ಬಿಎಸ್ವೈ ಅಧ್ಯಕ್ಷರಾಗುವುದಕ್ಕೂ, ಮೇಲ್ಮನವಿಗೂ ಸಂಬಂಧವಿಲ್ಲ
ಬೆಂಗಳೂರು, ಏಪ್ರಿಲ್ 21 : ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕ ಸರ್ಕಾರ ಅವರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ. ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎಂದು ಆರೋಪಿಸಲಾಗುತ್ತಿದೆ.
'ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ 15 ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ' ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ. [ಯಡಿಯೂರಪ್ಪ ವಿರುದ್ಧ ಮೇಲ್ಮನವಿ, ಮೌನ ಮುರಿದ ಸರ್ಕಾರ]

ಒನ್ ಇಂಡಿಯಾ ಜೊತೆ ಮಾತನಾಡಿರುವ ಬ್ರಿಜೇಶ್ ಕಾಳಪ್ಪ ಅವರು, 'ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗದಿದ್ದರೂ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತಿತ್ತು. ಇದೊಂದು ಕಾನೂನು ಪ್ರಕ್ರಿಯೆ' ಎಂದು ತಿಳಿಸಿದ್ದಾರೆ. [15 ಪ್ರಕರಣಗಳು ಯಾವುವು?]
'ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದರು ಎಂಬ ಕಾರಣಕ್ಕೆ ಕಾನೂನು ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಪಕ್ಷ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ಕಾರಣಕ್ಕೆ ಅವರಿಗೆ ಕಾನೂನಿನಿಂದ ರಕ್ಷಣೆ ಸಿಗುವುದಿಲ್ಲ' ಎಂದು ಕಾಳಪ್ಪ ಹೇಳಿದ್ದಾರೆ. [FIR ರದ್ದಾದರೂ ಯಡಿಯೂರಪ್ಪ ಕಾನೂನು ಹೋರಾಟ ಮುಗಿದಿಲ್ಲ]
'ಯಡಿಯೂರಪ್ಪ ಅವರ ವಿರುದ್ಧ ಮೇಲ್ಮನವಿ ಸಲ್ಲಿಸುವುದು ರಾಜಕೀಯ ಪ್ರೇರಿತವಾದ ಕ್ರಮ ಎಂದು ಬಿಜೆಪಿ ದೂರಬಹುದು. ಆದರೆ, ಇದರಲ್ಲಿ ರಾಜಕೀಯವಿಲ್ಲ, ಈಗಾಗಲೇ ಮೇಲ್ಮನವಿ ಸಲ್ಲಿಕೆಗೆ ಪ್ರಕ್ರಿಯೆಗಳು ಆರಂಭವಾಗಿದ್ದು, ಮುಂದಿನ ವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗುತ್ತದೆ' ಎಂದು ಕಾಳಪ್ಪ ತಿಳಿಸಿದ್ದಾರೆ.
'ಕರ್ನಾಟಕ ಹೈಕೋರ್ಟ್ 15 ಪ್ರಕರಣಗಳನ್ನು ರದ್ದುಪಡಿಸುವಾಗ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿಟ್ಟಿದೆ. ಸಿಎಜಿ ವರದಿ ಆಧರಿಸಿ ಈ ಪ್ರಕರಣಗಳನ್ನ ದಾಖಲಿಸಲಾಗಿತ್ತು. 2ಜಿ ಮತ್ತು ಕಲ್ಲಿದ್ದಲು ಹಗರಣಗಳು ಸಿಎಜಿ ವರದಿ ಆಧರಿಸಿಯೇ ದಾಖಲಿಸಲಾಗಿದೆ' ಎನ್ನುತ್ತಾರೆ ಕಾಳಪ್ಪ.












Click it and Unblock the Notifications