ಕಲಿ ಚಿತ್ರ ನಿರ್ಮಾಪಕ ಕಮ್ ಶಾಸಕ ಮನೋಹರ್ ಗೆ ಅನರ್ಹತೆ ಭೀತಿ!
ಶಿವರಾಜ್ ಕುಮಾರ್, ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಕಲಿ ಚಿತ್ರದ ನಿರ್ಮಾಪಕ ಕಮ್ ಜೆಡಿಎಸ್ ಎಂಎಲ್ ಸಿ ಸಿ. ಆರ್ ಮನೋಹರ್ ಅನರ್ಹತೆ ಭೀತಿಯಲ್ಲಿದ್ದಾರೆ.
ಬೆಂಗಳೂರು, ಜೂನ್ 02: ನಟ ಶಿವರಾಜ್ ಕುಮಾರ್, ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಕಲಿ ಚಿತ್ರದ ನಿರ್ಮಾಪಕ ಕಮ್ ಜೆಡಿಎಸ್ ಎಂಎಲ್ ಸಿ ಸಿ. ಆರ್ ಮನೋಹರ್ ಅನರ್ಹತೆ ಭೀತಿಯಲ್ಲಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಡಿ. ಎಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವ ಬೆನ್ನಲ್ಲೆ ಕಾಂಗ್ರೆಸ್, ಜೆಡಿಎಸ್ ಎಂಎಲ್ಸಿಗಳ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ನ 8 ಮಂದಿ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಂಡು ಅನರ್ಹರಾಗುವ ಭೀತಿಯಲ್ಲಿದ್ದಾರೆ.
ಕಾಂಗ್ರೆಸ್ಸಿನಿಂದ ಎಸ್. ರವಿ, ಎಂ.ಡಿ.ಲಕ್ಷ್ಮಿನಾರಾಯಣ, ಬೋಸ್ರಾಜ್, ಎಸ್.ರಘು ಆಚಾರ್, ಆರ್.ಬಿ ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ ಹಾಗೂ ಜೆಡಿಎಸ್ ಸದಸ್ಯರಾದ ಅಪ್ಪಾಜಿಗೌಡ, ಸಿ.ಆರ್.ಮನೋಹರ್ ವಿರುದ್ಧ ಪದ್ಮನಾಭ ರೆಡ್ಡಿ ಎಂಬುವರು ಸಲ್ಲಿಸಿದ್ದ ದೂರಿಗೆ ಈಗ ಬೆಲೆ ಬಂದಿದೆ.
8 ಮಂದಿ ಶಾಸಕರಿಗೆ ನೋಟಿಸ್ ಜಾರಿ ಮಾಡಿರುವ ಶಂಕರಮೂರ್ತಿ ಅವರು ಜೂ. 3 ರೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿಮ್ಮ ಸದಸ್ಯತ್ವವನ್ನು ಏಕೆ ಅನರ್ಹಗೊಳಿಸಬಾರದೆಂದು ಪ್ರಶ್ನಿಸಿದ್ದಾರೆ.
ಏನಿದು ಗೊಂದಲ: ಕಳೆದ ಬಿಬಿಎಂಪಿ ಮೇಯರ್, ಬಳ್ಳಾರಿ ಪಾಲಿಕೆ ಚುನಾವಣೆ ಈ 8 ಮಂದಿ ಸದಸ್ಯರು ಬೆಂಗಳೂರಿನ ನಿವಾಸಿಗಳೆಂದು ಹೇಳಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆ ಬಳಿಕ ತಮ್ಮ ತಮ್ಮ ಊರುಗಳಿಂದ ಓಡಾಡುತ್ತಿದ್ದೇವೆ ಎಂದು ಹೇಳಿ ಲಕ್ಷಾಂತರ ರೂ. ಪ್ರಯಾಣ ಭತ್ಯೆಯನ್ನು ಸರ್ಕಾರದಿಂದ ಪಡೆದಿದ್ದರು.
ಈ ರೀತಿ ಸುಳ್ಳು ಹೇಳಿಕೆ ನೀಡಿ ಪ್ರಯಾಣ ಭತ್ಯೆ ಪಡೆದರೆ ಅಂತಹ ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಅವಕಾಶವಿದೆ. ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ದೂರು ಸಲ್ಲಿಸಿದ್ದರು.