ಕರ್ನಾಟಕ ಬರಲಿರುವ ರಾಹುಲ್ ಗಾಂಧಿಗೆ ದಲಿತರಿಂದ ಪ್ರತಿಭಟನೆ ಸ್ವಾಗತ
ಬಳ್ಳಾರಿ, ಫೆಬ್ರವರಿ 08: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ದಲಿತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಲು ಮುಂದಾಗಿವೆ.
ಫೆಬ್ರವರಿ 10ಕ್ಕೆ ಹೊಸಪೇಟೆಗೆ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದು, ನಂತರ, ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಕಲಬುರ್ಗಿಗೆ ತೆರಳಲಿದ್ದಾರೆ. ಮೊದಲನೆಯ ದಿನ ಕೊಪ್ಪಳ ಜಿಲ್ಲೆಯ ಕುಕನೂರಿನ ಅತಿಥಿಗೃಹದಲ್ಲಿ ತಂಗಲಿದ್ದಾರೆ.
ಬಳ್ಳಾರಿಯಲ್ಲಿ ನ್ಯಾ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು.
ರಾಜ್ಯ ಸರ್ಕಾರ ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಅಂದೇ ಸುಮಾರು ಐದು ಸಾವಿರ ಕಾರ್ಯಕರ್ತರ ಸಮ್ಮುಖದಲ್ಲಿ ಕಪ್ಪು ಪಟ್ಟಿ ಪ್ರರ್ದಶನ ನಡೆಸಲಾಗುವುದು, ಬಳ್ಳಾರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್ ಗೆ ಪ್ರತಿಯೊಂದು ಕಡೆ ದಲಿತ ಸಂಘಟನೆ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶನ ಮಾಡಲಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕಪ್ಪು ಪಟ್ಟಿ ಪ್ರರ್ದಶನ ಮಾಡಿ ರಾಹುಲ್ ಗಾಂಧಿ ಗೋ ಬ್ಯಾಕ್ ಎಂಬ ಘೋಷ ವ್ಯಾಕ್ಯದಡಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಸದಾಶಿವ ಆಯೋಗ ವರದಿ ಜಾರಿ ಸಮಿತಿ ರಾಜ್ಯ ಉಪಾಧ್ಯಕ್ಷ ಎನ್ ಮೂರ್ತಿ ಹೇಳಿದರು.
ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುವುದೇ ಅತಿ ಹೆಚ್ಚು ದಲಿತರ ಮತಗಳಿಂದ-
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ನಮ್ಮಿಂದ, ನಿಮಗೆ ನೈತಿಕತೆ ಇದ್ದರೆ ವರದಿ ಜಾರಿ ಮಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಹುಲ್ ಗಾಂಧಿಯವರೇ ನೀವು ಯುವಕರಿದ್ದೀರಿ, ಇದರ ಬಗ್ಗೆ ಎಚ್ಚೆತ್ತುಕೊಳ್ಳಿ ಇಲ್ಲ ಅಂದ್ರೇ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ, ಎಸ್ಸಿ ಮೀಸಲಾತಿಯಿಂದ ಬಂದವರು ಶಾಸಕರು, ಸಂಸದರು, ವರದಿ ಜಾರಿಗೆ ಒತ್ತಾಯಿಸಿ, ಇಲ್ಲವಾದಲ್ಲಿ ನೀಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.











Click it and Unblock the Notifications