ಬಚ್ಚಲುಬಾಯಿ ಶಾಸಕ ಈಶ್ವರಪ್ಪ ಮನೆಯಲ್ಲಿ ನೋಟ್ ಪ್ರಿಂಟ್ ಮೆಷಿನ್ ಇತ್ತು: ಕಾಂಗ್ರೆಸ್ ಘರ್ಜನೆ
ಬೆಂಗಳೂರು, ಆ 14: 'ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ' ಎನ್ನುವ ಮುಖ್ಯಮಂತ್ರಿ ಹೇಳಿಕೆಯ ವಿರುದ್ದ ಕಾಂಗ್ರೆಸ್ ತಿರುಗಿ ಬಿದ್ದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ಸಿನ ಮುಖಂಡರು ಸಾಲುಸಾಲು ಟ್ವೀಟ್ ಮಾಡುತ್ತಿದ್ದಾರೆ.
ಕೆಪಿಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಡಿರುವ ಟ್ವೀಟ್ ಹೀಗಿದೆ, " ನೋಟು ಪ್ರಿಂಟ್ ಮಾಡುವ ಮಿಷಿನ್ ಇಲ್ಲವೆಂದು ಹೇಳುತ್ತಿರುವ @BSYBJP ನವರೇ ನಿಮ್ಮ ಪಕ್ಷದ ಬಚ್ಚಲು ಬಾಯಿ ಶಾಸಕ @ikseshwarappa ನವರ ಮನೆಯಲ್ಲೊಮ್ಮೆ ನೋಟು ಎಣಿಸುವ ಯಂತ್ರಗಳು ಸಿಕ್ಕಿದ್ದವು. ನೀವು ಕ್ಯಾಶ್ ಲೆಸ್ ಆಗಿ ಚೆಕ್ ಮೂಲಕ ಲಂಚ ತೆಗೆದುಕೊಳ್ಳುವ ಭ್ರಷ್ಟರು, ನಿಮ್ಮ ತಂಡದವರೆಲ್ಲರೂ ನೋಟು ಎಣಿಸುವ ಮಷಿನ್ ಇಡುವಂತಹ ಭ್ರಷ್ಟರು!".
ಇನ್ನೊಂದು ಟ್ವೀಟ್ ಹೀಗಿದೆ, " ಏಕವ್ಯಕ್ತಿ ಸರ್ಕಾರದ ಸಿಎಂ @BSYBJP ನವರೆ, ಜನವಿರೋಧಿ ಸರ್ವಾಧಿಕಾರಿಯ ರೀತಿ ತಾವು ವರ್ತಿಸುವುದು ಸರಿಯಲ್ಲ. ಜನತೆ ಕೊಡುವ ತೆರಿಗೆ ದುಡ್ಡಿನಿಂದ ನೆರೆ ಪರಿಹಾರ ಕೊಡುವುದು, ನಿಮ್ಮ ಸ್ವಂತ ಆಸ್ತಿಯಿಂದಲ್ಲ; ಕರ್ತವ್ಯ& ಜವಾಬ್ದಾರಿಯನ್ನು ಮರೆಯದಿರಿ. ನಿಮ್ಮ ಸಂವೇದನಾಹೀನ ಅಮಾನವೀಯ ನಡೆ ನುಡಿ ಸಂಕಷ್ಟದಲ್ಲಿರುವ ಸಂತ್ರಸ್ತರ ಆತಂಕವನ್ನು ಹೆಚ್ಚಿಸಿದೆ".

"ಉಳಿದ ತೀರ್ಮಾನಗಳನ್ನು ವೇಗವಾಗಿ ಕೈಗೊಳ್ಳುವ ಸರ್ಕಾರ, ನೆರೆ ಪರಿಹಾರದಲ್ಲಿ ವಿಳಂಬ ಮಾಡೋದು ಯಾಕೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಟ್ವೀಟ್ ಮೂಲಕ ಯಡಿಯೂರಪ್ಪ ಸರಕಾರವನ್ನು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರ ಹೇಳಿಕೆಯ ವಿರುದ್ದ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಸಂತ್ರಸ್ತರ ಪರಿಹಾರಕ್ಕೆ ನೋಟ್ ಪ್ರಿಂಟಿಂಗ್ ಮೆಷಿನ್ ಇಲ್ಲ ಎನ್ನುವ ಮುಖ್ಯಮಂತ್ರಿಗಳಿಗೆ, ಅತೃಪ್ತ ಶಾಸಕರಿಗೆ ಕೊಡಲು ಅಕ್ಷಯಪಾತ್ರೆ ಫಂಡ್ ಇದೆ" ಎಂದು ವ್ಯಂಗ್ಯವಾಡಿದ್ದಾರೆ.
'ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10 ದಿನ ಸಮಯ ತೆಗೆದುಕೊಂಡು ನಿಖರ ವರದಿ ನೀಡಿ' ಎಂದು ಯಡಿಯೂರಪ್ಪ ಶಿವಮೊಗ್ಗದಲ್ಲಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದರು.












Click it and Unblock the Notifications