ಜಾಲತಾಣಗಳಲ್ಲಿ ನಿರಾತಂಕವಾಗಿ ಧ್ವಜ ಪ್ರದರ್ಶಿಸಿ
ಬೆಂಗಳೂರು, ಆ. 14 : ರಾಷ್ಟ್ರೀಯ ಹಬ್ಬಗಳು ಎದುರಾದಾಗ ವಿವಿಧ ಬಗೆಯಲ್ಲಿ ದೇಶಪ್ರೇಮ ವ್ಯಕ್ತಪಡಿಸುವುದು ಸಾಮಾನ್ಯ. ಅಂತೆಯೇ ಫೇಸ್ ಬುಕ್ ಅಥವಾ ವಾಟ್ಸಾಪ್ ಖಾತೆಗಳ ಪ್ರೊಫೈಲ್ ಚಿತ್ರವನ್ನಾಗಿ ಭಾರತದ ತ್ರಿವರ್ಣ ಧ್ವಜ ಬಳಸಿದ್ದೀರಾ? ಒಂದು ವೇಳೆ ಬಳಸಿದ್ದರೆ 'ಇದು ಕಾನೂನು ಬಾಹಿರ, ಮೊದಲು ಪ್ರೊಫೈಲ್ ಚಿತ್ರ ಬದಲಾಯಿಸಿ' ಎಂಬ ಮೇಸೇಜ್ ಸ್ನೇಹಿತರಿಂದ ಬಂದಿದೆಯೇ? ಹಾಗಾದರೆ ತಲೆಕೆಡಿಸಿಕೊಳ್ಳಬೇಡಿ.
ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಲು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಿಂದಿರುವವರು ಹಿಂದೆ ಬಿದ್ದಿಲ್ಲ. ಅನೇಕರು ಫೇಸ್ ಬುಕ್ ಮತ್ತು ವಾಟ್ಸಾಪ್ ಖಾತೆಗಳ ಪ್ರೊಫೈಲ್ ಚಿತ್ರವನ್ನಾಗಿ ಭಾರತದ ತ್ರಿವರ್ಣ ಧ್ವಜ ಬಳಸಿದ್ದಾರೆ. ಸಾಮಾಜಿಕ ಜಾಲತಾಣದ ಗುಂಪಿನ ಚಿತ್ರವನ್ನಾಗಿಯೂ ಬಳಸಲಾಗಿದೆ. ತ್ರಿವರ್ಣ ಧ್ವಜದ ಚಿತ್ರವನ್ನು ಈ ರೀತಿ ಬಳಸುವುದು ಸರಿಯೋ ತಪ್ಪೋ ಎಂಬ ಗೊಂದಲಗಳನ್ನು ಇಂದೋರ್ ಹೈಕೋರ್ಟ್ ವಕೀಲರೊಬ್ಬರು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
ಇಂದೋರ್ ಹೈಕೋರ್ಟ್ ವಕೀಲ ರಾಘವೇಂದ್ರ ಸಿಂಗ್ ರಘುಸ್ವಾಮಿ "ರಾಷ್ಟ್ರ ಗೌರವಕ್ಕೆ ಧಕ್ಕೆಯಾಗದಂತೆ ತ್ರಿವರ್ಣ ಧ್ವಜದ ಐಕಾನ್ ಬಳಸುವುದರಲ್ಲಿ ಯಾವ ತಪ್ಪಿಲ್ಲ. ತ್ರಿವರ್ಣ ಧ್ವಜಕ್ಕೆ ಪ್ರತಿಯೊಬ್ಬ ನಾಗರಿಕನು ಗೌರವ ಸಲ್ಲಿಸಬೇಕು. ಧ್ವಜ ಯಾವಾಗಲೂ ಗಾಳಿಯಲ್ಲಿ ಹಾರಾಡುತ್ತಿರಬೇಕು ಎಂದು 1950 ಮತ್ತು 1971ರ ತ್ರಿವರ್ಣ ಧ್ವಜ ಸಂರಕ್ಷಣೆ ಕಾಯ್ದೆಗಳು ಹೇಳುತ್ತವೆ" ಎಂದು ಎಂದು ಸ್ಪಷ್ಟಪಡಿಸಿದ್ದಾರೆ.
ಜಾಲತಾಣಗಳಲ್ಲಿ ನಿರಾತಂಕವಾಗಿ ಧ್ವಜ ಪ್ರದರ್ಶಿಸಿ ತ್ರಿವರ್ಣ ಧ್ವಜವನ್ನು ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನಾಗಿ ಬಳಸಿದ್ದ ಅಮರ್ ಉಪಾಧ್ಯಾಯ ಎಂಬ ಇಂದೋರ್ ನ 9ನೇ ತರಗತಿ ವಿದ್ಯಾರ್ಥಿಗೆ ಆತನ ಸ್ನೇಹಿತರು ಇದು ಅಪರಾಧ ಎಂದು ಹೇಳಿದ್ದರು. ಇದಕ್ಕೆ ಪೂರಕವೆಂಬಂತೆ ಇಂಥ ಮೇಸೆಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದರಂತೆ ಅಮರ್ ತ್ರಿವರ್ಣ ಧ್ವಜದ ಪ್ರೊಫೈಲ್ ಚಿತ್ರ ತೆಗೆದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಇಂದೋರ್ ಹೈಕೋರ್ಟ್ ವಕೀಲ ರಾಘವೇಂದ್ರ ಸಿಂಗ್ ರಘುಸ್ವಾಮಿ " 2002ರ ಭಾರತ ಧ್ವಜ ಸಂಹಿತೆ ಹೇಳುವಂತೆ ಭಾರತದ ನಾಗರಿಕರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸಲು ಯಾವ ಅಡೆತಡೆಗಳಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನವಾಗದ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗತಿಗಳು ದಾರಿ ತಪ್ಪಿಸುತ್ತಿವೆಯಷ್ಟೇ. ಆದರೆ ಯಾವ ಸಂದರ್ಭದಲ್ಲೂ ತ್ರಿವರ್ಣ ಧ್ವಜಕ್ಕೆ, ದೇಶದ ಏಕತೆಗೆ ಧಕ್ಕೆ ತರುವಂತಹ ಪ್ರದರ್ಶನಗಳಾಗಬಾರದು" ಎಂದಿದ್ದಾರೆ.
"1950ರ ಭಾರತ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನು 2002ರಲ್ಲಿ ತಿದ್ದುಪಡಿ ಮಾಡಲಾಯಿತು. ಆದರೆ ಡಿಜಿಟಲ್ ತಂತ್ರಜ್ಞಾನದಲ್ಲಿ ರಾಷ್ಟ್ರಧ್ವಜ ಬಳಕೆ ಬಗ್ಗೆ ಲಿಖಿತವಾದ ಯಾವುದೇ ಉಲ್ಲೇಖಗಳಿಲ್ಲ. ರಾಷ್ಟ್ರಧ್ವಜವನ್ನು ಗೌರವ ಮತ್ತು ಆದರದಿಂದ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕೇಸರಿ ಬಣ್ಣ ಕೆಳಗಾಗದಂತೆ, ಹರಿದ ರಾಷ್ಟ್ರ ಧ್ವಜ ಬಳಸದಂತೆ ನೋಡಿಕೊಳ್ಳಬೇಕು" ಎಂದು ಸುಪ್ರೀಂ ಕೋರ್ಟ್ ವಕೀಲ ಅನ್ಶು ಮಿಶ್ರಾ ವಿವರಿಸಿದ್ದಾರೆ.
ಪ್ಲಾಸ್ಟಿಕ್ ಧ್ವಜ ಬಳಕೆ ಬೇಡ : ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ದೇಶವೇ ಸಜ್ಜಾಗಿದೆ. ಆದರೆ ಪ್ಲಾಸ್ಟಿಕ್ ಎಂಬ ಪರಿಸರ ಕಂಟಕ ಕಾಡುತ್ತಿದೆ. 68ನೇ ಸ್ವಾತಂತ್ರ್ಯ ದಿನವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸ್ವಾತಂತ್ರ್ಯೋತ್ಸವದ ಮರುದಿನ ರಸ್ತೆಗಳಲ್ಲಿ, ಕ್ರೀಡಾಂಗಣದಲ್ಲಿ, ಶಾಲಾ ಕಾಲೇಜು ಆವರಣದಲ್ಲಿ ಹೀಗೆ ಎಲ್ಲೆಂದರಲ್ಲಿ ರಾಷ್ಟ್ರ ಧ್ವಜ ಬಿದ್ದು ಹೊರಳಾಡುತ್ತಿರುತ್ತದೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಪ್ರಯೋಜನವಾಗಿಲ್ಲ. (ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?)
2010ರ ರಾಷ್ಟ್ರೀಯ ಹಬ್ಬಗಳ ವೇಳೆಯೇ ಕರ್ನಾಟಕದಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧಕ್ಕೆ ಸರ್ಕಾರ ಮುಂದಾಗಿತ್ತಾದರೂ ಪರಿಣಾಮಕಾರಿ ಅನುಷ್ಠಾನ ಇಂದಿಗೂ ಸಾಧ್ಯವಾಗಿಲ್ಲ. ಕಡಿಮೆ ಬೆಲೆಗೆ ದೊರಕುತ್ತದೆ ಎಂಬ ಏಕೈಕ ಕಾರಣಕ್ಕೆ ಪ್ಲಾಸ್ಟಿಕ್ ಧ್ವಜಗಳು ಪರಿಸರದ ಮೇಲೆ ಸವಾರಿ ಮಾಡುತ್ತಿವೆ. ಪ್ಲಾಸ್ಟಿಕ್ ಧ್ವಜ ಬಳಸದಂತೆ ಸರ್ಕಾರ ಮತ್ತು ಇಲಾಖೆಗಳು ಸೂಚನೆ ನೀಡಿದ್ದರೂ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಈ ಬಗ್ಗೆ ಮುಂಬಯಿ ಹೈಕೋರ್ಟ್ 2013ರಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ಲಾಸ್ಟಿಕ್ ಧ್ವಜ ಬಳಕೆ ಕಂಡುಬಂದಲ್ಲಿ ವ್ಯಾಪಾರಿಗಳ, ಸರ್ಕಾರದ ಮೇಲೆ ದಂಡ ವಿಧಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದೆ. ಇತರ ರಾಜ್ಯಗಳಲ್ಲಿ ಸಾಧ್ಯವಾಗಿದ್ದು ನಮ್ಮ ಕರ್ನಾಟಕದಲ್ಲಿ ಏಕೆ ಸಾಧ್ಯವಾಗಿಲ್ಲ? ಇದಕ್ಕೆ ಸರ್ಕಾರವೇ ಉತ್ತರ ಹೇಳಬೇಕು