ಬಸನಗೌಡ ಪಾಟೀಲ್ ಯತ್ನಾಳ್ ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಹೇಳಿದ್ದೇನು?
ಬಿಜೆಪಿ ಪಕ್ಷದ ಶಾಸಕನಾಗಿದ್ದರೂ ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿ ಇರುವ ಬಸನಗೌಡ ಪಾಟೀಲ್ ಯತ್ನಾಳ್, ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಾಜಿ ಸಿಎಂ ಯಡಿಯೂರಪ್ಪ & ಅವರ ಪುತ್ರನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಯತ್ನಾಳ್ ಸದ್ದು ಮಾಡಿದ್ದು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಾಗಾದರೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಈಗ ಯತ್ನಾಳ್ ಹೇಳಿದ್ದೇನು?
ರಾಜ್ಯದಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷ ನಾಯಕರ ಆಯ್ಕೆಯು ನಡೆದಿದೆ. ಹೀಗೆ ಈ 2 ಬೆಳವಣಿಗೆ ಬಗ್ಗೆ ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದ್ರು. ಮಾಜಿ ಸಿಎಂ ಯಡಿಯೂರಪ್ಪ & ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ರು. ಅಲ್ಲದೆ ರಾಜ್ಯದಲ್ಲಿ ವಿಪಕ್ಷ ಸ್ಥಾನವನ್ನ ಉತ್ತರ ಕರ್ನಾಟಕ ಮೂಲದ ಶಾಸಕರಿಗೆ ನೀಡಬೇಕು ಎಂದಿದ್ದರು.

ಆದರೆ ಯತ್ನಾಳ್ ಬೇಡಿಕೆ ಇಟ್ಟಂತೆ ಏನೂ ನಡೆಯಲಿಲ್ಲ. ಒಂದು ಕಡೆ ಬಿಎಸ್ವೈ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷರಾದರು, ಮತ್ತೊಂದು ಕಡೆ ಆರ್. ಅಶೋಕ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆಯಾದರು. ಹೀಗಿದ್ದಾಗ ಯತ್ನಾಳ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?
'ಗೂಂಡಾಗಿರಿಯ ಮನಸ್ಥಿತಿ ಯಾವ ಹುದ್ದೆ...'
ಅಷ್ಟಕ್ಕೂ ಮಾಧ್ಯಮದ ವರದಿಯೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಯತ್ನಾಳ್ ಅವರು, 'ಗೂಂಡಾಗಿರಿಯ ಮನಸ್ಥಿತಿ ಯಾವ ಹುದ್ದೆ ಪದವಿ ಅಧಿಕಾರದಲ್ಲಿ ಇದ್ದರೂ ಹೋಗುವುದಿಲ್ಲ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರಿಗೆ ಸ್ವತಂತ್ರವಾಗಿ ಮತದಾನ ಮಾಡುವ ಹಕ್ಕು ಇಲ್ಲವೇ? ಅಥವಾ, ಗ್ಯಾರಂಟಿಗಳಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರವೇ?' ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಗೂಂಡಾಗಿರಿಯ ಮನಸ್ಥಿತಿ ಯಾವ ಹುದ್ದೆ ಪದವಿ ಅಧಿಕಾರದಲ್ಲಿ ಇದ್ದರೂ ಹೋಗುವುದಿಲ್ಲ,
— Basanagouda R Patil (Yatnal) (@BasanagoudaBJP) November 19, 2023
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರಿಗೆ ಸ್ವತಂತ್ರವಾಗಿ ಮತದಾನ ಮಾಡುವ ಹಕ್ಕು ಇಲ್ಲವೇ?
ಅಥವಾ, ಗ್ಯಾರಂಟಿಗಳಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರವೇ? https://t.co/kVhTo25RlC
ಬಿಎಸ್ವೈ ವಿರುದ್ಧ ಪರೋಕ್ಷ ವಾಗ್ದಾಳಿ?
ಶುಕ್ರವಾರ ವಿಪಕ್ಷ ನಾಯಕನ ಆಯ್ಕೆಗೆ ಮೊದ್ಲು ಮಾತಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿಜೆಪಿ ಒಂದೇ ಕುಟುಂಬದ ಪಕ್ಷ ಆಗಬಾರದು. ಬ್ಲ್ಯಾಕ್ಮೇಲ್ ಮಾಡುವವರಿಗೆ ಕೇರ್ ಮಾಡಲ್ಲ, ಬ್ಲ್ಯಾಕ್ಮೇಲ್ ಮಾಡುವುದಕ್ಕೆ ಯತ್ನ ಮಾಡುತ್ತಾರೆ ಕೆಲ ಜನ. ಅದಕ್ಕೆಲ್ಲಾ ನಾವು ಕೇರ್ ಮಾಡಲ್ಲ ನಾವು ಸತ್ಯದ ಪರ ಇರುವ ಜನ. ನಾನು ಗಟ್ಟಿಯಾಗೇ ಮಾತನಾಡುವ ವ್ಯಕ್ತಿ. ನನ್ನ ಗಟ್ಟಿತನದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದರು. ಹೀಗೆ ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಯುದ್ಧ ಸಾರಿದ್ದರು ಬಸನಗೌಡ ಪಾಟೀಲ್ ಯತ್ನಾಳ್. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications