ಸಾರ್ವತ್ರಿಕ ಚುನಾವಣೆ: ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯಕ್ಕೆ ಪತ್ರ: ಸೂಚನೆಗಳೇನು?
ಬೆಂಗಳೂರು, ಮಾರ್ಚ್ 07: 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುವುದು ಬಾಕಿ ಇದೆ. ಇನ್ನೊಂದು ವಾರದಲ್ಲಿ ಅಧಿಕೃತ ದಿನಾಂಕ ಘೋಷಣೆ ಆಗಲಿದೆ. ಇದಕ್ಕು ಮೊದಲೇ ಭಾರತೀಯ ಚುನಾವಣೆ ಆಯೋಗವು (ECI) ಕರ್ನಾಟಕ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ.
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆದ ದಿನದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದರ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಸಂಬಂಧ ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳು ಮತ್ತು ಬೆಂಗಳೂರು ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ. ಹಾಗಾದರೆ ಪತ್ರ ಮೂಲಕ ನೀಡಿರುವ ಪ್ರಮುಖ ಸೂಚನೆಗಳೇನು? ಎಂಬ ಮಾಹಿತಿ ಇಲ್ಲಿದೆ.

ಪತ್ರದಲ್ಲಿ ಏನಿದೆ?
ಭಾರತೀಯ ಚುನಾವಣೆ ಆಯೋಗದ ಪತ್ರದಲ್ಲಿ '' ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಘೋಷಣೆಯಾದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುತ್ತದೆ. ಆದ್ದರಿಂದ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಇರುವಂತಹ ಗೋಡೆ ಬರಹ (Wall writings), ಪೋಸ್ಟರ್ (posters), ಬ್ಯಾನರ್ (banners) ಮುಂತಾದವುಗಳನ್ನು ಕ್ರಮವಾಗಿ ಚುನಾವಣೆ ಘೋಷಣೆಯಾದ 24 ಗಂಟೆಗಳು, 48 ಗಂಟೆಗಳು ಮತ್ತು 72 ಗಂಟೆಗಳೊಳಗಾಗಿ ಉಲ್ಲೇಖ (1) ಮತ್ತು (2) ರ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತೆರವುಗೊಳಿಸಬೇಕಾಗಿರುತ್ತದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ತಯಾರಿಸಲು ತಮ್ಮ ಹಂತದಲ್ಲಿ ತಂಡಗಳನ್ನು ಮುಂಗಡವಾಗಿ ರಚಿಸಿಕೊಳ್ಳಬೇಕೆಂದು ಸೂಚನೆ ನೀಡಿದೆ. ಚುನಾವಣೆ ಘೋಷಣೆಯಾದ ತಕ್ಷಣ ಮಾಹಿತಿಯನ್ನು ಇದರೊಂದಿಗೆ ಲಗತ್ತಿಸಿರುವ ಪ್ರಪತ್ರದಲ್ಲಿ ಈ ಕಚೇರಿಯ ಇಮೇಲ್ ವಿಳಾಸ [email protected] [email protected] ಗೆ ಸಲ್ಲಿಸುವಂತೆ ಹಾಗೂ ಅದರ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಆಯೋಗ ನಿರ್ದೇಶಿಸಿದೆ'.

ತ್ವರಿತ ತೆರವಿಗೆ ಸೂಚನೆ
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕೇವಲ ಗಂಟೆಗಳಲ್ಲಿ ಪಕ್ಷಗಳು ಭಾವುಟ, ಬ್ಯಾನರ್ಗಳು, ರಸ್ತೆ ಬದಿಯ ಬರಹ ಸೇರಿದಂತೆ ಯಾವುದೇ ರಾಜಕೀಯ ಮತ್ತು ಪಕ್ಷಗಳಿಗೆ ಸಂಬಂಧಿಸಿದಂತಹ ಮತ್ತು ನಿಯಮ ಉಲ್ಲಂಘನೆಗೆ ಕಾರಣಾಗುವ ಪೋಸ್ಟರ್ಗಳನ್ನು ತ್ವರಿತಗತಿಯಲ್ಲಿ ತೆರವಿಗೆ ಆಯೋಗ ಸೂಚನೆ ನೀಡಿದೆ.
ಕೇಂದ್ರ ಆಯೋಗದ ಸೂಚನೆ ಬೆನ್ನಲ್ಲೆ ಬೆಂಗಳೂರು ಚುನಾವಣಾಧಿಕಾರಿಗಳು ಸೇರಿದಂತೆ ರಾಜ್ಯ ಚುನಾವಣಾಧಿಕಾರಿಗಳು ಬ್ಯಾನರ್ ತೆರವಿಗೆ ತಂಡಗಳನ್ನು ರಚಿಸಲಿದ್ದಾರೆ. ಈಗಾಗಲೇ ಎಲ್ಲೆಲ್ಲಿ ಇಂತಹ ಬ್ಯಾನರ್, ಪ್ಲೆಕ್ಸ್ ಗಳಿವೆ ಎಂಬುದೆಲ್ಲದರ ಮಾಹಿತಿ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications