ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ವೊಂದೇ ಪರಿಹಾರವೇ!?
ಬೆಂಗಳೂರು, ಮೇ 14: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮೇ 24ರ ನಂತರದಲ್ಲಿ ಮತ್ತೆ ಎರಡು ವಾರ ಲಾಕ್ಡೌನ್ ವಿಸ್ತರಿಸುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಮೇ 20ರ ನಂತರ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ನಿರೀಕ್ಷೆಯಿದೆ ಎಂದು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಮೇ 17ರ ಬಳಿಕ ಬೆಂಗಳೂರಿನಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದ್ದು, ಅದಾಗಿ ಮೂರ್ನಾಲ್ಕು ದಿನಗಳ ನಂತರ ಜಿಲ್ಲಾಕೇಂದ್ರಗಳಲ್ಲಿ ಸೋಂಕಿತ ಪ್ರಕರಣಗಳು ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಕೊರೊನಾವೈರಸ್ ಲಸಿಕೆ ವಿತರಣೆ, ಮಾರ್ಗಸೂಚಿಗಳ ಪಾಲನೆ ಹಾಗೂ ಲಾಕ್ಡೌನ್ ವಿಸ್ತರಣೆ ತಂತ್ರದಿಂದ ಜೂನ್ ಎರಡನೇ ವಾರದ ವೇಳೆಗೆ 28 ಲಕ್ಷ ಇರುವ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು 13.93ಕ್ಕೆ ತಗ್ಗಿಸಲು ಸಾಧ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರವು ಮೇ 24ರವರೆಗೂ ಲಾಕ್ಡೌನ್ ಜಾರಿಗೊಳಿಸಿದೆ.

ಮೇ ತಿಂಗಳಿನಲ್ಲಿ ಕೊರೊನಾವೈರಸ್ ಅಪಾಯ ಹೇಗಿರುತ್ತೆ?
ಕರ್ನಾಟಕದಲ್ಲಿ ಮೇ ತಿಂಗಳ ಎರಡನೇ ವಾರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಈ ಹಂತದಲ್ಲಿ ಬೆಂಗಳೂರು ಹಾಗೂ ಜಿಲ್ಲಾಕೇಂದ್ರಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತವೆ. ತಿಂಗಳಾಂತ್ಯದ ವೇಳೆಗೆ ಕೊವಿಡ್-19 ಸೋಂಕು ಇಳಿಮುಖವಾಗಲಿದೆ. ತದನಂತರ ಜಿಲ್ಲಾಮಟ್ಟದಲ್ಲೂ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದ್ದು, ಅದಕ್ಕಾಗಿ ಕಾದು ನೋಡಬೇಕಿದೆ ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ.ಗಿರಿಧರ್ ಆರ್ ಬಾಬು ತಿಳಿಸಿದ್ದಾರೆ.

ಲಾಕ್ಡೌನ್ನಿಂದ ಕೊರೊನಾವೈರಸ್ ಸಂಖ್ಯೆ ಇಳಿಮುಖ
ಪ್ರತಿನಿತ್ಯ ದಾಖಲಾಗುತ್ತಿರುವ ಸಾವಿರ ಸಾವಿರ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗೆ ಕಡಿವಾಣ ಹಾಕಲು ಲಾಕ್ಡೌನ್ ಒಂದು ಪರಿಣಾಮಕಾರಿ ಆಸ್ತ್ರವಾಗಿರುತ್ತದೆ. ವೈದ್ಯಕೀಯ ವ್ಯವಸ್ಥೆ ಉಸಿರಾಡಲು ಲಾಕ್ಡೌನ್ನಿಂದ ಅವಕಾಶ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಅನ್ನು ನಿರ್ವಹಿಸಿದ ರೀತಿ ಕರ್ನಾಟಕಕ್ಕಿಂತ ಉತ್ತಮವಾಗಿದೆ. ಈ ಹಂತದಲ್ಲಿ ಮತ್ತೆ ಎರಡು ವಾರಗಳವರೆಗೆ ಲಾಕ್ಡೌನ್ ವಿಸ್ತರಿಸುವುದು ತೀರಾ ಅವಶ್ಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.

"ರಾಜ್ಯದಲ್ಲಿ ಅನ್ಲಾಕ್ನಿಂದ ಅಪಾಯವೇ ಹೆಚ್ಚು"
ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕೊರೊನಾವೈರಸ್ ಸ್ಥಿತಿಗತಿ ಬಗ್ಗೆ ವಿವರಣಾತ್ಮಕ ವಿಶ್ಲೇಷಣಾ ವರದಿಯನ್ನು ಮೇ 20ರೊಳಗೆ ಸಲ್ಲಿಸಲಾಗುವುದು ಎಂದು ಪ್ರೊ. ಶಶಿಕುಮಾರ್ ತಿಳಿಸಿದ್ದಾರೆ. ಈ ಹಂತದಲ್ಲಿ ಲಾಕ್ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆಯಿದೆ. ಒಂದು ವೇಳೆ ಲಾಕ್ಡೌನ್ ಅನ್ನು ಸಡಿಲಗೊಳಿಸಿ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಪ್ರೊ.ಶಶಿಕುಮಾರ್ ಹೇಳಿದ್ದಾರೆ.
Recommended Video

ಕರ್ನಾಟಕದಲ್ಲಿ ಕೊವಿಡ್-19 ಪ್ರಕರಣಗಳು
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 35297 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 344 ಜನರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, 34057 ಸೋಂಕಿತರು ಗುಣಮುಖರಾಗಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 20,88,488 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಈವರೆಗೂ 14,74,678 ಸೋಂಕಿತರು ಗುಣಮುಖರಾಗಿದ್ದು, 20712 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 5,93,078 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications