ಯಾವ ಸಿಎಂ ಸಿದ್ದರಾಮಯ್ಯರಂತೆ ನಡೆದುಕೊಂಡಿಲ್ಲ: ಪ್ರತಾಪ್ ಸಿಂಹ
Recommended Video

"ಈ ಹಿಂದೆ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆದರೆ ಯಾವ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರ ರೀತಿ ನಡೆದುಕೊಂಡಿಲ್ಲ" ಎಂದು ಮೈಸೂರು-ಕೊಡಗು ಸಂಸದ ಹಾಗೂ ಬಿಜೆಪಿಯ ರಾಜ್ಯ ಯುವ ಮೋರ್ಚಾದ ಅಧ್ಯಕ್ಷ ಪ್ರತಾಪ್ ಸಿಂಹ ಕಟುವಾದ ಶಬ್ದಗಳಲ್ಲಿ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿದ್ದಾರೆ.
ಮೂರು ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ, ರಾಜ್ಯದ ಐದು ಕಡೆಯಿಂದ ರಥ ಯಾತ್ರೆ ತೆರಳಿ, ಮಂಗಳೂರಿನಲ್ಲಿ ಸೆಪ್ಟೆಂಬರ್ ಏಳರಂದು ದೊಡ್ಡ ಪ್ರಮಾಣದ ಸಭೆಯೊಂದನ್ನು ನಡೆಸಲು ನಿರ್ಧರಿಸಲಾಗಿದೆ. ಆದರೆ ಸೆಪ್ಟೆಂಬರ್ ಐದರಂದು ಆರಂಭವಾಗಬೇಕಾದ ರಥ ಯಾತ್ರೆಗೆ ಈ ವರೆಗೆ, ಅಂದರೆ ಸೆಪ್ಟೆಂಬರ್ ನಾಲ್ಕರವರೆಗೆ ಅನುಮತಿ ದೊರೆತಿಲ್ಲ.
ಆ ಮೂರು ಬೇಡಿಕೆಗಳು ಯಾವುವೆಂದರೆ...
* ಕೆಎಫ್ ಡಿ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು.
* ರಾಜ್ಯದಲ್ಲಿ ನಡೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು.
* ರಮಾನಾಥ್ ರೈ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಆದರೆ, ಇಂಥ ಸನ್ನಿವೇಶದಲ್ಲೂ ನಿಗದಿಯಂತೆಯೇ ಕಾರ್ಯಕ್ರಮ ನಡೆಯುತ್ತದೆ ಎಂದು ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಇಡೀ ರಥ ಯಾತ್ರೆಯ ನೇತೃತ್ವ ವಹಿಸಿರುವ ಪ್ರತಾಪ್ ಸಿಂಹ ಕೂಡ ಖಾತ್ರಿ ಪಡಿಸಿದ್ದಾರೆ. ಮಂಗಳೂರು ಚಲೋ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಪ್ರತಾಪ್ ಸಿಂಹ ನೀಡಿದ ಸಂದರ್ಶನ ಇಲ್ಲಿದೆ.

ಪ್ರಶ್ನೆ: ಮಂಗಳೂರು ಚಲೋಗೆ ರಾಜ್ಯ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಮುಂದೇನು ಮಾಡ್ತೀರಿ?
ಪ್ರತಾಪ್ ಸಿಂಹ: ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಚಳವಳಿ, ಹೋರಾಟ, ಮುಷ್ಕರ ಇವೆಲ್ಲ ಪ್ರಜಾತಾಂತ್ರಿಕ ವ್ಯವಸ್ಥೆಯ ಭಾಗ. ಹತ್ತು ದಿನದ ಹಿಂದೆಯೇ ಅನುಮತಿಗಾಗಿ ಕೇಳಿದ್ದೀವಿ.
ಅಧಿಕಾರದಲ್ಲಿದ್ದೀವಿ ಎಂದು ಮನಸೋ ಇಚ್ಛೆ ನಡೆದುಕೊಂಡರೆ ನಾವು ಸುಮ್ಮನಿರಬೇಕಾ?

ಪ್ರಶ್ನೆ: ಒಂದು ವೇಳೆ ಅಹಿತಕರ ಘಟನೆ ನಡೆದರೆ, ಯಾರಾದರೂ ದುಷ್ಕರ್ಮಿಗಳು ಬೇಕೆಂತಲೇ ಹಿಂಸಾಚಾರ ಸೃಷ್ಟಿಸಿದರೆ ಏನ್ಮಾಡ್ತೀರಾ?
ಪ್ರತಾಪ್ ಸಿಂಹ: ಈ ಹಿಂದೆ ಬಿಜೆಪಿ ನಡೆಸಿದ ಯಾವುದಾದರೂ ಹೋರಾಟದಲ್ಲಿ ಹೀಗಾಗಿದೆಯಾ? ನಮ್ಮದು ಶಾಂತಿಯುತ ಹೋರಾಟ. ಈಗಾಗಲೇ ಸಂಬಂಧಪಟ್ಟ ಜಿಲ್ಲೆಗಳ ಎಸ್ಪಿಗಳಿಗೆ ಅನುಮತಿಗಾಗಿ ಅರ್ಜಿ ನೀಡಿದ್ದೀವಿ. ಸಕಲ ರೀತಿಯಲ್ಲೂ ವ್ಯವಸ್ಥೆ ಮಾಡಿದ್ದೀವಿ.

ಪ್ರಶ್ನೆ: ಅಡ್ವಾಣಿ ಅವರ ರಥಯಾತ್ರೆಗೆ ಇದನ್ನು ಹೋಲಿಸಲಾಗುತ್ತಿದೆಯಲ್ಲಾ?
ಪ್ರತಾಪ್ ಸಿಂಹ: ಅವರದು ಹಿಂದೂ ಜಾಗೃತಿಗಾಗಿ ನಡೆದ ರಥ ಯಾತ್ರೆ. ನಮ್ಮದು ಮೂರು ಬೇಡಿಕೆಯಿದೆ. ಕೆಎಫ್ ಡಿ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು, ರಾಜ್ಯದಲ್ಲಿ ನಡೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ರಮಾನಾಥ್ ರೈ ಅವರಿಂದ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕು.

ಪ್ರಶ್ನೆ: ಈ ಹೋರಾಟ ರಥ ಯಾತ್ರೆಯ ನಂತರ ಕೊನೆಯಾಗುತ್ತದಾ?
ಪ್ರತಾಪ್ ಸಿಂಹ: ನಮ್ಮದು ನಿರಂತರ ಹೋರಾಟ. ಈ ಹಿಂದೆ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಗಳಿದ್ದವು. ಆದರೆ ಯಾವ ಮುಖ್ಯಮಂತ್ರಿಯಾದರೂ ಹೀಗೆ ನಡೆದುಕೊಂಡಿದ್ದಾರಾ? ಮುಖ್ಯಮಂತ್ರಿಗಳ ಬಾಯಲ್ಲಿ ಘಟನೆಗೆ ಕಾರಣರಾದ ಹಿಂದೂ ಎಂಬ ಮಾತು ಬರುತ್ತದೆಯೇ ಹೊರತು ಮುಸ್ಲಿಂ ಅನ್ನೋದೇ ಇಲ್ಲ.
ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಕೆಎಫ್ ಡಿ, ಪಿಎಫ್ ಐ ಕಾರ್ಯಕರ್ತರಾಗಿ ಮುಸ್ಲಿಮರೇ ಇದ್ದಾರೆ. ಆದರೆ ಆ ಬಗ್ಗೆ ಮುಖ್ಯಮಂತ್ರಿಗಳು ಮಾತೇ ಆಡುವುದಿಲ್ಲ.

ಪ್ರಶ್ನೆ: ನೀವು ರಾಜ್ಯ ರಾಜ್ಯಕಾರಣದಲ್ಲಿ ಸಕ್ರಿಯರಾಗ್ತೀರಾ? ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಇದೆಯಾ?
ಪ್ರತಾಪ್ ಸಿಂಹ: ಇಲ್ಲ, ಅಂಥ ಯಾವ ಆಲೋಚನೆಯೂ ಇಲ್ಲ.
|
ಮಂಗಳೂರು ಚಲೋ ಮಾಹಿತಿ
ಮಂಗಳೂರು ಚಲೋ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ 5 ಹಾಗೂ 6 ರಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಲಿದೆ.












Click it and Unblock the Notifications