ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ಚುನಾವಣಾ ಆಯೋಗ ಕಣ್ಣು
ಬೆಂಗಳೂರು, ಮಾರ್ಚ್ 27: ಚುನಾವಣೆಗೆ ನಾಮಪತ್ರ ಸಲ್ಲಿಸಿ, ನಾಮಪತ್ರ ಅಂಗೀಕೃತ ಆಗುವ ಅಭ್ಯರ್ಥಿ ಚುನಾವಣೆ ಪ್ರಚಾರಕ್ಕೆ 28 ಲಕ್ಷ ರೂಪಾಯಿಗಳನ್ನು ಮಾತ್ರ ಬಳಸುವಂತೆ ಮಿತಿ ಹೇರಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಇದನ್ನು ಸ್ಪಷ್ಟಪಡಿಸಿದ್ದು, ಅಭ್ಯರ್ಥಿಯ ಖರ್ಚಿನ ಮಾಹಿತಿಯನ್ನು ಸ್ಥಳೀಯ ಚುನಾವಣಾ ಅಧಿಕಾರಿ ಗಮನಿಸುತ್ತಾರೆ.
ಪ್ರತಿ ಮೂರು ದಿನಗಳಿಗೊಮ್ಮೆ ಪ್ರಚಾರದ ಖರ್ಚಿನ ವಿವರವನ್ನು ಅಭ್ಯರ್ಥಿಯು ಸ್ಥಳೀಯ ನೇಮಿತ ಚುನಾವಣಾ ಅಧಿಕಾರಿಗೆ ಸಲ್ಲಿಸುವಂತೆ ನಿಯಮವಿದ್ದು, ಅಧಿಕಾರಿಯೂ ಸಹ ನಿಗದಿತವಾಗಿ ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ನಿಗಾ ವಹಿಸುತ್ತಾರೆ ಎಂದು ಅಪರ ಮುಖ್ಯ ಚುನಾವಣಾಧಿಕಾರಿ-1 ಡಾ. ಕೆ.ಜಿ. ಜಗದೀಶ್ ಹೇಳಿದ್ದಾರೆ.

ಅಭ್ಯರ್ಥಿಯ ಚುನಾವಣಾ ಖರ್ಚು ವೆಚ್ಚದ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿ ದೊರಕುವಂತೆ ವ್ಯವಸ್ಥೆ ಮಾಡಲಾಗಿದ್ದು, ಯಾರು ಬೇಕಾದರೂ ನಿಗದಿತ ಹಣ ಪಾವತಿಸಿ (ಒಂದು ಪುಟಕ್ಕೆ ಒಂದು ರೂಪಾಯಿ) ಯಾವುದೇ ಅಭ್ಯರ್ಥಿಯ ಚುನಾವಣಾ ಖರ್ಚು ವೆಚ್ಚದ ವಿವರ ಪಡೆಯಬಹುದಾಗಿದೆ ಎಂದು ಹೇಳಿದರು.
ಯಾವುದೇ ಚುನಾವಣಾ ಅಭ್ಯರ್ಥಿ ಮಿತಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದು ಕಂಡುಬಂದಲ್ಲಿ ಆತನ ಉಮೇದುವಾರಿಕೆಯನ್ನು ರದ್ದು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications