ಕೇಂದ್ರದಿಂದ ಪ್ರವಾಹ ಪರಿಹಾರ; ತೇಪೆ ಹಚ್ಚಿದ ರಾಜ್ಯ ಬಿಜೆಪಿ ಘಟಕ
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರಾಜ್ಯ ಬಿಜೆಪಿ ಘಟಕ ಈ ಚರ್ಚೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದು, ಫೇಸ್ ಬುಕ್ ಪೋಸ್ಟ್ವೊಂದನ್ನು ಹಾಕಿದೆ.
ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ (ಎನ್ಡಿಆರ್ಎಫ್) ನಿಯಮಾವಳಿ ಅನ್ವಯ 3500 ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ.
ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ. ಕೆಲವು ಸ್ಪಷ್ಟೀಕರಣಗಳನ್ನು ಸಚಿವಾಲಯ ಕೇಳಿದ್ದು, ಪರಿಹಾರ ಯಾವಾಗ ಬರಲಿದೆ? ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ.
ರಾಜ್ಯ ಬಿಜೆಪಿ ಘಟಕ "ಕರ್ನಾಟಕವನ್ನು ಮೋದಿ ಗೌರವಿಸುತ್ತಾರೆ. ಅತಿ ಶೀಘ್ರದಲ್ಲಿ ಕೇಂದ್ರದಿಂದ ಇನ್ನೂ ಹೆಚ್ಚಿನ ಸಹಾಯ ಸಿಗಲಿದೆ" ಎಂದು ಫೇಸ್ಬುಕ್ ಪೋಸ್ಟ್ ಹಾಕಿದೆ. ಇದರಲ್ಲಿಯೂ ಸಹ ಜನರು ಬಂದು ಕಮೆಂಟ್ ಮೂಲಕ ಪರಿಹಾರ ಸಿಕ್ಕಿಲ್ಲ ಎಂದು ದೂರು ಹೇಳುತ್ತಿದ್ದಾರೆ.

ರಾಜ್ಯಕ್ಕೆ ಕೇಂದ್ರದ ಸ್ಪಂದನೆ
ಬಿಜೆಪಿ ಕರ್ನಾಟಕ ಫೇಸ್ ಬು ಕ್ ಪೋಸ್ಟ್ ಹಾಕಿದ್ದು, ಕೇಂದ್ರ ಸರ್ಕಾರದಿಂದ ರೂ. 3800 ಮತ್ತು ರಾಜ್ಯ ಸರ್ಕಾರದಿಂದ ರೂ. 6200 ಒಟ್ಟು 10 ಸಾವಿರ ರೂ. ನೀಡುವ ವ್ಯವಸ್ಥೆ ಆಗಿದೆ ಎಂದು ಹೇಳಿದೆ.

ಪರಿಹಾರ ಸಿಕ್ಕಿಲ್ಲ
ನಾನು ಗದಗ ಜಿಲ್ಲೆ ಶಿರಹಟ್ಟಿ ತಾಲೂಕ ಮಜ್ಜುರ ಗ್ರಾಮದಿಂದ, ಮಳೆಯಿಂದ ನಮ್ಮ ಮನೆ ಬಿದ್ದು ಹೋಗಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ 1 ತಿಂಗಳ ಮೇಲಾಯ್ತು ನಮಗಂತೂ ಈವರೆಗೆ 1ರೂಪಾಯಿ ಪರಿಹಾರ ಕೂಡ ಸಿಕ್ಕಿಲ್ಲ ಎಂದು ಪೋಸ್ಟ್ಗೆ ಅಕ್ಷಯ್ ಕುಲಕರ್ಣಿ ಎಂಬುವವರು ಕಮೆಂಟ್ ಮಾಡಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿವರ ನೀಡುವಂತೆ ಅಲ್ಲಿಯೇ ರಿಪ್ಲೆ ಮಾಡಿದ್ದಾರೆ.

ಸಂಸದರ ಪ್ರತಿಕ್ರಿಯೆ
ಪರಿಹಾರ ವಿಚಾರದಲ್ಲಿ ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅಕ್ಷಯ್ ಕುಲಕರ್ಣಿ ಅವರ ಕಮೆಂಟ್ಗೆ ರಿಪ್ಲೆ ಮಾಡಿದ್ದಾರೆ. ನಿಮ್ಮ ಅರ್ಜಿಯ ಫೋಟೋ ಕಾಪಿ, ಗ್ರಾಮ ಲೆಕ್ಕಿಗ, ತಹಶಿಲ್ದಾರ್ ನಂಬರ್ ನೀಡಿದ ಎಂದು ಕಮೆಂಟ್ ಮಾಡಿದ್ದಾರೆ.

ಜನರ ಪ್ರತಿಕ್ರಿಯೆ
ಬಿಜೆಪಿ ಕರ್ನಾಟಕದ ಅಧಿಕೃತ ಖಾತೆಯಲ್ಲಿಯೆ ಹಲವರು ಕಮೆಂಟ್ಗಳನ್ನು ಹಾಕುತ್ತಿದ್ದು ಮೊದಲು ಪೂರ್ಣ ಪ್ರಮಾಣದ ಪರಿಹಾರ ಒದಗಿಸಿ ಎಂದು ಒತ್ತಾಯಿಸುತ್ತಿದ್ದಾರೆ.












Click it and Unblock the Notifications