ಕೊಡಗು ಶೂಟೌಟ್ ಪ್ರಕರಣ : ಐವರ ಬಂಧನ

ಶುಕ್ರವಾರ ಗುಂಡಿನ ದಾಳಿ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಗೆ ವೈಯಕ್ತಿಕ ದ್ವೇಷವೇ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಚಾರಣೆ ಮುಂದುವರೆದಿದ್ದು, ನಂತರ ನಿಖರ ಕಾರಣ ತಿಳಿಯಲಿದೆ ಎಂದು ದಕ್ಷಿಣ ವಲಯ ಐಜಿಪಿ ಡಾ.ರಾಮಚಂದ್ರರಾವ್ ಹೇಳಿದ್ದಾರೆ. [ಗುಂಡಿನ ದಾಳಿ ನಡೆದದ್ದು ಹೇಗೆ]
ಸುಜಾ ಕುಶಾಲಪ್ಪ ಅವರ ಮೇಲೆ ದಾಳಿ ಮಾಡಲು ಆರೋಪಿಗಳು ಬಳಿಸಿದ್ದ ಕಾರನ್ನು ಕಗ್ಗೋಡ್ಲು ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಎ 12, 6578 ನಂಬರಿನ ಕಾರಿನಲ್ಲಿ ಮೂರು ಲಾಂಗ್, 7 ಮಂಕಿ ಕ್ಯಾಪ್ ಮತ್ತು ಮೂರು ಗುಂಡುಗಳು ಪತ್ತೆಯಾಗಿವೆ. ಐವರು ಆರೋಪಿಗಳು 25-27 ವರ್ಷ ವಯಸ್ಸಿನವರಾಗಿದ್ದು, ಅವರ ವಿಚಾರಣೆ ಮುಂದುವರೆದಿದೆ.
ಮೊದಲ ಕೃತ್ಯ ಶಂಕೆ : ಐವರು ಆರೋಪಿಗಳು ಸೇರಿ ಇದೇ ಮೊದಲ ಬಾರಿಗೆ ಇಂತಹ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ ಪೊಲೀಸರು ಅವರನ್ನು ಹುಡುಕಲು ಆರಂಭಿಸಿದ್ದರು. ಇದರಿಂದ ಆತಂಕಗೊಂಡ ಅವರು ಕೊಡಗು ಬಿಟ್ಟು ಹೊರಗೆ ಹೋಗಲಿಲ್ಲ. ಆದ್ದರಿಂದ ಇದು ಅನುಭವಿ ಗುಂಪಿನ ಕೃತ್ಯವಲ್ಲ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಐವರು ಆರೋಪಿಗಳನ್ನು ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದ್ದು, ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ತಿಳಿದು ಬರಲಿದೆ.
ಚೇತರಿಸಿಕೊಳ್ಳುತ್ತಿರುವ ಸುಜಾ ಕುಶಾಲಪ್ಪ : ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿರುವ ಸುಕಾ ಕುಶಾಲಪ್ಪ ಅವರು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.











Click it and Unblock the Notifications