ರಾಜ್ಯದಲ್ಲಿ ಮೊದಲು ಪ್ರಾಥಮಿಕ ತರಗತಿ ಆರಂಭಿಸಲು ತಜ್ಞರ ಸಮಿತಿ ಸಲಹೆ
ಬೆಂಗಳೂರು, ಜುಲೈ 23: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮುಚ್ಚಿರುವ ಶಾಲೆಗಳನ್ನು ಆಗಸ್ಟ್ ಮೊದಲ ವಾರದಿಂದ ಆರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವ ಸಾಧ್ಯತೆಯಿದೆ.
ಶಿಕ್ಷಣ ಇಲಾಖೆ ನೇತೃತ್ವದ ತಜ್ಞರ ಸಮಿತಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ಸಂಬಂಧ ವರದಿ ನೀಡಿದ್ದು, ಇದರಲ್ಲಿ ಮೊದಲು ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸಲಹೆ ನೀಡಲಾಗಿದೆ. ರಾಜ್ಯ ಸರ್ಕಾರ ಹಂತ ಹಂತವಾಗಿ ಶಾಲೆಗಳನ್ನು ತೆರೆಯುವ ಸಂಬಂಧ ಆಲೋಚಿಸುತ್ತಿದ್ದು, ಮೊದಲು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳು ತೆರೆಯುವ ಸೂಚನೆಯಿರುವುದಾಗಿ ಮೂಲಗಳು ತಿಳಿಸಿವೆ.
ಬೆಳಗ್ಗೆ ಒಂದನೇ ತರಗತಿಯಿಂದ ಮೂರನೇ ತರಗತಿ ಮಕ್ಕಳಿಗೆ ತರಗತಿಗಳನ್ನು ನಡೆಸಿ, ಮಧ್ಯಾಹ್ನ 4ನೇ ತರಗತಿ ಐದನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿದುಬಂದಿದೆ. ಈ ತರಗತಿಗಳು ಆರಂಭವಾದ ಕೆಲವು ವಾರಗಳ ಬಳಿಕ ನಾಲ್ಕನೇ ತರಗತಿಯಿಂದ ಎರಡನೇ ಪಿಯುಸಿವರೆಗೆ ಶಾಲಾ ಕಾಲೇಜುಗಳನ್ನು ತೆರೆಯಲಾಗುವುದು ಎಂದು ತಿಳಿದುಬಂದಿದೆ.

ಪ್ರತಿ ದಿನ ಮೂರು ಗಂಟೆಯಂತೆ ಆರು ದಿನ ಶಾಲೆಗಳನ್ನು ನಡೆಸಲು ತಜ್ಞರ ಸಮಿತಿ ಸಲಹೆ ನೀಡಿದೆ.
ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮಗಳ ಕಲಿಕೆಯನ್ನು ಪೂರ್ಣಗೊಳಿಸಲು ರಜೆಗಳನ್ನು ರದ್ದುಗೊಳಿಸಿ ಶಾಲೆ ನಡೆಸುವ ಸಲಹೆಯನ್ನೂ ನೀಡಲಾಗಿದೆ. ಇದೇ ಆಗಸ್ಟ್ 2ರಿಂದ ಶಾಲೆಗಳನ್ನು ಆರಂಭಿಸುವ ಸೂಚನೆಯದ್ದು, ಅಧೀಕೃತ ಆದೇಶ ಹೊರಡಿಸಬೇಕಿದೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳನ್ನು ಕೆಲವು ಷರತ್ತುಗಳ ಆಧಾರದ ಮೇಲೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದೀಗ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆಯುವ ಸಂಬಂಧ ಇಲಾಖಾ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ.
2019ರಲ್ಲಿ ಲಾಕ್ಡೌನ್ ಮೂಲಕ ಸ್ಥಗಿತಗೊಂಡ ಶಾಲೆಗಳು ಮತ್ತೆ ತೆರೆಯಲು ಆಗಿಲ್ಲ. ಕಳೆದ ವರ್ಷ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೂ ಎರಡನೇ ತಿಂಗಳಿಗೆ ಪುನಃ ಲಾಕ್ ಡೌನ್ ಜಾರಿ ಆಯಿತು. ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ದೂರವುಳಿದಿದ್ದಾರೆ. ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಕೂಡ ಗಣನೀಯವಾಗಿ ಇಳಿಕೆಯಾಗಿದೆ.
ಗುಜರಾತ್ ಮತ್ತು ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿಯೂ ಈ ನಿಟ್ಟಿನಲ್ಲಿ ಎಲ್ಲಾ ತರಗತಿಗಳ ಆರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ.











Click it and Unblock the Notifications