ಗಣಪತಿ ಆತ್ಮಹತ್ಯೆ ಸಿಐಡಿ ವರದಿ ಸೋರಿಕೆ, ಸರಕಾರಕ್ಕೆ ಮುಜುಗರ?
ಬೆಂಗಳೂರು, ಜುಲೈ 16: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸಿಗೆ ಸಂಬಂಧಿಸಿದಂತೆ ಸಿಐಡಿ ವರದಿ ಸೋರಿಕೆಯಾಗಿದ್ದು, ಸರಕಾರಕ್ಕೆ ಶಾಕ್ ನೀಡುವಂತಹ ಅಂಶ ವರದಿಯಲ್ಲಿದೆ ಎಂದು ಶುಕ್ರವಾರ (ಜು 15) ಸುದ್ದಿಯಾಗಿತ್ತು.
ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಣಪತಿ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಇದುವರೆಗೆ ಸಿಐಡಿಯಿಂದ ಪ್ರಾಥಮಿಕ ವರದಿ ಬಂದಿಲ್ಲ. ವರದಿಯೇ ಬರದಿರುವಾಗ ಸೋರಿಕೆ ಆಗುವುದು ಎಲ್ಲಿಂದ ಬಂತು ಎಂದು ಸಿದ್ದು ಉತ್ತರಿಸಿದ್ದಾರೆ. (ಕೆಜೆ ಜಾರ್ಜ್ ಸಮರ್ಥಿಸಿಕೊಂಡ ಸಿಎಂ)
ಸಿಐಡಿ ಅಧಿಕಾರಿಗಳ ಪ್ರಾಥಮಿಕ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಸರಕಾರಕ್ಕೆ ವರದಿ ಸಲ್ಲಿಸಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೇಲಧಿಕಾರಿಗಳ ಒತ್ತಡ ಹಾಗೂ ಕಿರುಕುಳದಿಂದ. ಈ ವಿಚಾರವನ್ನು ಸಿಐಡಿ ಅಧಿಕೃತ ಮೂಲಗಳು ನನಗೆ ಹೇಳಿವೆ ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಪ್ರಾಥಮಿಕ ವರದಿಯನ್ನು ಇನ್ನು ಸರಕಾರಕ್ಕೆ ಸಲ್ಲಿಸ ಬೇಕಷ್ಟೇ, ವರದಿ ಸೋರಿಕೆಯಾಗಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ, ವರದಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಡಿವೈಎಸ್ಪಿ ಗಣಪತಿ ಅವರ ತಂದೆ, ಪತ್ನಿ, ಸಹೋದರ, ಮಕ್ಕಳ ಮತ್ತು ದೂರುದಾರರ ಹೇಳಿಕೆಯನ್ನು ಇನ್ನೂ ದಾಖಲಿಸಲಿಲ್ಲ. ಸರಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಪ್ರಾಥಮಿಕ ವರದಿಯನ್ನು ನಾವು ಸರಕಾರಕ್ಕೆ ಇನ್ನೂ ನೀಡಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. (ಗಣಪತಿ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ)
ಆದರೆ, ವರದಿ ಸಿದ್ದವಾಗಿದೆ, ಸೋರಿಕೆಯಾಗಿಲ್ಲ ಎನ್ನುವ ಹೇಳಿಕೆಯನ್ನು ಸಿಐಡಿ-ಡಿಐಜಿ ಹೇಮಂತ್ ನಿಂಬಾಳ್ಕರ್ ನೀಡಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಏನೆಂದು ಉಲ್ಲೇಖವಾಗಿತ್ತು ಎಂದು ಸುದ್ದಿಯಾಗಿದ್ದು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ವೃತ್ತಿ ಕಿರುಕುಳ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಲ್ಲ. ವೃತ್ತಿ ಕಿರುಕುಳ ಕಾರಣ. ಆತ್ಮಹತ್ಯೆಗೂ ಮುನ್ನ ಗಣಪತಿ ಮಾಧ್ಯಮ ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಎಲ್ಲವೂ ಸತ್ಯ ಎಂದು ಸಿಐಡಿ ತನ್ನ ವರದಿಯಲ್ಲಿ ಹೇಳಿದೆಯೆಂದು ಸುದ್ದಿಯಾಗಿತ್ತು. ಸರಕಾರ, ಗಣಪತಿ ಖಿನ್ನತೆಗೆ ಒಳಗಾಗಿದ್ದರು, ಸಂಸಾರದಲ್ಲಿ ಭಿನ್ನಾಭಿಪ್ರಾಯವಿತ್ತು ಎಂದು ಜಾರ್ಜ್ ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಸರಕಾರಕ್ಕೆ ಸಲ್ಲಿಕೆ
ನಾಲ್ಕು ದಿನಗಳ ತನಿಖೆಯ ನಂತರ ಸಿದ್ಧಪಡಿಸಿರುವ ಪ್ರಾಥಮಿಕ ವರದಿಯನ್ನು ಸಿಐಡಿ ಅಧಿಕಾರಿಗಳು, ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಸಲ್ಲಿಸಿದ್ದಾರೆ. ವರದಿ ಪರಿಶೀಲನೆ ನಂತರ, ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮೂಲಕ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಸುದ್ದಿ ಹರಡಿತ್ತು. (ಚಿತ್ರದಲ್ಲಿ ಓಂ ಪ್ರಕಾಶ್)
ಪತ್ನಿ ಜೊತೆ ಮನಸ್ತಾಪಕ್ಕೆ ಪುರಾವೆಯಿಲ್ಲ
ಗಣಪತಿ ಅವರು ವೃತ್ತಿ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಮನಸ್ತಾಪವಾಗಿರುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಸಿಐಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸುದ್ದಿಯಾಗಿತ್ತು.
ಚಂದ್ರಶೇಖರ ಸ್ವಾಮಿ
ವೃತ್ತಿಯಲ್ಲಿ ತನಗಾತ್ತಿರುವ ತೊಂದರೆಯ ಬಗ್ಗೆ ಗಣಪತಿ ಆರು ತಿಂಗಳ ಹಿಂದೆ, ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಚಂದ್ರಶೇಖರ ಸ್ವಾಮಿಯವರ ಬಳಿ ನೋವು ತೋಡಿಕೊಂಡಿರುವ ಆಡಿಯೋ ತುಣುಕು ಮಾಧ್ಯಮಗಳಿಗೆ ಲಭಿಸಿದೆ. ಇದರಲ್ಲಿ ಗಣಪತಿ ಬಡ್ತಿಗಾಗಿ ಸ್ವಾಮಿಗಳ ಜೊತೆ ಮಾತನಾಡುತ್ತಿರುವ ವಿಚಾರವೂ ದಾಖಲಾಗಿದೆ.
ಸೋರಿಕೆಯಾದ ವರದಿಯಲ್ಲಿದ್ದ ಇತರ ಪ್ರಮುಖ ಅಂಶಗಳು
ಸಸ್ಪೆಂಡ್ ನೆಪದಲ್ಲಿ ಗಣಪತಿಗೆ ಬಡ್ತಿ ನಿರಾಕರಿಸಲಾಗಿತ್ತು. ಕೆಲಸಕ್ಕೆ ಸಂಬಂಧಿಸಿದಂತೆ ಗಣಪತಿ ಕಿರುಕುಳ ಅನುಭವಿಸುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಸಹೋದರ ತಮ್ಮಯ್ಯಗೆ ಮೆಸೇಜ್ ಮಾಡಿದ್ದರು. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣವಲ್ಲ.