ಕೊರೊನಾ ನಿರ್ವಹಣೆ, ಉಪ ಚುನಾವಣೆ ರಿಸಲ್ಟ್ ಮತ್ತು ಬಿಎಸ್ವೈ, ವಿಜಯೇಂದ್ರ ಭವಿಷ್ಯ
78 ವರ್ಷದ ಯಡಿಯೂರಪ್ಪ ಬಹುಶಃ ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಈ ರೀತಿಯ ಒತ್ತಡವಿರುವ ಆಡಳಿತವನ್ನು ನೋಡಿರಲಿಕ್ಕಿಲ್ಲ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ನಂತರ ಸಾಲುಸಾಲು ಸವಾಲುಗಳನ್ನು ಯಡಿಯೂರಪ್ಪ ಎದುರಿಸಬೇಕಾಯಿತು.
ಸಿಎಂ ಆದಾಗಿನಿಂದ ಕೇಂದ್ರದ ಪೂರ್ಣ ಪ್ರಮಾಣದ ಸಹಕಾರ ಸಿಗದೇ ಇದ್ದರೂ, ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹದಿಮೂರರಲ್ಲಿ ಗೆದ್ದು ತನ್ನ ತಾಕತ್ತನ್ನು ಪ್ರದರ್ಶಿಸಿದ್ದರು. ಆದರೆ, ಈ ಹಿಂದಿನಂತೆ ಪರಿಸ್ಥಿತಿ ಈಗ ಇಲ್ಲ ಎನ್ನುವುದು ಕಟು ಸತ್ಯ.
ಒಂದು ಕಡೆ ಕೊರೊನಾ ನಿರ್ವಹಣೆ, ಇನ್ನೊಂದು ಉಪಚುನಾವಣೆಯ ಫಲಿತಾಂಶದ ಮೇಲೆ ಯಡಿಯೂರಪ್ಪನವರ ಮತ್ತವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಭವಿಷ್ಯ ನಿಂತಿದೆ ಎನ್ನುವ ಮಾತುಗಳು ಬಿಜೆಪಿ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ.
ಪಕ್ಷದಲ್ಲೇ ಹಲವು ಸವಾಲುಗಳನ್ನು ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳದೇ ಇದ್ದ ಹಲವು ಉದಾಹರಣೆಗಳಿವೆ. ಈ ನಡುವೆ, ಉಪ ಚುನಾವಣೆಯ ಫಲಿತಾಂಶದ ಮೇಲೆ ಯಡಿಯೂರಪ್ಪನವರ ಭವಿಷ್ಯ ನಿರ್ಧಾರವಾಗಲಿದೆಯಾ? ಮುಂದೆ ಓದಿ

ಬೆಳಗಾವಿ ಲೋಕಸಭೆ ಮತ್ತು ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆಯ ಫಲಿತಾಂಶ
ಬೆಳಗಾವಿ ಲೋಕಸಭೆ ಮತ್ತು ಮಸ್ಕಿ, ಬಸವಕಲ್ಯಾಣ ಅಸೆಂಬ್ಲಿಯ ಉಪ ಚುನಾವಣೆಯ ಫಲಿತಾಂಶ ಮೇ ಎರಡರಂದು ಹೊರಬೀಳಲಿದೆ. ವಿರೋಧ ಪಕ್ಷದವರು ತಮ್ಮೆಲ್ಲಾ ಶಕ್ತಿಯನ್ನು ಪ್ರದರ್ಶಿಸಿ ಆಖಾಡಕ್ಕೆ ಇಳಿದಿದ್ದರು. ಉಪ ಚುನಾವಣೆಯಲ್ಲಿ ಗೆಲ್ಲುವುದನ್ನು ಬಿಜೆಪಿ ರೂಢಿಸಿಕೊಂಡಿದ್ದರೂ, ಈ ಚುನಾವಣೆಯ ಫಲಿತಾಂಶದ ಮೇಲೆ ನಾಯಕತ್ವ ಬದಲಾವಣೆಯ ವಿಚಾರ ಮತ್ತೆ ಮುನ್ನಲೆಗೆ ಬರಬಹುದು ಅಥವಾ ಬಿಎಸ್ವೈ ಇನ್ನಷ್ಟು ಶಕ್ತಿಯುತರಾಗಬಹುದು.

ಬಿಜೆಪಿಯ ಕೆಲವು ಮುಖಂಡರೂ ಸರಕಾರದ ನಿರ್ವಹಣೆಯ ಬಗ್ಗೆ ಅಪಸ್ವರ ಎತ್ತಿದ್ದರು
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಕೇಂದ್ರ ಸರಕಾರ ಹೇಗೆ ಉತ್ತಮ ಹೆಸರನ್ನು ಪಡೆದುಕೊಳ್ಳಲು ವಿಫಲವಾಯಿತೋ, ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಸರಕಾರ ಕೂಡಾ ನಿರ್ವಹಣೆಯ ವಿಚಾರದಲ್ಲಿ ಸಾರ್ವಜನಿಕರಿಂದ ಆಕ್ರೋಶಕ್ಕೆ ಗುರಿಯಾಯಿತು. ಖುದ್ದು ಬಿಜೆಪಿಯ ಕೆಲವು ಮುಖಂಡರೂ ಸರಕಾರದ ನಿರ್ವಹಣೆಯ ಬಗ್ಗೆ ಅಪಸ್ವರ ಎತ್ತಿದ್ದರು. ಆರೋಗ್ಯ ಸಚಿವರ ಕಾರ್ಯವೈಖರಿಯ ಬಗ್ಗೆ ಜನರು ತೀವ್ರ ಅಸಮಾಧನವನ್ನು ಹೊಂದಿದ್ದರು.

ಬಿಎಸ್ವೈ ಪುತ್ರ ವಿಜಯೇಂದ್ರಗೆ ಮಸ್ಕಿ ಕ್ಷೇತ್ರದ ಫಲಿತಾಂಶ ಬಹಳ ಮುಖ್ಯ
ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಆಡಳಿತ ಯಂತ್ರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿಯವರೇ ಆರೋಪಿಸುತ್ತಾರೆ. ವಿಜಯೇಂದ್ರ ಅವರಿಗೆ ಮಸ್ಕಿ ಕ್ಷೇತ್ರದ ಜವಾಬ್ದಾರಿಯನ್ನೂ ನೀಡಲಾಗಿದೆ. ಹಾಗಾಗಿ, ಪ್ರಮುಖವಾಗಿ ವಿಜಯೇಂದ್ರಗೆ ಈ ಕ್ಷೇತ್ರದ ಫಲಿತಾಂಶ ಬಹಳ ಮುಖ್ಯ. ಗೆದ್ದರೆ ಇನ್ನಷ್ಟು ಬಲಾಢ್ಯರಾಗಿ, ಸೋತರೆ ಮೂಲೆಗುಂಪು ಆಗುವ ಸಾಧ್ಯತೆಯಿಲ್ಲದಿಲ್ಲ.
Recommended Video

ಫಲಿತಾಂಶದ ಮೇಲೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಭವಿಷ್ಯ
ಕೊರೊನಾ ನಿರ್ವಹಣೆಯ ಬಗ್ಗೆ ಕೇಂದ್ರದ ಮತ್ತು ಸಂಘ ಪರಿವಾರದ ಮುಖಂಡರಿಗೂ ಯಡಿಯೂರಪ್ಪನವರ ಮೇಲೆ ತೃಪ್ತಿಯಿಲ್ಲ. ಇವರ ಮೇಲೆ ಒತ್ತಡವಿದೆ ಎನ್ನುವುದಕ್ಕೆ ಕೊಡಬಹುದಾದ ಒಂದು ಉದಾಹರಣೆಯೆಂದರೆ, ಆಸ್ಪತ್ರೆಗೆ ಸೇರಿದ ನಾಲ್ಕೇ ದಿನದಲ್ಲಿ ಡಿಸ್ಚಾರ್ಜ್ ಆಗಿ, ನೇರವಾಗಿ ಬಂದು ಸಚಿವರು/ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಹಾಗಾಗಿ, ಉಪ ಚುನಾವಣೆಯ ಫಲಿತಾಂಶದ ಮೇಲೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಭವಿಷ್ಯ ನಿಂತಿದೆ ಎಂದು ಹೇಳಬಹುದಾಗಿದೆ.












Click it and Unblock the Notifications