ಆನಂದ್ ಸಿಂಗ್ ಎಂಟ್ರಿಯಿಂದ ಬಿರುಕುಗೊಂಡ ಬಳ್ಳಾರಿ ಕಾಂಗ್ರೆಸ್
ಬಳ್ಳಾರಿ, ಫೆಬ್ರವರಿ 04: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಭೇಟಿ ಹಿನ್ನಲೆಯಲ್ಲಿ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಗೊಂದಲ, ಕಿತ್ತಾಟ, ವಾಗ್ದಾಳಿಯಲ್ಲಿ ಅಂತ್ಯ ಕಂಡಿತು. ಈ ಮೂಲಕ ಬಿಜೆಪಿಯಿಂದ ಆನಂದ್ ಸಿಂಗ್ ಅವರ ಆಗಮನದ ನಂತರ ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಬಿರುಕು ಉಲ್ಬಣಗೊಂಡಿರುವುದು ಸ್ಪಷ್ಟವಾಗಿದೆ.
ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕರಾಗಿದ್ದ ಬಿ.ಎಸ್. ಆನಂದ್ ಸಿಂಗ್ ಅವರು ಇತ್ತೀಚೆಗೆ ಬಿಜೆಪಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನಲೆಯಲ್ಲಿ ಸ್ಪರ್ಧಾಕಾಂಕ್ಷಿ, ಯುವ ಮುಖಂಡ ದೀಪಕ್ ಸಿಂಗ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಅರ್ಧಗಂಟೆ ಕಾಲ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಆನಂದ್ ಸಿಂಗ್ ಕೂಡಾ ಉಪಸ್ಥಿತರಿದ್ದರು.
ಮೂಲಗಳ ಪ್ರಕಾರ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾರನ್ನೂ ಸಂಪರ್ಕ ಮಾಡದೇ ಕೇವಲ ಹೈಕಮಾಂಡ್ ಹಂತದಲ್ಲಿ ಮಾತುಕತೆ ನಡೆಯಿಸಿ, ಆನಂದಸಿಂಗ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಮೂಲ ಕಾಂಗ್ರೆಸ್ಸಿಗರಲ್ಲಿ ಅನೇಕರಿಗೆ ಮುಜುಗರ ಮೂಡಿಸಿದೆ.

ಯುವ ಮುಖಂಡ ದೀಪಕ್ ಸಿಂಗ್ ರಿಂದ ಆಕ್ಷೇಪ
ಬಿ.ಎಸ್. ಆನಂದ್ ಸಿಂಗ್ ಅವರು ಕಾಂಗ್ರೆಸ್ ಸೇರಿರುವುದನ್ನು ಆಕ್ಷೇಪಿಸಿ ಸ್ಥಳೀಯ ಮುಖಂಡರು ತಿರುಗಿ ಬಿದ್ದರು. ಯುವ ಮುಖಂಡ ದೀಪಕ್ ಸಿಂಗ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಅರ್ಧಗಂಟೆ ಕಾಲ ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಸಂತೋಷ್ ಹಾಗೂ ಆನಂದ್ ಸಿಂಗ್ ಸುಸ್ತಾದರು.

ಸಂತೋಷ್ ಲಾಡ್, ಸ್ಥಳೀಯರನ್ನು ಕಡೆಗಣಿಸಿದ ಆರೋಪ
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನೇಕರು ಆಸಕ್ತರಾಗಿದ್ದರು. ಆದರೆ, ಸಂತೋಷ್ ಲಾಡ್, ಸ್ಥಳೀಯರನ್ನು ಕಡೆಗಣಿಸಿ, ನಿರ್ಲಕ್ಷಿಸಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು. ಈ ರೀತಿಯ ಮಾತುಕತೆ ಅರ್ಧಗಂಟೆ ಕಾಲ ನಡೆದಿದ್ದು, ಸಭೆಯಲ್ಲಿದ್ದ ಮುಖಂಡರು ಪರಸ್ಪರರನ್ನು ಸಮಾಧಾನ ಮಾಡಲು ಯತ್ನಿಸಿ, ದೀಪಕ್ ಸಿಂಗ್ ಅವರನ್ನು ನಿಯಂತ್ರಿಸಿ, ಹೊರಗಡೆ ಕರೆದುಕೊಂಡು ಹೋದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಲಾಡ್
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಲಾಡ್, ನಾನು 20 ವರ್ಷಗಳಿಂದ ರಾಜಕೀಯ ಮಾಡಿದ್ದೇನೆ. ನನಗೂ ಗೊತ್ತಿದೆ ಚುನಾವಣೆ ಹೇಗೆ ನಡೆಸಬೇಕು ಎನ್ನುವುದು ಎನ್ನುತ್ತಲೇ, 'ವೀಡಿಯೋ ಮಾಡಬೇಡಿ, ಪ್ಲೀಸ್' ಎಂದು ಮಾಧ್ಯಮಗಳ ಪ್ರತಿನಿಧಿಗಳು ಸಭೆಯ ಬಗ್ಗೆ ಚಿತ್ರೀಕರಣ ಮಾಡದಂತೆ ತಡೆದರು.

ಎರಡನೇ ಬಾರಿಗೆ ಬಹಿರಂಗವಾಗಿ ಭಿನ್ನಮತ ಸ್ಫೋಟ
ಕಳೆದ ಮೂರು ದಿನಗಳಿಂದ ಸಂತೋಷ್ ಲಾಡ್ ನಾಯಕತ್ವದ ವಿರುದ್ಧ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದು ಎರಡನೆಯದ್ದಾಗಿದೆ. ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಅವರು ಲಾಡ್ ಅವರನ್ನು ನಿರಂಕುಶಾಧಿಪತ್ಯದ ಆಡಳಿತ ನಡೆಸುತ್ತಿದ್ದಾರೆ. ಸ್ಥಳೀಯರನ್ನು, ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ. ಅವರಿಂದ ಪಕ್ಷ ಅಧೋಗತಿಗೆ ತಲುಪುತ್ತಿದೆ' ಎಂದು ಬಳ್ಳಾರಿಯಲ್ಲಿ ಟೀಕಿಸಿದ್ದರು.












Click it and Unblock the Notifications