ಪ್ರಜಾಪ್ರಭುತ್ವ ಹಾಳುಗೆಡವಲು ಮೂರು ಪಕ್ಷಗಳು ಹೊರಟಿವೆ: ಎಎಪಿ
ಬೆಂಗಳೂರು, ಮೇ 02: ರಾಜ್ಯದಲ್ಲಿ ಐದು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ತಾನು ಮಾಡಿದ ಘನಂದಾರಿ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಎಎಪಿ ಕರ್ನಾಟಕ ಆರೋಪಿಸಿದೆ.
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಬಂದೊಡನೆ ದೈವ ಭಕ್ತಿ ಜಾಸ್ತಿಯಾಗಿದ್ದು, ಕಾಂಗ್ರೆಸ್ ಚುನಾವಣೆ ಗೆದ್ದರೆ ಮಾನಸ ಸರೋವರ ಯಾತ್ರೆಗೆ ಹೋಗುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ದೈವ ಭಕ್ತಿಯ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೀಳುಮಟ್ಟದ ಸಂಚು ಇದು.
ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಎಂದು ಜಾಹೀರಾತು ನೀಡಿ ಹುಸಿ ಕನ್ನಡ ಪ್ರೇಮ ತೋರುವ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನೂರಾರು ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಿದಾಗ ಕಾಂಗ್ರೆಸ್ ಸುಮ್ಮನಿತ್ತು. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸಿದ್ದರಾಮಯ್ಯನವರಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ ಕೈಗೊಂಡ ಕ್ರಮಗಳೇನು, ರೂಪಿಸಿದ ಯೋಜನೆಗಳೇನು ಎಂಬುದನ್ನು ಜನತೆಗೆ ತಿಳಿಸಬೇಕು.

ಕಾಂಗ್ರೆಸ್ ಸರ್ಕಾರವು ರಾಜ್ಯದ ಭೃಷ್ಟರಿಗೆ ಸಿಂಹಸ್ವಪ್ನವಾಗಿದ್ದ, ಹೆಮ್ಮೆಯ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿದಾಗ, ಸಾವಿರಾರು ಶಾಲೆಗಳನ್ನು ಮುಚ್ಚಿದಾಗ, ಭೃಷ್ಟರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಿದಾಗ, ಹಗರಣಗಳನ್ನು ಎಸಗಿದಾಗ ಸತ್ತಂತೆ ಇದ್ದ ವಿರೋಧಪಕ್ಷ ಬಿಜೆಪಿಯು, ಕಳೆದ ಐದು ವರ್ಷಗಳಲ್ಲಿ ಒಂದೇ ಒಂದಾದರೂ ಪರಿಣಾಮಕಾರಿ ಹೋರಾಟ ಸಂಘಟಿಸಿದೆಯೇ ಎಂಬುದನ್ನು ಹೇಳಬೇಕು.
ಅಧಿಕಾರ ಸಿಕ್ಕಾಗ ರಾಜ್ಯವನ್ನು ಕೊಳ್ಳೆ ಹೊಡೆದ ಬಿಜೆಪಿ, ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬ ಗಾದೆಯಂತೆ ವಿರೋಧಪಕ್ಷವಾಗಿ ರಾಜ್ಯ ಸರ್ಕಾರದ ಜೊತೆ ಲೂಟಿಯಲ್ಲಿ ಭಾಗವಾಗಿತ್ತು. ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ನಾಯಕರು ಕೋಮು ವಿಭಜನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಧರ್ಮದ ಆಧಾರದ ಮೇಲೆ ಒಡೆಯುವ ಕೀಳು ರಾಜಕಾರಣದ ಮೊರೆ ಹೊಕ್ಕಿದೆ.
ಬಿಜೆಪಿಗೆ ಈ ಬಾರಿ ಸೋಲು ಖಚಿತವಾದ್ದರಿಂದ ಪ್ರಧಾನಿ ಮೋದಿಯವರಿಗೆ ದೇವೆಗೌಡರ ಮೇಲೆ ಪ್ರೀತಿ ಉಕ್ಕಿಹರಿಯುತ್ತಿದೆ. ಇದೇ ಮೋದಿ ತನ್ನ ಪಕ್ಷದ ನಾಯಕರು ಸಭ್ಯತೆಯ ಎಲ್ಲೆ ಮೀರಿ ಮಾತನಾಡುವಾಗ ಕಣ್ಣಿದ್ದೂ ಕುರುಡಾಗುತ್ತಾರೆ, ಕಿವಿಯಿದ್ದೂ ಕಿವುಡಾಗುತ್ತಾರೆ.
ಮೋದಿಯವರು ನಿನ್ನೆಯ ರ್ಯಾಲಿಯಲ್ಲಿ ತಮ್ಮ ಪಕ್ಷವನ್ನು ಸಮರ್ಥಿಸುವ ಭರದಲ್ಲಿ ರಾಜ್ಯದ ಮಹಾನ್ ಭೃಷ್ಟಾಚಾರಿಗಳಲ್ಲಿ ಪ್ರಮುಖರಾದ ಯಡಿಯೂರಪ್ಪನವರನ್ನು ರೈತ ಕಳಕಳಿಯ ನಾಯಕ ಎಂದು ಕರೆದು ರಾಜ್ಯದ ರೈತ ಸಮುದಾಯವನ್ನು ಅವಮಾನಿಸಿದ್ದಾರೆ. ಗೊಬ್ಬರ ಕೇಳಿದ ರೈತರಿಗೆ ಗುಂಡು ಹೊಡೆಸಿ ಕೊಲ್ಲಿಸಿದ, ಮಹಾದಾಯಿ, ಕಾವೇರಿ ಹೋರಾಟದ ಸಂದರ್ಭಗಳಲ್ಲಿ ನಾಪತ್ತೆಯಾಗಿದ್ದ, ಎಂದಿಗೂ ರೈತಪರ ಕೆಲಸಮಾಡದ, ಮುಖ್ಯಮಂತ್ರಿಯಾಗಿದ್ದಾಗಲೇ ಭೃಷ್ಟಾಚಾರ ಎಸಗಿ ಜೈಲುಪಾಲಾಗಿದ್ದ ಕಡುಭೃಷ್ಟನನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಹೊರಟಿರುವ ಮೋದಿಯವರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು.












Click it and Unblock the Notifications