ಇ-ಕಾಮರ್ಸ್ ಕಂಪನಿಗಳು ಸ್ವಸಹಾಯ ಸಂಘಗಳಿಗಾಗಿಯೇ 75 ಸಾವಿರ ಕೋಟಿ ಹಣ ಇಟ್ಟಿವೆ
ಬೆಂಗಳೂರು: ಸ್ವಸಹಾಯ ಸಂಘದ ಮಹಿಳೆಯರು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಉತ್ಪನ್ನ ತಯಾರಿಸಬೇಕು. ಹೀಗೆ ಬೇಡಿಕೆಯನ್ನು ತಿಳಿದು ಅದಕ್ಕೆ ಅನುಗುಣವಾಗಿ ಉತ್ಪನ್ನ ತಯಾರಿಸಿದರೆ ಮಾರುಕಟ್ಟೆಯಲ್ಲಿ ಎಲ್ಲರೂ ಗಟ್ಟಿಯಾಗಿ ಉಳಿಯಬಹುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಪದಾಧಿಕಾರಿಗಳಿಗೆ ನಡೆದ ಎರಡು ದಿನಗಳ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯ ಸಬಲೀಕರಣ ಆಗಬೇಕು ಎಂದರು.
ಬೇರೆಯವರು ಒಂದು ಉತ್ಪನ್ನ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಎಲ್ಲರೂ ಅದನ್ನೇ ಮಾಡಲು ಹೋಗಬೇಡಿ. ಆಗ ಒಂದೇ ಉತ್ಪನ್ನದ ತಯಾರಿಕೆ ಹೆಚ್ಚಾಗಿ ಬೆಲೆ ಕುಸಿಯುತ್ತದೆ. ಅದಕ್ಕೆ ಬದಲಾಗಿ, ಯಾವ್ಯಾವ ಉತ್ಪನ್ನಕ್ಕೆ ಬೇಡಿಕೆ ಇದೆ ಎಂಬುದನ್ನು ಮೊದಲು ಪಟ್ಟಿ ಮಾಡಿಕೊಂಡು ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸಿ ಎಂದು ಅಭಿಪ್ರಾಯಪಟ್ಟರು.
ಮಾರುಕಟ್ಟೆಯಲ್ಲಿ ಸಾವಿರಾರು ಉತ್ಪನ್ನಗಳಿಗೆ ಬೇಡಿಕೆ ಇದೆ. ಇದನ್ನು ತಿಳಿಯುವ ಜೊತೆಗೆ ಪ್ರತಿಭೆ ಬೆಳೆಸಿಕೊಳ್ಳಲು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ನಿರಂತರವಾಗಿ ಒತ್ತು ಕೊಡಬೇಕು. ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು. ಕಾಲಕಾಲಕ್ಕೆ ತರಬೇತಿ ಪಡೆಯಬೇಕು. ಹೀಗಾದಾಗ ಬದುಕನ್ನು ಸಮೃದ್ಧಗೊಳಿಸಿಕೊಳ್ಳಬಹುದು ಎಂದು ಸಚಿವರು ಹೇಳಿದರು.
ಮಹಿಳಾ ಸ್ವಸಹಾಯ ಸಂಘಗಳಿಗಾಗಿಯೇ 75,000 ಕೋಟಿ ಮೀಸಲು
ಸರ್ಕಾರದ ಜೀವನೋಪಾಯ ಇಲಾಖೆ ಜೊತೆ ಕೈಜೋಡಿಸಿರುವ ಮಹಿಳಾ ಸ್ವಸಹಾಯ ಸಂಘಗಳ ಪ್ರತಿ ಮಹಿಳೆಯೂ ತಮ್ಮ ವಾರ್ಷಿಕ ಆದಾಯವನ್ನು ಕನಿಷ್ಠ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಕೆಲಸ ಮಾಡಬೇಕು. ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್ ಕಂಪನಿಗಳು ಮಹಿಳಾ ಸ್ವಸಹಾಯ ಸಂಘಗಳಿಗಾಗಿಯೇ ರೂ 75,000 ಕೋಟಿಯಷ್ಟು ವಹಿವಾಟು ನಡೆಸಲು ಸಿದ್ಧ ಇವೆ. ಈಗ ಬ್ಲಾಕ್ ಚೈನ್ ತಂತ್ರಜ್ಞಾನದಿಂದಾಗಿ ಯಾವ ಸ್ವಸಹಾಯ ಸಂಘದ ಯಾವ ಮಹಿಳೆ ಏನನ್ನು ತಯಾರಿಸುತ್ತಿದ್ದಾರೆ, ಎಷ್ಟು ವಹಿವಾಟು ನಡೆಸುತ್ತಿದ್ದಾರೆ ಎನ್ನುವುದೆಲ್ಲಾ ಕುಳಿತ ಜಾಗದಲ್ಲೇ ಗೊತ್ತಾಗುತ್ತದೆ. ಇದರಿಂದಾಗಿ, ಅಂತಹ ಯಶಸ್ವಿ ಮಹಿಳೆಯರನ್ನು ಗುರುತಿಸಿ ಒಂದೆಡೆ ಸೇರಿಸುವುದೂ ಸುಲಭವಾಗುತ್ತದೆ ಎಂದು ವಿವರಿಸಿದರು.
ರಾಜ್ಯದಲ್ಲಿ 1000 ಕೋಟಿ ರೂಪಾಯಿ ಖರ್ಚು
ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಉಜ್ವಲಾ, ಬೇಟಿ ಬಚಾವೊ ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಪ್ರತಿ ವರ್ಷ ಅನುದಾನ ಹೆಚ್ಚಿಸಲಾಗುತ್ತಿದೆ. ಈ ವರ್ಷ ರಾಜ್ಯದಲ್ಲಿ ಇವರಿಗಾಗಿ 1000 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ನಾಯಕತ್ವದ ಗುಣಗಳು
ಸ್ವಸಹಾಯ ಸಂಘದ ಮಹಿಳೆಯರಲ್ಲಿ ನಾಯಕತ್ವದ ಗುಣಗಳು ಅದ್ಭುತವಾಗಿವೆ. ಇಲ್ಲಿನ ಎಷ್ಟೋ ಮಹಿಳೆಯರು ತಮ್ಮ ವೈಯಕ್ತಿಕ ಕಡುಕಷ್ಟಗಳಿಂದ ಹಿಮ್ಮೆಟ್ಟದೆ ಪ್ರಗತಿಯ ಮುಖ ಮಾಡಿದ್ದಾರೆ. ಇಂತಹ ಮಹಿಳೆಯರು ನಿಜಕ್ಕೂ ಸಮಾಜದಲ್ಲಿ ಎಲ್ಲರಿಗೂ ಪ್ರೇರಣಾದಾಯಕವಾಗಿದ್ದಾರೆ ಎಂದರು.
ಬಳ್ಳಾರಿಯ ಮಹಿಳೆಯರ ಮಾತು
ಸ್ವಸಹಾಯ ಸಂಘದ ಮಹಿಳೆಯರ ಪರವಾಗಿ ಬಳ್ಳಾರಿಯಲ್ಲಿ ಬಂಜರು ಭೂಮಿಯನ್ನು ಹಸನುಗೊಳಿಸಿರುವ ಮಹಾದೇವಮ್ಮ, ಶಶಿಕಲಾ ಮತ್ತು ತ್ರಿವೇಣಮ್ಮ ಅವರು ಮಾತನಾಡಿದರು. ಸಚಿವರು ತಾವು ಮಾತನಾಡುವಾಗ ಈ ಮಹಿಳೆಯರ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಜೀವಿನಿ- ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನದ ನಿರ್ದೇಶಕಿ ಮಂಜುಶ್ರೀ, ಉಪ ನಿರ್ದೇಶಕಿ ನಯನಾ ಮತ್ತಿತರರು ಇದ್ದರು.
Recommended Video