ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ: ಸರ್ಕಾರಿ ವೈದ್ಯರಿಗೆ ರಜೆ ಇಲ್ಲ
ಬೆಂಗಳೂರು, ಆಗಸ್ಟ್ 8: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರಿಗೆ ಸಾರ್ವತ್ರಿಕ ರಜೆ ರದ್ದುಗೊಳಿಸಲಾಗಿದೆ.
ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಗದಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಬೀದರ್, ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ , ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ನೆರೆ ಹಾವಳಿ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುವ ವರೆಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವವರೆಗೆ ಅಧಿಕಾರಿ/ಸಿಬ್ಬಂದಿಗಳಿಗೆ ಆಗಸ್ಟ್ 9, 10,11,12 ಹಾಗೂ 15ನೇ ಆಗಸ್ಟ್ ನಿರ್ಬಂಧಿತ ರಜೆ/ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಬಾರದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ಹವಾಮಾನ ವರದಿ: ಬೆಂಗಳೂರಲ್ಲಿ ಮತ್ತೆರೆಡು ದಿನ ಮಳೆ
ಬೆಳಗಾವಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಪ್ರವಾಹಕ್ಕೆ ಇದುವರೆಗೆ 6 ಜನರು ಬಲಿಯಾಗಿದ್ದಾರೆ. 40 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಇದುವರೆಗೆ ಅಂಕಲಗಿ, ಕಬಲಾಪುರ, ಹುಣಶ್ಯಾಳ, ಪಿವೈ ಸೇರಿದಂತೆ ಹಲವೆಡೆ ಜನರು ಸಿಲುಕಿದ್ದಾರೆ.
ಳಗಾವಿ ಮಹಾನಗರವನ್ನು ಕುಂಭದ್ರೋಣ ಮಳೆ ಬಹುತೇಕ ನೀರಿನಲ್ಲಿ ಮುಳುಗಿಸಿದ್ದು, ಜನಜೀವನ ಅಪಾಯಕ್ಕೆ ಸಿಲುಕಿದೆ. ತಗ್ಗು ಪ್ರದೇಶ ಮತ್ತು ನೀರು ಆವರಿಸಿರುವ ಬಡಾವಣೆಗಳ ಜನರ ರಕ್ಷಣೆಗೆ ರಬ್ಬರ್ ಬೋಟ್ಗಳನ್ನು ಬಳಸಲಾಗುತ್ತಿದೆ.
ಶಿವಾಜಿನಗರ, ವೀರಭದ್ರನಗರ, ಶಾಸ್ತ್ರಿ ನಗರ, ಜಕ್ಕೇರಿ ಹೊಂಡ ಪ್ರದೇಶದಲ್ಲಿ ಬೋಟ್ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಅಭಯ ಪಾಟೀಲ ತಂಡದೊಂದಿಗೆ ತ್ವರಿತಗತಿಯ ಕಾರ್ಯಾಚರಣೆಗೆ ಇಳಿದಿದ್ದಾರೆ.