಟಿದ್ದಾರೆ. ಅಬಕಾರಿ ನೀತಿಯಲ್ಲಿ ಒಂದು ಕೋಟಿ ವರ್ಗಾವಣೆ ಆಗಿದೆ ಅಂತ ಆರೋಪ ಮಾಡಿ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ" ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲು ಎರಡು ವರ್ಷದ ಸಂಬಳ
"ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಕೇಂದ್ರ ಸರಕಾರ ಏನು ಮಾಡುತ್ತಿದೆ? ಕರ್ನಾಟಕದಲ್ಲಿ ಏನೇನು ನಡಿತಿದೆ ಎನ್ನುವುದಕ್ಕೆ ಲಕ್ಷಾಂತರ ಕೇಸ್ʼಗಳನ್ನು ಕೊಡಬಹುದು. ಕರ್ನಾಟಕದಲ್ಲಿ ನಡಿಯುತ್ತಿರುವ ಅಕ್ರಮಗಳು ಜಾರಿ ನಿರ್ದೇಶನಲಾಯಕ್ಕೆ ಗೊತ್ತಿಲ್ವಾ? ಐಟಿಯವರಿಗೆ ಗೊತ್ತಿಲ್ವಾ? ಕೇಂದ್ರದ ಗೃಹ ಇಲಾಖೆಗೆ ಮಾಹಿತಿ ಇಲ್ಲವಾ? ಲೆಕ್ಕ ಹಾಕುತ್ತಾ ಹೋದರೆ ಎಲ್ಲ ದಾಖಲೆಗಳನ್ನು ಸರಿಗಟ್ಟಬಹುದು. ಬೌರಿಂಗ್ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲು ಎರಡು ವರ್ಷದ ಸಂಬಳವನ್ನು ಲಂಚವಾಗಿ ಕೊಡಿ ಎಂದು ಕೇಳುತ್ತಿದ್ದಾರೆ. ಇದೆಲ್ಲರ ಬಗ್ಗೆ ಕೇಂದ್ರ ಸರಕಾರಕ್ಕೆ ಗೊತ್ತಿಲ್ಲವೆ" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರ 40% ಕಮೀಷನ್ ಆರೋಪ
ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರ 40% ಕಮೀಷನ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿಗಳು; "40% ಕಮೀಷನ್ ವಿಚಾರ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಇದು ಈ ಸರಕಾರದ ಹಣೆಬರಹ. ಲಂಚ ಇಲ್ಲದೆ ಅಧಿಕಾರಿಗಳು ಯಾರು ಬರುವ ಹಾಗೆಯೇ ಇಲ್ಲ. ನಾನು ಸಿಎಂ ಆಗಿದ್ದಾಗ ಯಲಹಂಕ ತಹಶೀಲ್ದಾರ್ ಆಗಲು ಯಾರೋ ಒಬ್ಬರು ಒಂದೂವರೆ ಕೋಟಿ ರೂ. ಲಂಚ ಕೊಡಲು ಬಂದಿದ್ದರು. ಉಗಿದು ಕಳಿಸಿದ್ದೆ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications