ಎಚ್.ಡಿ.ಕುಮಾರಸ್ವಾಮಿ ಮುಂದಿರುವ 5 ಸವಾಲುಗಳು
ಬೆಂಗಳೂರು, ನ.14 : ಪಕ್ಷದ ನಾಯಕರ, ಶಾಸಕರ ಒತ್ತಾಯಕ್ಕೆ ಮಣಿದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇದರಿಂದಾಗಿ ಕಳೆದ ಏಳು ತಿಂಗಳಿಂದ ಖಾಲಿ ಇದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಭರ್ತಿಯಾಗಿದೆ.
ಪಕ್ಷದ ಎಲ್ಲ ನಾಯಕರು ವಿಶ್ವಾಸ ಮತ್ತು ಭರವಸೆಯ ಮೇರೆಗೆ ಈ ಸ್ಥಾನ ವಹಿಸಿದ್ದಾರೆ. ಕಳೆದ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಕೆಲವರು ಅನಗತ್ಯವಾಗಿ ನಾನಾ ಗೊಂದಲಗಳನ್ನು ಉಂಟು ಮಾಡುತ್ತಿದ್ದಾರೆ. ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಪಕ್ಷವನ್ನು ಕಟ್ಟುವುದು ತಮ್ಮ ಮುಂದಿನ ಗುರಿ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. [ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಿಷ್ಟು]
ಸ್ಥಳೀಯ ಸಂಸ್ಥೆಗಳ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ಎದುರಾಗುತ್ತಿವೆ. ಜೆಡಿಎಸ್ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ನಾಯಕರು, ಕೆಲವು ಶಾಸಕರು ಬಹಿರಂಗವಾಗಿ ಧ್ವನಿ ಎತ್ತುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಕ್ತಿಯುತವಾಗಿ ರಾಜ್ಯದಲ್ಲಿ ಬೆಳೆಯುತ್ತಿವೆ. ಆದ್ದರಿಂದ ಕುಮಾರಸ್ವಾಮಿ ಅವರ ರಾಜ್ಯಾಧ್ಯಕ್ಷ ಹುದ್ದೆಗೆ ಹಲವಾರು ಸವಾಲುಗಳಿವೆ. ಕುಮಾರಸ್ವಾಮಿ ಅವರ ಮುಂದಿರುವ ಐದು ಸವಾಲುಗಳು
ಅಸಮಾಧಾನ ಶಮನಗೊಳಿಸಬೇಕು
ಪಕ್ಷದ ನಾಯಕತ್ವದ ಬಗ್ಗೆ ಅದರಲ್ಲೂ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಪಕ್ಷದ ಕೆಲವು ನಾಯಕರು ಮತ್ತು ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರಾದ ಜಮೀರ್ ಅಹಮದ್ ಖಾನ್, ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಾಯಕತ್ವದ ಕುರಿತು ಧ್ವನಿ ಎತ್ತಿದ್ದಾರೆ. ಇವುಗಳನ್ನು ಶಮನಗೊಳಿಸಿ ಎಲ್ಲಾ ನಾಯಕರನ್ನೂ ಒಟ್ಟುಗೂಡಿಸುವ ಸವಾಲು ಎಚ್ಡಿಕೆ ಅವರ ಮುಂದಿದೆ.
ಚುನಾವಣೆ ಎದುರಿಸುವುದು
ಸ್ಥಳೀಯ ಸಂಸ್ಥೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಚುನಾವಣೆ ಎದುರಾಗುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಚುನಾವಣೆ ಎದುರಿಸಿ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಇದು ಉತ್ತಮ ಅವಕಾಶವಾಗಿದ್ದು, ಕುಮಾರಸ್ವಾಮಿ ಅವರ ಮುಂದಿರುವ ಪ್ರಮುಖ ಸವಾಲು ಇದಾಗಿದೆ.
ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು
ಲಕ್ಷಾಂತರ ಕಾರ್ಯಕರ್ತರೇ ಪಕ್ಷದ ಆಸ್ತಿ ಎಂದು ಕುಮಾರಸ್ವಾಮಿ ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ರಾಜ್ಯಾದ್ಯಂತ ಸಂಚಾರ ಮಾಡಿ ಕಾರ್ಯಕರ್ತರಲ್ಲಿ ಪುನಃ ಶಕ್ತಿ ತುಂಬಬೇಕಾದ ಸವಾಲು ಕುಮಾರಸ್ವಾಮಿ ಅವರ ಮುಂದಿದೆ. ಪಕ್ಷ ಸಂಘಟನೆಗಾಗಿ ಉತ್ತರ ಕರ್ನಾಟಕದಲ್ಲಿ ಮನೆ ಮಾಡುತ್ತೇನೆ ಎಂದು ಎಚ್ಡಿಕೆ ಹೇಳಿದ್ದರು. ದೇವೇಗೌಡರು ಹಾಸನ, ಮೈಸೂರು ಭಾಗ ನೋಡಿಕೊಳ್ಳುತ್ತಿರುವುದರಿಂದ ಎಚ್ಡಿಕೆ ಉತ್ತರ ಕರ್ನಾಟಕ ಭಾಗವನ್ನು ನೋಡಿಕೊಳ್ಳಬೇಕು.
ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಸ್ಪರ್ಧೆ ನೀಡುವುದು
ಕಾಂಗ್ರೆಸ್ ದೇಶದಲ್ಲಿ ಅಧಿಕಾರ ಕಳೆದುಕೊಂಡಿರಬಹುದು ಆದರೆ, ಕರ್ನಾಟಕದಲ್ಲಿ ಅದು ಅಧಿಕಾರದಲ್ಲಿದ್ದು ಪ್ರಬಲ ಶಕ್ತಿಯಾಗಿದೆ. ಇನ್ನೂ ಬಿಜೆಪಿಯೂ ರಾಜ್ಯದಲ್ಲಿ ಶಕ್ತಿಯುತವಾಗಿದೆ. ಆದ್ದರಿಂದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಸ್ಪರ್ಧೆ ನೀಡುವಂತೆ ಪ್ರಾದೇಶಿಕ ಪಕ್ಷ ಜೆಡಿಎಸ್ಅನ್ನು ಬೆಳೆಸಬೇಕಾದ ಸವಾಲು ಎಚ್ಡಿಕೆ ಮುಂದಿದೆ.
ಇತರ ಪ್ರಮುಖ ಸವಾಲುಗಳು
* ಜೆಡಿಎಸ್ ಪಕ್ಷದ ಕಚೇರಿ ಕಾಂಗ್ರೆಸ್ಗೆ ಸೇರಿದ್ದು ಅದನ್ನು ಡಿ.31ರೊಳಗೆ ಖಾಲಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಕುರಿತು ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುವ ಸವಾಲು ಎಚ್ಡಿಕೆ ಮುಂದಿದೆ.
* ಹಲವು ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ, ಕೆಲವರು ಪಕ್ಷ ಬಿಡಲು ತಯಾರಿ ನಡೆಸಿದ್ದಾರೆ ಮುಂದೆ ಯಾವ ನಾಯಕರ ಪಕ್ಷ ಬಿಡದಂತೆ ತಡೆಯುವ ಕೆಲಸವಾಗಬೇಕು.
*ಪಕ್ಷದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೋರ್ ಕಮಿಟಿ ರಚನೆ ಮಾಡಲಾಗಿದೆ. ಆದ್ದರಿಂದ ನಿಯಮಿತವಾಗಿ ಸಭೆ ನಡೆಸಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸವಾಲಿದೆ.