ಎಚ್. ಆಂಜನೇಯಲು ಅವರ ಚಿತ್ತ ಬಳ್ಳಾರಿ ಜಿಲ್ಲೆಯತ್ತ?
ಬಳ್ಳಾರಿ, ಫೆಬ್ರವರಿ 07: ಚಿತ್ರದುರ್ಗ ಜಿಲ್ಲಾ ಸಚಿವ ಎಚ್. ಆಂಜನೇಯಲು ಅವರ ಚಿತ್ತ ಬಳ್ಳಾರಿ ಜಿಲ್ಲೆಯತ್ತ! ಈ ರೀತಿಯ ಬೆಳವಣಿಗೆ ಜಿಲ್ಲಾ ಕಾಂಗ್ರೆಸ್ನ ದಲಿತರಲ್ಲಿ ಅಚ್ಚರಿ ಮೂಡಿಸಿದ್ದು ಅಲ್ಲದೇ, ಎಚ್. ಆಂಜನೇಯಲು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಅನೇಕರ ಲೆಕ್ಕಾಚಾರ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಂಬಿಕೆಸ್ತರಾಗಿರುವ ಎಚ್. ಆಂಜನೇಯಲು, ಸಚಿವರಾಗಿ ಕ್ಷೇತ್ರದಿಂದ ದೂರವಿದ್ದಾರೆ. ಆಡಳಿತ ವಿರೋಧಿ ಅಲೆ ಉಂಟಾಗಿದೆ. ಕಾರಣ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದ ಎಲ್. ಮಾರೆಣ್ಣ ಅವರು ಈ ಬಾರಿ ಸ್ಪರ್ಧಿಸಲು ಆಸಕ್ತರಾಗಿ, ಟಿಕೇಟ್ಗಾಗಿ ತೆರೆಮರೆಯಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈಗಾಗಲೇ, ಮಲ್ಲಿಕಾರ್ಜುನ ಖರ್ಗೆ ಅವರನ್ನು ವೈಯಕ್ತಿವಾಗಿ ಭೇಟಿ ಮಾಡಿ, ಟಿಕೇಟ್ಗಾಗಿ ಹಕ್ಕು ಮಂಡನೆ ಮಾಡಿದ್ದಾರೆ.
ಎಚ್. ಆಂಜನೇಯಲು ಅವರು ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಲ್ಲಿ ತಮಗೆ ಟಿಕೇಟ್ ತಪ್ಪಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೀವ್ರ ಗೊಂದಲಕ್ಕೀಡಾಗಿರುವ ಜೆಡಿಎಸ್ನ ಶಾಸಕ ಭೀಮಾನಾಯಕ್ ಅವರು ಕಾಂಗ್ರೆಸ್ ಸೇರುವ ಕುರಿತು ಫೆಬ್ರವರಿ ಕೊನೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.