ಕುಂದಾಪುರದಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆತ್ಮಹತ್ಯೆ
ಕುಂದಾಪುರ, ನವೆಂಬರ್, 27: ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರದ ಹೇರಿಕುದ್ರು ಸೇತುವೆ ಬಳಿ ಶುಕ್ರವಾರ ನಡೆದಿದ್ದು, ಆತ್ಮಹತ್ಯೆಗೆ ಯಾವುದೇ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಕುಂದಾಪುರ ಮದ್ದುಗುಡ್ಡೆ ನಿವಾಸಿ ಭಾಸ್ಕರ ಖಾರ್ವಿ (46) ನೇಣಿಗೆ ಶರಣಾದವರು. ಇವರು ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.[ಅಧಿಕಾರಿ ಕಿರಿಕಿರಿ ತಾಳದೆ ಕೆಎಸ್ಆರ್ ಟಿಸಿ ಚಾಲಕ ಆತ್ಮಹತ್ಯೆ]

ಘಟನೆ ವಿವರ:
ಅಗ್ನಿಶಾಮಕ ಠಾಣೆಯಲ್ಲಿ ಸೆಂಟ್ರಿಯಾಗಿ ಗುರುವಾರ ಕರ್ತವ್ಯ ನಿರ್ವಹಿಸಿ ಶುಕ್ರವಾರ ಬೆಳಿಗ್ಗೆ ಮನೆಗೆ ಬಂದಿದ್ದ ಭಾಸ್ಕರ್ ಮನೆಯಲ್ಲಿ ಕಾಫಿ ಕುಡಿದು ಬೈಕಿನಲ್ಲಿ ಹೊರಗಡೆ ತೆರಳಿದ್ದಾರೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೇರಿಕುದ್ರು ಸೇತುವೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಭಾಸ್ಕರ್ ಖಾರ್ವಿ ಶವ ಪತ್ತೆಯಾಗಿದೆ. ಈತನ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.[ಬೆಂಗಳೂರು: ಕೆ.ಆರ್. ಮಾರ್ಕೆಟ್ ಠಾಣೆ ಮುಖ್ಯಪೇದೆ ನೇಣಿಗೆ ಶರಣು]
ಸುಮಾರು 18 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ಅವರು ಉತ್ತಮ ಕೆಲಸಗಾರರಾಗಿದ್ದರು. ನಿಷ್ಠಾವಂತ ಕೆಲಸಗಾರನಾಗಿದ್ದ ಭಾಸ್ಕರ್ ಉತ್ತಮ ಈಜುಪಟು ಆಗಿದ್ದರು. ಮದ್ದುಗುಡ್ಡೆ ನಿವಾಸದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಇವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಶವಾಗಾರದಲ್ಲಿ ಮ್ರತದೇಹವನ್ನು ಇರಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.












Click it and Unblock the Notifications