ಕರ್ನಾಟಕಕ್ಕೆ ಮೊದಲ ತೇಜಸ್ ರೈಲು; ಮಾರ್ಗ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 04 : ಕರ್ನಾಟಕದಲ್ಲಿಯೂ ಖಾಸಗಿ ರೈಲು ತೇಜಸ್ ಎಕ್ಸ್ಪ್ರೆಸ್ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದ್ದು, ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಒಂದು ತೇಜಸ್ ರೈಲನ್ನು ಘೋಷಣೆ ಮಾಡಲಾಗಿತ್ತು.
ಭಾರತೀಯ ರೈಲ್ವೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ರೈಲ್ವೆ ಇಲಾಖೆಯ ವೆಬ್ ಸೈಟ್ನಲ್ಲಿ ತೇಜಸ್ ರೈಲು ಸಂಚಾರ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ರೈಲು ಸೇವೆ ಎಂದಿನಿಂದ ಆರಂಭವಾಗಲಿದೆ? ಎಂಬುದನ್ನು ತಿಳಿಸಿಲ್ಲ.
ತೇಜಸ್ ಎಕ್ಸ್ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ
ಖಾಸಗಿ ಸಹಭಾಗಿತ್ವದಲ್ಲಿ ರೈಲುಗಳ ಸಂಚಾರವನ್ನು ನಡೆಸಲು ಕೇಂದ್ರ ಸರ್ಕಾರ ತೇಜಸ್ ರೈಲುಗಳನ್ನು ಪರಿಚಯಿಸಿತ್ತು. ದೇಶದ ಮೊದಲ ತೇಜಸ್ ರೈಲು ದೆಹಲಿ-ಲಕ್ನೋ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ತೇಜಸ್ ಮಾದರಿ ರೈಲಿನ 6 ಕಾರಿಡಾರ್; ಕರ್ನಾಟಕದ ಒಂದು ರೈಲು
ತೇಜಸ್ ಎಕ್ಸ್ಪ್ರೆಸ್ ಹವಾನಿಯಂತ್ರಿತ ಸೆಮಿ ಹೈಸ್ಪೀಡ್ ರೈಲು ಆಗಿದೆ. ಗಂಟೆಗೆ 200 ಕಿ. ಮೀ. ವೇಗದಲ್ಲಿ ತೇಜಸ್ ರೈಲುಗಳು ಸಂಚಾರ ನಡೆಸುವಂತೆ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಹಳಿಗಳ ಸುರಕ್ಷತೆಯ ಕಾರಣ ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.
ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಹೂರ್ತ ನಿಗದಿ
ಕರ್ನಾಟಕದ ಮಾರ್ಗ
ಕರ್ನಾಟಕದ ಮೊದಲ ತೇಜಸ್ ಎಕ್ಸ್ಪ್ರೆಸ್ ರೈಲು ಮಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಚಾರ ನಡೆಸಲಿದೆ. ರಾಜ್ಯದ ಕರಾವಳಿ ಭಾಗದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ನಡುವಿನ ದೂರ ಸುಮಾರು 414 ಕಿ. ಮೀ.ಗಳು.
ರೈಲಿನ ವೇಳಾಪಟ್ಟಿ
ಮಂಗಳೂರು-ಕೊಯಮತ್ತೂರು ನಡುವಿನ ತೇಜಸ್ ಎಕ್ಸ್ಪ್ರೆಸ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಆದರೆ, ರೈಲು ಸಂಚಾರ ಎಂದು ಆರಂಭವಾಗಲಿದೆ? ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.
ಮಂಗಳೂರಿನಿಂದ ಬೆಳಗ್ಗೆ 6ಗಂಟೆಗೆ ಹೊರಡಲಿರುವ ರೈಲು ಮಧ್ಯಾಹ್ನ 12.10ಕ್ಕೆ ಕೊಯಮತ್ತೂರು ತಲುಪಲಿದೆ. ಕೊಯಮತ್ತೂರುನಿಂದ 2.30ಕ್ಕೆ ಹೊರಡುವ ರೈಲು ರಾತ್ರಿ 8.40ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ವಾರದಲ್ಲಿ 6 ದಿನ ಸಂಚಾರ
ಕರ್ನಾಟಕದ ಮೊದಲ ತೇಜಸ್ ರೈಲು ಮಂಗಳೂರು-ಕೊಯಮತ್ತೂರು ನಡುವೆ ವಾರದ 6 ದಿನಗಳ ಕಾಲ ಸಂಚಾರ ನಡೆಸುತ್ತದೆ. ಸೋಮವಾರ ರೈಲು ಸಂಚಾರ ಇರುವುದಿಲ್ಲ. ಉಭಯ ನಗರಗಳ ನಡುವಿನ ಪ್ರಯಾಣದರ, ನಿಲ್ದಾಣಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.
ಎಲ್ಲೆಲ್ಲಿ ತೇಜಸ್ ಸಂಚಾರ
ದೇಶದ ಎರಡು ಮಾರ್ಗದಲ್ಲಿ ಈಗಾಗಲೇ ತೇಜಸ್ ರೈಲು ಸಂಚಾರ ನಡೆಸುತ್ತಿದೆ. ದೇಶದ ಮೊದಲ ತೇಜಸ್ ರೈಲು ದೆಹಲಿ-ಲಕ್ನೋ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. 2ನೇ ರೈಲು ಅಹಮದಾಬಾದ್-ಮುಂಬೈ ಮಾರ್ಗದಲ್ಲಿ 2020ರ ಜನವರಿ 19ರಿಂದ ಸಂಚಾರವನ್ನು ನಡೆಸುತ್ತಿದೆ.