ಕೋವಿಡ್ ಕುರಿತು ಆತಂಕವೇ: ಇಲ್ಲಿದೆ ಅಧಿಕೃತ ಮಾಹಿತಿ
ಬೆಂಗಳೂರು, ಆ.15: ಕೊರೊನಾ ವೈರಸ್ ಕುರಿತಂತೆ ನೈಜ ಸಂಗತಿಗಳಿಗಿಂತ ಸುಳ್ಳು ವದಂತಿಗಳೇ ಹೆಚ್ಚು ಹರಿದಾಡುತ್ತಿವೆ. ಹೀಗಾಗಿ ಕೊರೊನಾ ವೈರಸ್ಗಿಂತ ಅದರ ಕುರಿತಾಗಿ ಹರಡುತ್ತಿರುವ ಸುಳ್ಳು ವದಂತಿಗಳಿಂದಲೇ ಜನ ಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಕುರಿತಾದ ಅನಗತ್ಯ ಭಯದ ಕಾರಣಕ್ಕೆ ಕೋವಿಡ್ ರೋಗ ಲಕ್ಷಣಗಳಿಲ್ಲದವರು ಆತಂಕಕ್ಕೀಡಾಗಿ ಮೃತಪಟ್ಟಿರುವ ಸಾಕಷ್ಟು ಘಟನೆಗಳು ಸಂಭವಿಸಿವೆ.
Recommended Video
ಕೋವಿಡ್ ಪಾಸಿಟಿವ್ ಬಂದಿದೆ ಎಂದಾಕ್ಷಣ ಹೆದರಿ ಆತ್ಮಹತ್ಯೆಗೆ ಶರಣಾದವರು ಹೆಚ್ಚು. ಕೋವಿಡ್-19 ಮಾರಣಾಂತಿಕ ವೈರಸ್ ಅಲ್ಲ ಎಂದು ತಜ್ಞರು ಪದೇ ಪದೇ ಹೇಳುತ್ತಿದ್ದರೂ ಜನರಲ್ಲಿನ ಭಯ ಮಾತ್ರ ಕಡಿಮೆಯಾಗುತ್ತಿಲ್ಲ. ಕೋವಿಡ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು ಜನರಲ್ಲಿನ ಆತಂಕ ಹೆಚ್ಚಾಗಲು ಮತ್ತೊಂದು ಕಾರಣ. ಬಳ್ಳಾರಿಯಲ್ಲಿ ಅನಾಗರಿಕವಾಗಿ ಕೋವಿಡ್ ಸೋಂಕಿತರ ಸಾಮೂಹಿಕ ಅಂತ್ಯಸಂಸ್ಕಾರದ ವಿಡಿಯೋ ಬಂದಾಗಿನಿಂದಂತೂ ಜನರಲ್ಲಿ ಸಮೂಹ ಸನ್ನಿಯಂತೆ ಕೋವಿಡ್ ಕುರಿತಾಗಿ ಆತಂಕ ಕಾಣಿಸಿಕೊಂಡಿದೆ. ಕೊರೊನಾ ವೈರಸ್ ಬಗ್ಗೆ ನೈಜ ಸಂಗತಿಗಳನ್ನು ಜನರೇ ಖುದ್ದಾಗಿ ಇದೀಗ ತಮ್ಮ ಬೆರಳ ತುದಿಯಲ್ಲಿ ಕಂಡುಕೊಳ್ಳಬಹುದು. ಯಾವುದು ಸತ್ಯ? ಯಾವುದು ವದಂತಿ ಎಂಬುದನ್ನು ನಿರ್ಧಾರ ಮಾಡಬಹುದು. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ!
ಈರುಳ್ಳಿಯಿಂದ ಹೊಸ ವೈರಸ್: ಅಮೆರಿಕ,ಕೆನಡಾದಲ್ಲಿ ಈರುಳ್ಳಿ ಬ್ಯಾನ್
ರಾಜ್ಯದಲ್ಲಿ ಸೋಂಕಿತರು
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದೆ. ಆದರೂ ಆತಂಕ ಬೇಡ. ಯಾಕೆಂದರೆ ಸೋಂಕು ಈಗಾಗಲೇ ಸಮುದಾಯಕ್ಕೆ ಹರಡಿ ಆಗಿದೆ. ಈಗೇನಿದ್ದರೂ ಕೋವಿಡ್ ವೈರಸ್ ಎದುರಿಸಿ ಬದುಕಬೇಕು. ಮುಂದುವರೆದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಅತ್ಯಂತ ಪ್ರಬಲವಾಗಿದೆ. ಹೀಗಾಗಿ ಅಮೆರಿಕ, ಬ್ರೆಜಿಲ್, ಇಟಲಿ ಮುಂತಾದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಮರಣ ಪ್ರಮಾಣ ತೀರಾ ಕಡಿಮೆಯಿದೆ. ಹೀಗಾಗಿ ಅನಗತ್ಯ ಆತಂಕ ಪಟ್ಟರೆ ಮಾತ್ರ ಕೋವಿಡ್ ಸೋಂಕು ಮಾರಣಾಂತಿಕವಾಗಲಿದೆ.
ಸದ್ಯ ನಮ್ಮ ರಾಜ್ಯದಲ್ಲಿ ಈವರೆಗೆ ಒಟ್ಟು 2,11,108 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ 1,28,182 ಸೋಂಕಿತರು ಗುಣಮುಖರಾಗಿದ್ದಾರೆ. ಜೊತೆಗೆ ಇನ್ನೂ 79,201 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಈವರೆಗೆ ಒಟ್ಟು 3,717 ಜನರು ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ.
ಕೋವಿಡ್ ಬಗ್ಗೆ ವದಂತಿಗಳು
ಕೊರೊನಾ ವೈರಸ್ ಕಾಲದಲ್ಲಿ ವೈರಸ್ಗಿಂತ ವೇಗವಾಗಿ ವದಂತಿಗಳು ಹರಡುತ್ತಿವೆ. ಕೊರೊನಾ ವೈರಸ್ ಹೇಗೆ ಹರಡುತ್ತಿದೆ ಎಂಬುದರಿಂದ ಶುರುವಾಗಿ, ಅದು ಒಂದು ಸಮುದಾಯಕ್ಕೆ ಅಂಟಿದ ಶಾಪ ಎಂಬಂತೆ ಆರಂಭದಲ್ಲಿ ಬಿಂಬಿಸಲಾಗಿತ್ತು. ಅದರಿಂದಾದ ಸಾಮಾಜಿಕ ಸಮಸ್ಯೆಗಳು ಒಂದೆರಡಲ್ಲ. ಚೀನಾದಿಂದ ಆಮದು ಆದ ವೈರಸ್ಗೆ ಬಲಿಯಾಗಿದ್ದು ನಮ್ಮ ದೇಶದ ಸಾಮಾಜಿಕ ಸಹಬಾಳ್ವೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಹೀಗಾಗಿ ಅಂತಹ ವದಂತಿಗಳಿಗೆ ಇತಿಶ್ರೀ ಹಾಡಲು ಸರ್ಕಾರ ಅಧಿಕೃತ ಜಾಲತಾಣ ತೆರೆದಿದೆ. ಸರ್ಕಾರದ ಜಾಲತಾಣಕ್ಕೆ ಭೇಟಿ ಕೊಟ್ಟರೆ, ಸರ್ಕಾರದ ಮಾರ್ಗಸೂಚಿಗಳಿಂದ ಚಿಕಿತ್ಸಾ ಕೇಂದ್ರಗಳವರೆಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಜೊತೆಗೆ ಕೋವಿಡ್ ಕುರಿತು ಹರಡಿರುವ ವದಂತಿಗಳ ಬಗ್ಗೆ ಸಂಪೂರ್ಣ ಸತ್ಯ ಮಾಹಿತಿ ಸಿಗುತ್ತದೆ.
ಸರ್ಕಾರಿ ಜಾಲತಾಣ
ಕೋವಿಡ್ ಕುರಿತ ಎಲ್ಲಾ ಅಧಿಕೃತ ಮಾಹಿತಿಗಾಗಿ covid19.karnataka.gov.in ಸರ್ಕಾರಿ ಜಾಲತಾಣವನ್ನು ಸಂದರ್ಶಿಸಿ ಎಂದು ಯೋಜನಾ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಕೋವಿಡ್-19 ರ ತಪಾಸಣಾ ವ್ಯವಸ್ಥೆಯ ಮುಖ್ಯಸ್ಥೆ ಡಾ. ಶಾಲಿನಿ ರಜನೀಶ್ ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ಕುರಿತು ಹಲವು ವದಂತಿಗಳು ಹಾಗೂ ಸುಳ್ಳು ಸುದ್ದಿಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿಯ ಸತ್ಯಾಸತ್ಯತೆಯನ್ನು ಈ ಜಾಲತಾಣ ಸಂದರ್ಶಿಸಿ ಸುದ್ದಿ ನಿಖರತೆಯನ್ನು ಖಾತರಿಪಡಿಸಿಕೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹಣ ಸುಲಿಗೆ ಇಲ್ಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಾಲಿಕೆಯು ಕೆಲವು ಖಾಸಗಿ ಸಂಸ್ಥೆಗಳ ಜೊತೆಗೂಡಿ ಕೋವಿಡ್-19 ಹೆಸರಿನಲ್ಲಿ ಆರೋಗ್ಯ ಪರೀಕ್ಷೆಗಳನ್ನು ನಡೆಸುತ್ತಿವೆ. ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳನ್ನು ಡಾ ಶಾಲಿನಿ ರಜನೀಶ್ ಅಲ್ಲಗಳೆದಿದ್ದಾರೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಬಹುತೇಕ ಕೋವಿಡ್-19 ಸಂಬಂಧಿತ ತಪಾಸಣೆಗಳು ಹಾಗೂ ಪರೀಕ್ಷೆಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸುತ್ತಿವೆ. ಈ ಸಂಸ್ಥೆಗಳು ನಡೆಸುತ್ತಿರುವ ಪರೀಕ್ಷಾ ವರದಿಗಳು ಅತ್ಯಂತ ವಿಶ್ವಾಸಾರ್ಹವಾಗಿವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯದ ಚಿಕಿತ್ಸಾ ಕೇಂದ್ರಗಳು
ಕೊರೊನಾ ವೈರಸ್ ಚಿಕಿತ್ಸೆಗೆ ಆಸ್ಪತ್ರೆಗಳಿಲ್ಲ, ಆಸ್ಪತ್ರೆಗಳಿದ್ದರೆ ಬೆಡ್ ಸಿಗುವುದಿಲ್ಲ ಎಂಬುದು ಪ್ರತಿನಿತ್ಯದ ಆರೋಪ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿದ್ದುದಕ್ಕೆ ಹಲವು ಜನರ ಪ್ರಾಣ ಹೋಗಿದೆ.
ಹೀಗಾಗಿ ರೋಗ ಲಕ್ಷಣಗಳು ಕಂಡಕೂಡಲೇ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಏನು ಎಂಬುದು ಸೇರಿದಂತೆ ರಾಜ್ಯಾದ್ಯಂತ ಇರುವ ಕೋವಿಡ್ ಚಿಕಿತ್ಸಾ ಕೇಂದ್ರಗಳ ಸಂಪೂರ್ಣ ವಿವರ ಈ ಜಾಲತಾಣದಲ್ಲಿ ಸಿಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುವ ವದಂತಿಗಳ ಬದಲಾಗಿ, ಸರ್ಕಾರದಿಂದ ಬಿಡುಗಡೆ ಮಾಡಲಾಗುವ ಅಧಿಕೃತ ಮಾಹಿತಿ ಪಡೆಯಲು ಸರ್ಕಾರ ವಿನಂತಿಸಿದೆ.