ಕೇಸರಿ ಬಣ್ಣದ್ದಾದರೂ ಸರಿ, ಶಾಲೆಯಲ್ಲಿ ನಮಗೊಂದು ಶೌಚಾಲಯ ಕಟ್ಟಿಸಿಕೊಡಿ: ಕಾಂಗ್ರೆಸ್ನಿಂದ 'ಸಿಎಂ ಅಂಕಲ್' ಅಭಿಯಾನ
ಬೆಂಗಳೂರು, ನವೆಂಬರ್ 15: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಮಕ್ಕಳು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ತಿಳಿಸಿದೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸರ್ಕಾರಿ ಶಾಲೆಗಳಷ್ಟೇ ಅಲ್ಲ, ಖಾಸಗಿ ಶಾಲೆಗಳಿಗೂ ಸಂಪೂರ್ಣ ಪಠ್ಯಪುಸ್ತಕ ಕೊಡಲಿಲ್ಲ ಏಕೆ? ನಾವು ಶಾಲೆಗಳಿಗೆ ಬಣ್ಣ ನೋಡಲು ಬರಬೇಕಾ, ಪಾಠ ಕಲಿಯಲು ಬರಬೇಕಾ ಅಂಕಲ್? ಅರ್ಧ ವರ್ಷ ಕಳೆದರೂ ಪುಸ್ತಕವನ್ನೇ ಕೊಟ್ಟಿಲ್ಲ ಅಂದ್ರೆ ನಾವು ಓದಿ ಎಕ್ಸಾಮ್ ಬರೆಯೋದು ಹೇಗೆ ಸಿಎಂ ಅಂಕಲ್' ಎಂದು ಪ್ರಶ್ನಿಸಿದೆ.
'ಕರ್ನಾಟಕದಲ್ಲಿ ದೊಡ್ಡವರಲ್ಲಿ ಇದ್ದ ತಾರತಮ್ಯ ಶಾಲೆಗಳಲ್ಲಿ ಮಕ್ಕಳ ವಿಚಾರದಲ್ಲೂ ಹೆಚ್ಚಾಗಿದೆ ಅಂತ ಪಿಎಂ ಅಂಕಲ್ ಅವರೇ ಹೇಳ್ತಿದಾರಲ್ಲ ಏಕೆ ಸಿಎಂ ಅಂಕಲ್? ಅಂಬೇಡ್ಕರ್ ಅವರ ಪಾಠದಲ್ಲಿ ಸಮಾನತೆ ಅನ್ನೋ ಪದವನ್ನ ತುಂಬಾ ಓದಿದ್ದೇವೆ. ನಾವೆಲ್ಲ ಒಂದೇ ಆದರೂ ಎಸ್ಸಿ ಮಕ್ಕಳು ಇತರ ಸಮುದಾಯದ ಮಕ್ಕಳೊಂದಿಗೆ ಸಮವಾಗಿರಲು ಸಾಧ್ಯವಾಗ್ತಿಲ್ಲ ಏಕೆ' ಎಂದು ಕೇಳಿದೆ.

'ಕೋವಿಡ್ ಹೆಸರಲ್ಲಿ 2 ವರ್ಷ ನಮ್ಮ ವಿದ್ಯಾಭ್ಯಾಸ ಹಾಳು ಮಾಡಿದ್ರಿ, ಈಗ ಶೈಕ್ಷಣಿಕ ಸವಲತ್ತು, ಮೂಲಭೂತ ಸೌಕರ್ಯ ಕೊಡದೆ ನಮ್ಮ ವಿದ್ಯಾಭ್ಯಾಸ ಹಾಳು ಮಾಡ್ತಿದೀರಿ. ನಿಮ್ಮ ಮಕ್ಕಳು ಮಾತ್ರ ಓದಿ ದೊಡ್ಡ ದೊಡ್ಡ ಸಾಧನೆ ಮಾಡ್ಬೇಕು, ಉದ್ಯಮ ಕಟ್ಟಬೇಕು, ನಾವೂ ಆ ಸಾಧನೆ ಮಾಡೋದು ನಿಮಗೆ ಇಷ್ಟ ಇಲ್ವಾ ಸಿಎಂ ಅಂಕಲ್' ಎಂದು ಟ್ವೀಟಿಸಿದೆ.
'ರಾಜ್ಯದ ಹಲವು ಶಾಲೆಗಳಲ್ಲಿ ಹೆಣ್ಮಕ್ಳಿಗೆ ಶೌಚಾಲಯ ಇಲ್ಲದೆ ತುಂಬಾ ಕಷ್ಟ ಆಗ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತ ಪಿಎಂ ಅಂಕಲ್ ಹೇಳ್ತಿದ್ರು, ಆದರೆ ಇಲ್ಲಿ 'ಬಚಾವೋ' ಆಗ್ತಿಲ್ಲ, 'ಪಡಾವೋ'ನೂ ಆಗ್ತಿಲ್ಲ ಏಕೆ ಸಿಎಂ ಅಂಕಲ್? ಕೇಸರಿ ಬಣ್ಣದ್ದಾದರೂ ಸರಿ ನಮಗೊಂದು ಶೌಚಾಲಯ ಕಟ್ಟಿಸಿಕೊಡಿ' ಎಂದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
'ಶಿಕ್ಷಣ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕರ್ನಾಟಕ 14ನೇ ಸ್ಥಾನಕ್ಕೆ ಕುಸಿದಿದೆಯಂತೆ, ಹಾಗಂತ ಪೇಪರ್ನಲ್ಲಿ ಬಂದಿತ್ತು. ನಮಗೆ ಸೂಚ್ಯಂಕದ ಬಗ್ಗೆ ಗೊತ್ತಿಲ್ಲ, ಆದ್ರೆ ನಮಗೆ ಶಾಲೆಯಲ್ಲಿ ಯಾವ ಸೌಕರ್ಯವೂ ಸಿಗ್ತಿಲ್ಲ, ಶಾಲೆಗೆ ಬಂದರೆ ಯಾವುದೋ ಬಸ್ ಸ್ಟ್ಯಾಂಡ್ಗೆ ಬಂದಂತೆ ಆಗುತ್ತಿದೆ' ಎಂದು ಆರೋಪಿಸಿದೆ.

'ಸಿಎಂ ಅಂಕಲ್, ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ, ನಮ್ಮ ಉಡುಪಿಯಲ್ಲಿ ಶಾಲೆಗೆ ಬರಲು ರಸ್ತೆಯೇ ಸರಿ ಇಲ್ಲ, ನಾವು ಶಾಲೆಗೆ ಬಂದರೆ ತಾನೆ ನಿಮ್ಮ ಬಣ್ಣ ನೋಡಲು ಸಾಧ್ಯವಾಗುವುದು? ನಾವೇ ನಮ್ ಕೈಲಾದಷ್ಟು ಸರಿಪಡಿಸಿದ್ದೇವೆ, ನೀವ್ ಯಾವಾಗ ನಿಮ್ಮ ಜವಾಬ್ದಾರಿ ನಿರ್ವಹಿಸುವುದು ಸಿಎಂ ಅಂಕಲ್' ಎಂದು ಕಾಂಗ್ರೆಸ್ ಕೇಳಿದೆ.
'ಕೋವಿಡ್ ನಂತರ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಬಾಲಕಾರ್ಮಿಕರ ಸಂಖ್ಯೆ ಏರಿಕೆಯಾಗಿದೆ, ಬಾಲ್ಯವಿವಾಹವೂ ಏರಿಕೆಯಾಗಿದೆ. ಸಿಎಂ ಅಂಕಲ್, ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಯೋಜನೆ ರೂಪಿಸುವುದನ್ನು ಬಿಟ್ಟು ಬಣ್ಣ ಬಣ್ಣ ಬಳಿಯುವ ಬಣ್ಣ ಬಣ್ಣದ ಮಾತಾಡಿಕೊಂಡು ಕುಳಿತಿರುವುದೇಕೆ' ಎಂದು ಪ್ರಶ್ನಿಸಿದೆ.
'ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ ಹೇಳುವ ಸರ್ಕಾರ ವಿವೇಕಾನಂದರ ನೈಜ ತತ್ವಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ? ಜೇಮ್ಶೇಟ್ ಜಿ ಟಾಟಾ ಅವರ ಮೂಲಕ ಭಾರತದ ಕೈಗಾರಿಕೆ & ವೈಜ್ಞಾನಿಕ ಕ್ರಾಂತಿಗೆ ವಿವೇಕಾನಂದರು ಕಾರಣರಾಗಿದ್ದರು. ಸಿಎಂ ಅಂಕಲ್, ಮಕ್ಕಳಲ್ಲಿ ವೈಜ್ಞಾನಿಕ ಮನಭಾವ ಮೂಡಿಸುವಲ್ಲಿ ತಾವು ಕೆಲಸ ಮಾಡ್ತಿಲ್ಲವೇಕೆ' ಎಂದು ಕೇಳಿದೆ.












Click it and Unblock the Notifications