ಬಿಜೆಪಿ ನಾಯಕರು ಬರುವ ಮುನ್ನ ಬಿಎಸ್ವೈ ಕರೆಸಿಕೊಂಡ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ದಿನದ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ಕಾಂಗ್ರೆಸ್ಸಿಗೆ ಭರ್ಜರಿ ಬೂಸ್ಟ್ ಕೊಟ್ಟ ಸಿದ್ದರಾಮಯ್ಯ ಅಮೃತ ಮಹೋತ್ಸವ ನಡೆದ ದಿನದಂದೇ ತಡರಾತ್ರಿ ಅವರು ಬೆಂಗಳೂರಿಗೆ ಆಗಮಿಸಿದ್ದರು.
ಗುರುವಾರ (ಆಗಸ್ಟ್ 4) ತಾವು ಉಳಿದುಕೊಂಡಿದ್ದ ತಾಜ್ ವೆಸ್ಟ್ ಎಂಡ್ ಹೋಟೆಲಿಗೆ ಪಕ್ಷದ ಪ್ರಮುಖ ನಾಯಕರನ್ನು ಅಮಿತ್ ಶಾ ಕರೆಸಿಕೊಂಡಿದ್ದರು. ಅದರಲ್ಲಿ, ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೂಡಾ..
ಬಿಜೆಪಿಯ ಪ್ರಮುಖ ನಾಯಕರು ಹೋಟೆಲಿಗೆ ಬರುವ ಮುನ್ನವೇ ಯಡಿಯೂರಪ್ಪನವರನ್ನು ಅಮಿತ್ ಶಾ ಕರೆಸಿಕೊಂಡಿದ್ದು ಬಿಜೆಪಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅಮಿತ್ ಶಾ-ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಬರುವ ಮುನ್ನವೇ ಯಡಿಯೂರಪ್ಪನವರ ಜೊತೆ ಅಮಿತ್ ಶಾ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವೇಳೆ ಯಡಿಯೂರಪ್ಪನವರ ಮಾತನ್ನು ಅಮಿತ್ ಶಾ ತದೇಕಚಿತ್ತದಿಂದ ಆಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸಿದ್ದರಾಮೋತ್ಸವ, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ
ರಾಜ್ಯದಲ್ಲಿ ಸದ್ಯದ ಬಿಜೆಪಿಯ ಪರಿಸ್ಥಿತಿ, ಸಿದ್ದರಾಮೋತ್ಸವ, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ, ಬಿಜೆಪಿ ಮುಖಂಡರ ಹತ್ಯೆಯ ವಿಚಾರದ ಬಗ್ಗೆ ಅಮಿತ್ ಶಾ ಅವರು ಯಡಿಯೂರಪ್ಪನವರಿಂದ ಪ್ರತ್ಯೇಕ ವರದಿ ತರಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಬಿಜೆಪಿ ಈಗಿನ ವೇಗದಲ್ಲಿ ಸಾಗಿದರೆ, ಅಧಿಕಾರ ಉಳಿಸಿಕೊಳ್ಳುವುದು ಅತ್ಯಂತ ಕಷ್ಟವಾಗಬಹುದು ಎನ್ನುವ ವಸ್ತುನಿಷ್ಟ ವಿಚಾರವನ್ನು ಯಡಿಯೂರಪ್ಪನವರು ಅಮಿತ್ ಶಾಗೆ ವಿವರಿಸಿದ್ದಾರೆ.

ಯೋಗ ದಿನದ ಆಚರಣೆಯ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ
ಯೋಗ ದಿನದ ಆಚರಣೆಯ ಸಂಬಂಧ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹೋಗಿದ್ದರೂ, ನಮ್ಮ ನಾಯಕರು ಇನ್ನೂ ಚುನಾವಣೆಗೆ ಸಿದ್ದತೆಯನ್ನು ಮಾಡಿಕೊಂಡಿಲ್ಲ. ಕಾಂಗ್ರೆಸ್ ಈಗಾಗಲೇ ಪೂರ್ವ ತಯಾರಿಯನ್ನು ಮಾಡಿಕೊಂಡಿದೆ. ಸಿದ್ದರಾಮೋತ್ಸವಕ್ಕೆ ಸೇರಿದ ಜನಸ್ತೋಮ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು ಎನ್ನುವ ಮಾತನ್ನು ಯಡಿಯೂರಪ್ಪನವರು ಅಮಿತ್ ಶಾಗೆ ವಿವರಿಸಿದ್ದಾರೆ.

ಮೈಗೊಡವಿ ಚುನಾವಣೆಗೆ ಸಿದ್ದತೆಯನ್ನು ಮಾಡಿಕೊಳ್ಳಬೇಕಿದೆ
ಒಂದು ಕಡೆ ಜೆಡಿಎಸ್ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು. ಕೇಂದ್ರ ಸರಕಾರದ ಯೋಜನೆಯನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ನಮ್ಮ ನಾಯಕರು/ ಸಚಿವರು ವಿಫಲರಾಗುತ್ತಿದ್ದಾರೆ. ಈಗಲೇ, ಮೈಗೊಡವಿ ಚುನಾವಣೆಗೆ ಸಿದ್ದತೆಯನ್ನು ಮಾಡಿಕೊಳ್ಳಬೇಕಿದೆ ಎನ್ನುವ ಮಾತನ್ನು ಯಡಿಯೂರಪ್ಪ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಮ್ಮ ಸೇವೆ ನಮಗೆ ಮುಖ್ಯ. ರಾಜಕೀಯದಲ್ಲಿ ಸಕ್ರಿಯವಾಗಿರಬೇಕು
ಯಡಿಯೂರಪ್ಪನವರ ಮಾತನ್ನೆಲ್ಲಾ ಆಲಿಸಿದ ನಂತರ, ನಿಮ್ಮ ಸೇವೆ ನಮಗೆ ಮುಖ್ಯ. ರಾಜಕೀಯದಲ್ಲಿ ಸಕ್ರಿಯವಾಗಿರಬೇಕು, ಚುನಾವಣಾ ಪ್ರಚಾರದಲ್ಲಿ ಮಂಚೂಣಿಯಲ್ಲಿರಬೇಕು. ನಿಮ್ಮನ್ನು ಕಡೆಗಣಿಸುತ್ತಿದ್ದೇವೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಅದು ಸತ್ಯಾಂಶವಲ್ಲ ಎಂದು ಅಮಿತ್ ಶಾ ಅವರು ಯಡಿಯೂರಪ್ಪನವರಲ್ಲಿ ಕೇಳಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications