Get Updates
Get notified of breaking news, exclusive insights, and must-see stories!

Exclusive: ಕೋವಿಡ್ ಲಸಿಕೆಯಿಂದ ಹೆಚ್ಚಾಯ್ತೇ ಹಾರ್ಟ್ ಅಟ್ಯಾಕ್: ತಜ್ಞರು ಹೇಳುವುದೇನು, ಸರ್ಕಾರದ ವಾದವೇನು ?

ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಹೃದಯಾಘಾತದಿಂದ ಯುವ ಸಮೂಹ ಸಾವನ್ನಪ್ಪುತ್ತಿರುವುದು ವರದಿ ಆಗುತ್ತಿದೆ. ಭಾರತದಲ್ಲೂ ಹೃದಯಾಘಾತ ಒಳಗಾಗುವವರ ಸಂಖ್ಯೆ ತಲ್ಲಣ ಮೂಡಿಸಿದೆ. ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಜಿಲ್ಲೆಗಳಿಂದ ಹೃದಯಾಘಾತದ ಪ್ರಕರಣಗಳು ವರದಿ ಆಗುತ್ತಲ್ಲೇ ಇವೆ. ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಕೋವಿಡ್ ಲಸಿಕೆಯ ಕಾರಣಕ್ಕೆ ಹೃದಯಾಘಾತ ಹೆಚ್ಚಾಗುತ್ತಿದೆಯೇ. ಕೋವಿಡ್ ನಂತರದಲ್ಲಿ ಹೃದಯಾಘಾತ ಹೆಚ್ಚಾಗಿದ್ದು ಯಾಕೆ. ಒಂದೊಮ್ಮೆ ಜೀವನ ಶೈಲಿಯಲ್ಲೇ ಬದಲಾವಣೆ ಆಗಿದ್ದರೆ, ಈ ಪ್ರಮಾಣದಲ್ಲಿ ಜನ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಇದು ಈಗ ಕೇವಲ ಪ್ರಶ್ನೆಯಾಗಿ ಉಳಿದಿಲ್ಲ.

ಕರ್ನಾಟಕದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆ ಹೆಚ್ಚಾಗಿ ಜನ ಸಾಯುತ್ತಿರುವ ನಡುವೆಯೇ. ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ರಾಜಕೀಯ ಸಮರ ಜೋರಾಗಿದೆ. ನಿಜಕ್ಕೂ ಈಗ ಚರ್ಚೆ ಆಗಬೇಕಿರುವುದು ಹಾಗೂ ಪರಿಹಾರ ಸಿಗಬೇಕಾಗಿರುವುದು ಹೃದಯಾಘಾತ ಯಾಕೆ ಹೆಚ್ಚಳವಾಗಿದೆ. ಅದನ್ನು ತಡೆಯಲು ತುರ್ತಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ. ಹೃದಯಾಘಾತ ಹೆಚ್ಚಳದ ಬಗ್ಗೆ ಸರ್ಕಾರ ಹೇಳಿದ್ದೇನು, ತಜ್ಞರು ಹಾಗೂ ಹೃದ್ರೋಗ ತಜ್ಞರು ಹೇಳಿದ್ದೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Exclusive Is the Covid vaccine causing an increase in heart attacks What do experts say

ಮೂರನೇ ತರಗತಿ ಓದುತ್ತಿರುವ ಮಗುವಿಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿಯನ್ನು ನೀವು ನೋಡಿರಬಹುದು. ಶಾಲಾ - ಕಾಲೇಜಿಗೆ ಹೋಗುವ ಮಕ್ಕಳು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಯುವಕ - ಯುವತಿಯರು ನಿಂತಲ್ಲೇ ಕುಸಿದು ಬೀಳುತ್ತಿರುವುದು ಒಣ ರಾಜಕೀಯವನ್ನೂ ಮೀರಿ ಚರ್ಚೆ ಆಗಬೇಕಿರುವ ಗಂಭೀರ ವಿಚಾರ. ಆದರೆ, ನಮ್ಮ ದೇಶದಲ್ಲಿ ಸಾವಿನ ವಿಚಾರದಲ್ಲಿ ರಾಜಕೀಯ ನಡೆಯುವುದು ಮುಂದುವರಿದಿದೆ. ಇಷ್ಟು ದಿನ ಒಂದು ಪಕ್ಷಕ್ಕೆ ಸೀಮಿತವಾಗಿದ್ದ ಈ ರೋಗ ಇದೀಗ ಮತ್ತೊಂದು ಪಕ್ಷಕ್ಕೂ ಅಂಟಿಕೊಂಡಂತಿದೆ. ಎಲ್ಲಾ ವಾದ - ವಿವಾದಗಳ ನಡುವೆ ಒಂದಂತು ಸ್ಪಷ್ಟವಾಗಿ ನಮ್ಮ ಕಣ್ಮುಂದಿದೆ ಅದು ಕೋವಿಡ್‌ ನಂತರದ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು ?

ಇನ್ನು ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಾರ್ಟ್ ಅಟ್ಯಾಕ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ನಿಖರ ಕಾರಣ ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆತುರಾತುರದಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು, ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ ಎಂದು ಅವರು ಹೇಳಿದ್ದಾರೆ.

ಲಸಿಕೆ ಕಾರಣವಲ್ಲ, 20 ವರ್ಷಗಳಿಂದ ಹೃದಯಾಘಾತ ಹೆಚ್ಚಳವಾಗಿದೆ: ಡಾ. ಸಿಎನ್ ಮಂಜುನಾಥ್

ಹಾರ್ಟ್‌ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ. ಕೋವಿಡ್ ಪೂರ್ವದಿಂದಲೂ ಭಾರತದಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 20 ವರ್ಷಗಳಿಂದಲೂ ಭಾರತದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಲಸಿಕೆ ಸಿಗದೆ ಇದ್ದರೆ ಕೋಟ್ಯಾಂತರ ಜನ ಸಾವನ್ನಪ್ಪುತ್ತಿದ್ದರು. ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಈಗಾಗಲೇ Indian Council of Medical Research ಈ ಬಗ್ಗೆ ಸಂಶೋಧನೆ ಮಾಡಿದೆ. ಕೋವಿಡ್ ಲಸಿಕೆಗೂ ಹಾರ್ಟ್ ಅಟ್ಯಾಕ್‌ಗೂ ಸಂಬಂಧವಿಲ್ಲ ಎಂದು ವರದಿ ಮಾಡಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಅವರು ಹೇಳಿದ್ದಾರೆ.

Oneindia Kannadaದೊಂದಿಗೆ ಮಾತನಾಡಿದ ಅವರು, ಕಾರ್ಡಿಯಾಕ್ ಅರೆಸ್ಟ್ ಆಗಬೇಕಾದರೆ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವುದಾದರೆ ಕೋವಿಡ್ ಲಸಿಕೆ ತೆಗೆದುಕೊಂಡ ಆರು ತಿಂಗಳಗಳ ವರೆಗೆ ಮಾತ್ರ ಸಾಧ್ಯ. ದೇಶದಲ್ಲಿ 90 ಕೋಟಿ ಜನ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಅದರ ಪರಿಣಾಮವೇನಾದರೂ ಇದ್ದರೆ ಮೊದಲ ಆರು ತಿಂಗಳು ಮಾತ್ರ. ವೈಜ್ಞಾನಿಕವಾಗಿ ಮಾತನಾಡುವುದಾದರೆ 10 ಲಕ್ಷ ಜನರಿಗೆ ಈ ಲಸಿಕೆ ಕೊಟ್ಟ ಸಂದರ್ಭದಲ್ಲಿ ನಾಲ್ಕು ಜನರಿಗೆ ಸೈಡ್‌ಎಫೆಕ್ಟ್‌ ಇರುತ್ತದೆ. ಅದೂ ಸಹ ಕೇವಲ ಆರು ತಿಂಗಳು. ಈಗಾಗಲೇ ಕೋವಿಡ್ ಲಸಿಕೆ ಕೊಟ್ಟು ಮೂರು ವರ್ಷ ಸಮೀಪಿಸಿದೆ.

ನಮ್ಮಲ್ಲಿ ಮದ್ಯಪಾನ, ಧೂಮಪಾನ ಮಾಡುವುದು ಹಾಗೂ ಜೀವನ ಶೈಲಿ ಬದಲಾಗಿದೆ. ಸೋಮಾರಿತ, ಸಕ್ಕರೆಕಾಯಿಲೆ ಹಾಗೂ ಒತ್ತಡ ಹೆಚ್ಚಳವಾಗಿದೆ. ಭಾರತೀಯರ ಜೀನ್ಸ್‌ನಲ್ಲಿ ಆಗಿರುವ ಬದಲಾವಣೆಯೂ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಹೆಚ್ಚು ರಿಫೋರ್ಟ್‌ ಆಗುತ್ತಿರುವುದರಿಂದ ಪ್ರಬುದ್ಧತೆಗೆ ಬಂದಿದೆ. ಲಸಿಕೆಯ ವಿಚಾರ ಮುಗಿದು ಹೋಗಿದೆ ಅಂತ ಹೇಳಿದ್ದಾರೆ.

ಹಾರ್ಟ್ ಅಟ್ಯಾಕ್‌ಗೆ ತುರ್ತು ಪರಿಹಾರ ನೀಡಿ: ರಾಜಾರಾಂ ತಲ್ಲೂರು

ರಾಜ್ಯದಲ್ಲಿ ಹಾರ್ಟ್‌ ಅಟ್ಯಾಕ್ ಹೆಚ್ಚಾಗುತ್ತಿರುವುದಕ್ಕೆ ತುರ್ತು ಪರಿಹಾರಬೇಕಾಗಿದೆ. ನಮಗ್ಯಾರಿಗೂ ಕೋವಿಡ್‌ನಿಂದ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಿದೆಯೇ ಅಥವಾ ಲಸಿಕೆ ಕಾರಣವೇ ಎನ್ನುವುದು ಮುಖ್ಯವೇ ಅಲ್ಲ. ಈಗ ಹಾರ್ಟ್‌ ಅಟ್ಯಾಕ್ ಹೆಚ್ಚಾಗಿದೆ ಅದಕ್ಕೆ ಆದಷ್ಟು ಬೇಗ ಪರಿಹಾರ ಸಿಗಬೇಕು. ಲಸಿಕೆಯಿಂದ ಪರಿಣಾಮವಾಗಿದೆ ಅಂದರೆ ಅದನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈಗ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದು ಇದನ್ನು ತಪ್ಪಿಸುವುದಕ್ಕೆ ಸರ್ಕಾರಗಳು ಏನು ಮಾಡುತ್ತಿವೆ ಎನ್ನುವುದೇ ಮುಖ್ಯ ಪ್ರಶ್ನೆ ಎನ್ನುತ್ತಾರೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು.

Oneindia Kannadaದೊಂದಿಗೆ ಮಾತನಾಡಿದ ಅವರು, ಈಗ ಕೇಳಿದರೆ ಬೇರೆ ಬೇರೆ ಕಾರಣಕ್ಕೆ ಹಾರ್ಟ್‌ ಅಟ್ಯಾಕ್ ಹೆಚ್ಚಾಗಿದೆ ಎನ್ನುತ್ತಾರೆ. ಆದರೆ ಇದ್ಯಾವುದೂ ಕೋವಿಡ್ ಕಾಲದಲ್ಲಿ ಎದುರಾದ ಸಮಸ್ಯೆಗಳಲ್ಲ. ಕೋವಿಡ್ ಪೂರ್ವದಲ್ಲೂ ಆರೋಗ್ಯ ಸಮಸ್ಯೆ ಹಾಗೂ ಜೀವನ ಶೈಲಿ ಸಮಸ್ಯೆ ಇತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಿದೆ. ಇದಕ್ಕೆ ಕಾರಣವೇನು ಹಾಗೂ ಅದಕ್ಕೆ ತುರ್ತು ಪರಿಹಾರ ಏನು ಎನ್ನುವುದನ್ನು ಈಗ ನಮ್ಮ ಮುಂದಿರುವ ಪ್ರಶ್ನೆ.

ಕೋವಿಡ್ ಪೂರ್ವದಲ್ಲಿ ಹಾರ್ಟ್‌ ಅಟ್ಯಾಕ್ ಪ್ರಕರಣಗಳ ಸಂಖ್ಯೆಗೂ ಈಗ ಆಗುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ಕೇಳಿದ ಕೂಡಲೇ ಲಸಿಕೆ ವಿಚಾರ ಮಾತನಾಡುವ ಅವಶ್ಯಕತೆ ಇಲ್ಲ. ಕುಂಬಳಕಾಯಿ ಕಳ್ಳ ಯಾರು ಎಂದರೆ ಬೆನ್ನು ಮುಟ್ಟಿ ನೋಡಿಕೊಳ್ಳುವುದೇಕೆ. ಯಾರೂ ಇಲ್ಲಿ ಲಸಿಕೆ ಕಾರಣ ಎನ್ನುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಅಧ್ಯಯನ ಮಾಡಿರುವ ICMR ಸೇರಿದಂತೆ ವಿವಿಧ ವರದಿಗಳಲ್ಲಿ ಕೆಲವೊಂದು ಲೋಪದೋಷಗಳಿವೆ. ಕೋವಿಡ್‌ನಿಂದ ಹೃದಯಾಘಾತವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕಾದರೆ. ಕೋವಿಡ್ ಯಾರಿಗೆ ಬಂದಿದೆ, ಯಾರಿಗೆ ಬಂದಿಲ್ಲ ಹಾಗೂ ಯಾರು ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ, ಯಾರು ತೆಗೆದುಕೊಂಡಿಲ್ಲ ಎಂದು ವಿಂಗಡಣೆ ಮಾಡಿ ಅಧ್ಯಯನ ಮಾಡಬೇಕು. ಈ ರೀತಿಯ ನಿಖರ ಅಧ್ಯಯನ ನಮ್ಮಲ್ಲಿ ಆಗಿಲ್ಲ. ಯಾವುದೇ ಔಷಧಿ ಮಾರುಕಟ್ಟೆಗೆ ಬಂದ ಮೇಲೆ, ಜನರು ಬಳಕೆ ಮಾಡಿದ ನಂತರ ಏನಾದರೂ ಪರಿಣಾಮ ಬೀರುತ್ತಿದೆಯೇ ಎನ್ನುವುದರ ಸ್ಟಡಿ ನಡೆಯುತ್ತದೆ. ಆ ಅಂಶಗಳು ಬಹಿರಂಗವಾಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಗಮನಿಸಿ: ಕೋವಿಡ್ ಲಸಿಕೆಯಿಂದಲೇ ಹೃದಯಾಘಾತ ಹೆಚ್ಚಳವಾಗಿದೆ ಎನ್ನುವುದಕ್ಕೆ ಯಾವುದೇ ವೈದ್ಯಕೀಯ ದಾಖಲೆಗಳು ಇಲ್ಲ. ಆದರೆ, ಕೋವಿಡ್ ಸೋಂಕು ಬಂದ ಮೇಲೆ ಹೆಚ್ಚಾಗಿದೆ. ಇದಕ್ಕೆ ಕೋವಿಡ್ ಸೋಂಕು ಬಂದಿರುವುದು, ಜೀವನ ಶೈಲಿ ಬದಲಾವಣೆ ಅಥವಾ ಲಸಿಕೆ ಸೇರಿದಂತೆ ಯಾವ ಕಾರಣ ಎನ್ನುವುದು ತಿಳಿಯಬೇಕಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ತುರ್ತಾಗಿ ಹೃದಯಾಘಾತ ಸಮಸ್ಯೆ ತಪ್ಪಿಸಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+