ಸಿದ್ದರಾಮಯ್ಯನವರಿಗೆ ಅಭಿಮಾನಿಯಿಂದ ಕುರಿ, ಕಂಬಳಿ ಗಿಫ್ಟ್
ಬೆಂಗಳೂರು, ಆಗಸ್ಟ್ 28: ಭಾನುವಾರ ಅರಮನೆ ಮೈದಾನದಲ್ಲಿ ಕುರುಬ ಸಮಾಜದವರು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪರೂಪದ ಕೊಡುಗೆಯೊಂದು ಕಾದಿತ್ತು. ಅದು ಬೇರೇನೂ ಅಲ್ಲ ಒಂದು ಸಣ್ಣ ಕುರಿ ಮರಿ!
ರಾಯಚೂರು ಜಿಲ್ಲೆಯಿಂದ ಆಗಮಿಸಿದ್ದ ಕುರುಬ ಸಮಾಜದ ಸಿದ್ದರಾಮಯ್ಯ ಅಭಿಮಾನಿ ಆಂಜನೇಯ ಮುಖ್ಯಮಂತ್ರಿಗಳಿಗೆ ಸಾಂಪ್ರದಾಯಿಕ ಪೇಟ ತೊಡಿಸಿ, ಕುರಿ ಹಾಗೂ ಕರಿ ಕಂಬಳಿಯನ್ನು ಉಡುಗೊರೆಯಾಗಿ ನೀಡಿದರು.

ಕುರುಬ ಸಂಘದಿಂದ ಅರಮನೆ ಮೈದಾನದಲ್ಲಿ ರವಿವಾರ ಪ್ರತಿಭಾ ಪುರಸ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಈ ಉಡುಗೊರೆ ನೀಡಲಾಯಿತು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಯಾರೂ ಅರ್ಜಿ ಹಾಕಿ ಹುಟ್ಟೋದಿಲ್ಲ. ಆದರೆ ನಾನೀಗ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ. ಮುಖ್ಯಮಂತ್ರಿಯಾಗಿ ಆರೂವರೆ ಕೋಟಿ ಜನರಿಗೆ ಒಂದಲ್ಲ ಒಂದು ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ನಾನು ಅಹಿಂದ ಪರ ಇದ್ದೇನೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ನಾನು ಅಹಿಂದ ಪರ ಇದ್ದೇನೆ; ಅಷ್ಟೆ ಅಲ್ಲ ನಾನು ಎಲ್ಲ ಜನರ ಪರವಾಗಿಯೂ ಇದ್ದೇನೆ," ಅಂತ ಹೇಳಿದರು.
ಜಾತಿ ಸಮಿಕ್ಷೆ ರಿಲೀಸ್ ಮಾಡುವಂತೆ ಮುಖ್ಯಮಂತ್ರಿಗಳಿಗೆ ಭಾಷಣದ ವೇಳೆ ವ್ಯಕ್ತಿಯೊಬ್ಬರು ಕೇಳಿಕೊಂಡರು. ಇದಕ್ಕೆ ಉತ್ತರ ನೀಡಿದ ಸಿಎಂ, "ಮೀಸಲಾತಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂದು ಸಲಹೆ ಕೇಳಿದ್ದೇವೆ. ಇದಕ್ಕೆ ಉತ್ತರ ಬಂದ ಬಳಿಕ ವರದಿ ಬಿಡುಗಡೆ ಮಾಡುತ್ತೇವೆ," ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಐಎಎಸ್, ಕೆಎಎಸ್, ಪಿಯುಸಿ, ಎಸ್ಎಸ್ಎಲ್ಸಿ ತೇರಗಡೆಯಾದ ಪ್ರತಿಭಾವಂತರಿಗೆ ಮುಖ್ಯಮಂತ್ರಿಗಳು ಸನ್ಮಾನ ಮಾಡಿದರು.












Click it and Unblock the Notifications