ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ
ಬೆಂಗಳೂರು, ಏಪ್ರಿಲ್ 19: ರಾಜ್ಯ ಸರ್ಕಾರಿ ನೌಕರರಿಗೆ ಅಕ್ಷಯ ತೃತೀಯ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಶುಭ ಸುದ್ದಿ ಸಿಕ್ಕಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಸಿಗಬೇಕಿದ್ದ ವೇತನ ಏರಿಕೆಗೆ ತಡೆ ನೀಡಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ವೇತನ ಏರಿಕೆ ಶಿಫಾರಸ್ಸು ಜಾರಿಗೊಳಿಸಲು ಹಸಿರು ನಿಶಾನೆ ತೋರಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಶಿಫಾರಸ್ಸಿಗೆ ಅಸ್ತು ಎಂದಿದೆ. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗಳಿಸಲು ಸರ್ಕಾರ ಮುಂದಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರ್ಕಾರಿ ಆದೇಶ ಜಾರಿಗೊಂಡಿರಲಿಲ್ಲ.
ಈ ಮೂಲಕ 'ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ.ಆಯೋಗದ ಶಿಫಾರಸ್ಸಿನಂತೆ ಏಪ್ರಿಲ್ 01,2018ರಿಂದ ಜಾರಿಗೆ ಬರುವಂತೆ ಸೌಲಭ್ಯಗಳು ಸಿಗಲಿವೆ.
ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಆಯೋಗವು ಜನವರಿ 31, 2018ರಂದು ಸಲ್ಲಿಸಿರುವ ವರದಿ ಹಾಗೂ ಶಿಫಾರಸ್ಸನ್ನು ಅನುಷ್ಠಾನಗೊಳ್ಳಲಿದೆ. ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಅಧಿಕ ಹೊರೆ ಬೀಳಲಿದೆ.

ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಹೊರೆ
ಆರನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಏಪ್ರಿಲ್ 01,2018ಕ್ಕೆ ಅನ್ವಯವಾಗುವಂತೆ ಸರ್ಕಾರಿ ನೌಕರರಿಗೆ 5.93 ಲಕ್ಷ ಉದ್ಯೋಗಿಗಳು ಹಾಗೂ 5.73 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಈ ಶಿಫಾರಸ್ಸು ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಹೊರೆ ಬೀಳಲಿದೆ. ಆಯೋಗ ಶಿಫಾರಸ್ಸು ಮಾಡಿದ ಮುಖ್ಯ ವೇತನ ಶ್ರೇಣಿ ಹಾಗೂ 25 ಸ್ಥಾಯಿ ವೇತನ ಶ್ರೇಣಿಗಳಿಗೆ ಸಂಪುಟ ಸಮ್ಮತಿಸಿದ್ದು, ಅಧಿಕೃತ ಆದೇಶ ಎಫ್ ಡಿ 06 ಎಸ್ ಆರ್ ಪಿ 2018 ಹೊರಡಿಸಲಾಗಿದೆ.

ಪರಿಷ್ಕೃತ ಮುಖ್ಯ ವೇತನ ಶ್ರೇಣಿ
ರು 17,000-400-18,600-400-20,400-500-22,450-550- 24,600-600-27,000-650-29,600-750-32,600-850-36,000-950- 39,800-1100-46,400-1250-53,900-1450-62,600-1650- 72,500-1900-83,900-2200-97,100-2500-112100-2800- 128900-3100-1,50,600

ವೇತನ ಶ್ರೇಣಿಗಳ ಪರಿಷ್ಕರಣೆ
ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲು ಸರ್ಕಾರ ಮುಂದಾಗಿದೆ. ವೇತನ ಶ್ರೇಣಿಗಳ ಪರಿಷ್ಕರಣೆ ಮೊತ್ತವನ್ನು ಏಪ್ರಿಲ್ 01 ರಿಂದ ಅನ್ವಯವಾಗುವಂತೆ ನಗದು ರೂಪದಲ್ಲಿ ಪಾವತಿ ಮಾಡತಕ್ಕದ್ದು, ಪರಿಷ್ಕೃತ ವೇತನ ಶ್ರೇಣಿಗಳ ಹಂಚಿಕೆ ಮತ್ತು ಈ ವೇತನ ಶ್ರೇಣಿಗಳಲ್ಲಿ ವೇತನ ಮತ್ತು ನಿವೃತ್ತಿ ವೇತನ ಕ್ರಮಬದ್ಧಗೊಳಿಸುವ ಕುರಿತು, ಸರ್ಕಾರದಿಂದ ವಿವರವಾದ ನಿಯಮ ಮತ್ತು ಆದೇಶವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ವೇತನ ಪರಿಷ್ಕರಣೆ
* ವೇತನ ಪರಿಷ್ಕರಣೆಯಾದ ನಂತರ ಶೇ. 42.25 ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನವಾಗಬೇಕು.
* ಕೇಂದ್ರ ಸರ್ಕಾರ ಘೋಷಿಸುವ ತುಟ್ಟಿಭತ್ಯೆಯ ಪ್ರಮಾಣದಲ್ಲಿ ಶೇ. 0.944 ರಷ್ಟು ತುಟ್ಟಿಭತ್ಯೆ ನೀಡುವ ಭರವಸೆಯೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು.
* ಮನೆ ಬಾಡಿಗೆ ಭತ್ಯೆಯನ್ನು ಶೇ. 45 ರಷ್ಟು ಫಿಟ್ ಮೆಂಟ್ ನೀಡಬೇಕೆಂದು ನೌಕರರು ಮನವಿ ಮಾಡಿದ್ದಾರೆ.
* ಈಗ ಸಿದ್ದರಾಮಯಯ್ಯ ಅವರು ಶೇ 35ರಷ್ಟು ವೇತನ ಏರಿಕೆ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೇತನ ಅಂತರ ಶೇ32ರಷ್ಟಿರಲಿದೆ.

ಆಯೋಗ ಮಾಡಿದ್ದ ಶಿಫಾರಸುಗಳ ಪಟ್ಟಿ
* ರಾಜ್ಯ ಸರ್ಕಾರಿ ನೌಕರರ ವೇತನ ಶೇ 30ರಷ್ಟು ಹೆಚ್ಚಳ.
* ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಸರಿ ಸಮಾನವಾಗಿರಬೇಕು. * ಕೆಲವು ಜಯಂತಿ /ದಿನಾಚರಣೆ ಸರ್ಕಾರಿ ರಜೆ ರದ್ದು, ವಾರದಲ್ಲಿ 5 ದಿನಗಳು ಮಾತ್ರ ಕಚೇರಿ.
* ಕೇಂದ್ರ ಸರ್ಕಾರದ ಕಚೇರಿ ಅನ್ವಯ ವಾರದ ರಜೆ ಹಾಗೂ ಕೆಲಸದ ಅವಧಿ ಬದಲಾವಣೆ.
* ಕನಿಷ್ಟ ವೇತನ ಮೊತ್ತ 16,350 ರು, ಗರಿಷ್ಟ ಮೊತ್ತ 1,32,925 ರು. ಎಂದು ನಿಗದಿ.
* ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.
* ಗ್ರೂಪ್ ಬಿ: 39,425 ರು
* ಗ್ರೂಪ್ ಸಿ : 19, 850 ರು
* ಗ್ರೂಪ್ ಡಿ : 16,350 ರು












Click it and Unblock the Notifications