ರಾಮನಗರ ಬಸ್ ನಿಲ್ದಾಣದಲ್ಲಿ ಹೆಣ್ಣು ಭ್ರೂಣ ಪತ್ತೆ
ರಾಮನಗರ, ಅಕ್ಟೋಬರ್ 10 : ಕನಕಪುರ ಬಸ್ ನಿಲ್ದಾಣದಲ್ಲಿ ಮೃತ ಹೆಣ್ಣು ಭ್ರೂಣವನ್ನು ಎಸೆದಿರುವ ಮನಕಲುಕುವ, ಅಮಾನವೀಯ ಘಟನೆ ಮಂಗಳವಾರ ನಡೆದಿದೆ.
ಮುಂಜಾನೆ ಬಸ್ ನಿಲ್ದಾಣದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಭ್ರೂಣವನ್ನು ಬಿಸಾಡಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಸ್ವಯಂಪ್ರೇರಿತವಾಗಿ ಭಾರತೀಯ ದಂಡಸಂಹಿತೆ 318 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡು ಭ್ರೂಣವನ್ನ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಹೆಣ್ಣು ಭ್ರೂಣ 5-6 ತಿಂಗಳ ಭ್ರೂಣವಾಗಿದ್ದು ಬಹುತೇಕ ಅಂಗಾಂಗಗಳು ಬೆಳೆದಿವೆ. ಅಕ್ರಮ ಸಂಬಂಧದಿಂದಲೋ ಅಥವಾ ಹೆಣ್ಣು ಮಗು ಎಂಬ ಕಾರಣಕ್ಕೋ ಗರ್ಭಪಾತ ಮಾಡಲಾಗಿದೆ. ಹೆಣ್ಣು ಮನೆಯ ಕಣ್ಣು ಅಂತಾರೆ ಅದರೆ ಈ ಪಾಪಿಗಳು ಹೆಣ್ಣು ಭ್ರೂಣ ಕಣ್ಣು ಬಿಡುವ ಮೊದಲೇ ಕಣ್ಣು ಮುಚ್ಚಿಸಿರುವ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಬಿಗಿ ಕಾನೂನು ಇದ್ದರು ನಗರದ ಕೆಲವು ಖಾಸಗಿ ಲ್ಯಾಬ್ಗಳಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಎಗ್ಗಿಲ್ಲದೇ ನಡೆಯುತ್ತಿದೆ. ಕಾನೂನು ಜಾರಿಮಾಡಬೇಕಾದ ಅಧಿಕಾರಿಗಳು ಮಾತ್ರ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications