ಕಾವೇರಿ ಪ್ರವಾಹದ ನೀರಲ್ಲಿ ಮೀನು ಹಿಡಿದೋನೇ ಜಾಣ
ಮಡಿಕೇರಿ, ಜೂನ್ 30 : ಕೊಡಗಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ಪ್ರವಾಹ ಎದುರಾಗಿದ್ದು, ನದಿ ತೀರದ ಪ್ರದೇಶಗಳು ಜಲಾವೃತಗೊಂಡಿವೆ. ಈ ಕಾರಣದಿಂದಾಗಿ ನೀರು, ಗದ್ದೆ, ತೋಟದಲ್ಲಿ ನಿಲ್ಲುವ ನೀರಿನಲ್ಲಿ ಮೀನುಗಳು ನದಿಯಿಂದ ಗದ್ದೆತೋಟಗಳಿಗೆ ಸ್ಥಳಾಂತರಗೊಂಡಿವೆ.
ನದಿ ಉಕ್ಕಿ ಹರಿದಾಗಲೆಲ್ಲಾ ರೈತರು ನದಿ ತಟದ ಪ್ರದೇಶಗಳಲ್ಲಿ, ನೀರು ಆವರಿಸಿರುವ ಪ್ರದೇಶಗಳಲ್ಲಿ ಗಾಳಿ ಹಾಕಿ, ಬಲೆ ಬೀಸಿ ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿರುವ ದೃಶ್ಯ ಹಲವು ಪ್ರದೇಶಗಳಲ್ಲಿ ಕಂಡುಬರುತ್ತಿದೆ.
ಮೊದಲೆಲ್ಲ ಭಾರೀ ಮಳೆ ಬಂದು ನಿಂತ ತಕ್ಷಣ ಮೀನು ಹಿಡಿಯಲು ದೊಡ್ಡ ದಂಡೇ ನೆರೆಯುತ್ತಿತ್ತು. ಕೆಲವು ದಶಕಗಳಿಂದೀಚೆಗೆ ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬಳಸುತ್ತಿರುವುದರಿಂದ ಮೀನುಗಳು ವಿರಳವಾಗಿವೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಕಾವೇರಿ ನದಿ ತಟದಲ್ಲಿರುವ ಗದ್ದೆಬಯಲುಗಳು ಪಾಳು ಬಿದ್ದಿವೆ. ಹೀಗಾಗಿ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ನೀರು ಪಾಳು ಭೂಮಿಯನ್ನು ಆವರಿಸಿಕೊಳ್ಳುತ್ತಿದ್ದು, ಅಲ್ಲಿ ಮೀನು, ಏಡಿಗಳು ಆಶ್ರಯ ಪಡೆಯುತ್ತವೆ. ಇವುಗಳನ್ನು ಹರಸಾಹಸ ಮಾಡಿ ಹಿಡಿಯುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.
ಜೂ.21ರಿಂದ ಆರಿದ್ರಾ ಮಳೆ ಸುರಿಯುತ್ತಿದ್ದು, ಇಷ್ಟು ವರ್ಷಗಳಲ್ಲಿ ಈ ಬಾರಿ ಭರ್ಜರಿಯಾಗಿ ಅಬ್ಬರಿಸಿದೆ. ಹೀಗಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಜುಲೈ 4ರವರೆಗೆ ಈ ಮಳೆಯಿದ್ದು, ಇದೇ ರೀತಿ ಸುರಿದರೆ ಕಾವೇರಿ ಕಣಿವೆಯ ಹೇಮಾವತಿ, ಹಾರಂಗಿ ಮತ್ತು ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿರುವುದು ಖಚಿತ. [ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ]
ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿನ ಬಾಳುಗೊಡುವಿನ ಕೆದಂಬಾಡಿ ಪುರುಷೋತ್ತಮ್ ಎಂಬುವವರ ಗದ್ದೆಗೆ ನೀರು ನುಗ್ಗಿದ್ದು, ಅಲ್ಲಿ ಮೀನುಗಳು ಕಾಣಿಸಿಕೊಂಡಿದ್ದು ಕೆಲವರು ನೀರಿಗಿಳಿದು ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ. [ಮೈದುಂಬಿದ ಜೋಗ: ಕರಾವಳಿಯಲ್ಲಿ ಭಾರೀ ಮಳೆ ಸಂಭವ]












Click it and Unblock the Notifications