ಶಾಲೆಗೆ ಇದೇ ಬಣ್ಣ ಬಳಿಯಿರಿ ಎಂದು ಸುತ್ತೋಲೆಯಲ್ಲಿ ತಿಳಿಸಿಲ್ಲ: ಸಚಿವ ಬಿ.ಸಿ ನಾಗೇಶ್
ಬೆಂಗಳೂರು, ನವೆಂಬರ್ 15: ಆರು ವರ್ಷ ಪೂರ್ಣಗೊಂಡ ಮಗುವನ್ನು ಕಡ್ಡಾಯವಾಗಿ 1ನೇ ತರಗತಿಗೆ ದಾಖಲಿಸಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ವಯೋಮಿತಿ 2025-26ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ ಎಂದು ಇಲಾಖೆ ತಿಳಿಸಿದೆ.
ನವೆಂಬರ್ 15ರಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಿಕ್ಷಣ ಇಲಾಖೆ ಕೆಲ ಮಹತ್ವದ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಬಗ್ಗೆ ಮಾತನಾಡಿದ ಅವರು, ಚುನಾವಣೆ ವರ್ಷವಾಗಿರುವುದರಿಂದ ಒಂದಷ್ಟು ಜನ ವಿರೋಧ ಮಾಡುದಕ್ಕಾಗಿ ವಿರೋಧ ಮಾಡುತ್ತಾರೆ ಎಂದರು.
ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತದೆ. ಕಳೆದ ಒಂದುವರೆ ವರ್ಷದಿಂದ ನೋಡುತ್ತಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲೂ ಅನವಶ್ಯಕ ರಾಜಕೀಯ ಮಾಡುತ್ತಿದೆ. ವಿರೋಧ ಮಾಡಿಸುವುದಕ್ಕೆ ಒಂದಿಷ್ಟು ಜನರು ಇದ್ದಾರೆ. ವೋಟ್ ಬ್ಯಾಂಕ್ಗಾಗಿ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ವಿವರವಾಗಿ ಯೋಚಿಸಿದರೆ ಇವರು ಮತಕ್ಕಾಗಿ ಹೀಗೆ ವಿರೋಧ ಮಾಡುತ್ತಿದ್ದಾರೆ. ಕೇವಲ ಒಂದು ಮತದ ಓಟ್ಗಾಗಿ ಪವಿತ್ರ ಕೇತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದ್ದಾರೆ.

ಹಿಜಾಬ್ ವಿವಾದ ಒಂದು ಕಾಲೇಜಿನ ವಿಷಯವಾಗಿತ್ತು. ವಿದ್ಯಾರ್ಥಿಗಳು, ಎಸ್ಡಿಎಂಸಿ ಹಾಗೂ ಪ್ರಾಂಶುಪಾಲರ ನಡುವೆ ನಡೆಯುತ್ತಿತ್ತು. ಆದರೆ ಕಾಂಗ್ರೆಸ್ನ ಒಬ್ಬ ಹಿರಿಯ ರಾಜಕಾರಣಿ ಇದರ ಬಗ್ಗೆ ಮಾತನಾಡಿದಾಗ ಅದು ದೊಡ್ಡ ವಿಷಯವಾಯಿತು. ಅದು ಕೋರ್ಟ್ ಮೆಟ್ಟಿಲಿಗೆ ಹೋದ ಮೇಲೂ ಕೋರ್ಟ್ ತೀರ್ಪು ಕೊಟ್ಟಾದ ಮೇಲೆಯೂ ಹಿಜಾಬ್ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಕೇಳಿರುವುದನ್ನು ನಾವು ನೋಡಿದ್ದೇವೆ ಎಂದರು.
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಚುನಾವಣಾ ಸಮಯದಲ್ಲಿ ಜನರ ಆಲೋಚನೆ ಬದಲಿಸಲು ಬಣ್ಣದ ವಿಚಾರ ತೆಗೆದುಕೊಂಡಿದ್ದಾರೆ. ನಮ್ಮ ಯಾವುದೇ ಸುತ್ತೋಲೆಯಲ್ಲಿ ಇದೇ ಬಣ್ಣ ಹೊಡೆಯಿರಿ ಎಂದು ಹೇಳಿಲ್ಲ. ಶಾಲಾ ಕಟ್ಟಡ ಹೀಗೆ ಇರಬೇಕು ಎಂದು ಹೇಳಿಲ್ಲ. ಶಾಲೆಯ ವಾತವರಣಕ್ಕೆ ತಕ್ಕಂತೆ ಕಟ್ಟಡಗಳನ್ನು ಕಟ್ಟಿ ಎಂದಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಬದಾವಣೆಯಾಗಿದೆ. ಇಂತಹ ಸಮಯದಲ್ಲಿ ಚುನಾವಣೆಗಾಗಿ ಬಣ್ಣದ ವಿಚಾರವನ್ನು ತೆಗೆದುಕೊಂಡು ಅದರಲ್ಲೂ ಕೇಸರಿ ಬಣ್ಣದ ವಿಚಾರ ತೆಗೆದುಕೊಂಡು ರಾಜಕೀಯ ಮಾಡುತ್ತಿರುವುದು ದುರಾದೃಷ್ಟಕರ ಎಂದರು.












Click it and Unblock the Notifications