ಯಯಾತಿಯ ಮಗನಂತಾಗಲು ಹೊರಟರೇ ಶಾಸಕ ಡಾ.ಯತೀಂದ್ರ?
ಮೈಸೂರು, ಡಿ.7: ರಾಜ್ಯ ರಾಜಕಾರಣದಲ್ಲಿ ತಮ್ಮ ಮಾತು, ನಡೆ, ಠೀವಿಯಿಂದ ತಮಗಾರೂ ಸರಿಸಾಟಿಯಿಲ್ಲ ಎಂಬಂತಿರುವ ಸಿದ್ದರಾಮಯ್ಯ ಎರಡು ದಿನಗಳಿಂದ ಕುಸಿದಂತೆ ಕಾಣುತ್ತಿದೆ.
ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಯಾವುದಕ್ಕೂ ಜಗ್ಗುವವರಲ್ಲ. ರಾಜಕೀಯ ಗರಡಿಯಲ್ಲಿ ಅವರನ್ನು ಸುಲಭವಾಗಿ ಪರಿಗಣಿಸುವುದಕ್ಕೂ ಸಾಧ್ಯವಿಲ್ಲ. ಆದರೆ, ಇಂತಹ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ತವರು ಕ್ಷೇತ್ರ ಬಿಟ್ಟು ದೂರದ ಬಾದಾಮಿಯಿಂದ ಗೆದ್ದುಬಂದಿದ್ದಾರೆ. ಅಲ್ಲಿನ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಬಹಿರಂಗ ವೇದಿಕೆ ಮೇಲೆಯೇ 'ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲದಿದ್ದರೆ ಇಲ್ಲಿ ಯಾಕ ಬಂದು ನಿಲ್ಲಬೇಕು?' ಎಂದು ಪ್ರಶ್ನಿಸಿದ್ದು, ಸಿದ್ದರಾಮಯ್ಯ ಅವರನ್ನು ಕೊಂಚ ಅಲುಗಾಡಿಸಿದಂತಾಗಿದೆ. ಸಿದ್ದರಾಮಯ್ಯನವರ ಇಮೇಜಿಗೆ ಇದು ಸ್ವಲ್ಪ ಮಟ್ಟಿನ ಡ್ಯಾಮೇಜ್ ತಂದಿದೆ ಎಂದೇ ಹೇಳಬಹುದು.
"ನೀವು ನಮಗ ಯಾಕ ಗಂಟ ಬಿದ್ರಿ. ನಾನು ಮೊದಲು ಹುಲಿಯಾಗಿದ್ದೆ. ಈಗ ಇಲಿ ಮಾಡ್ಯಾರ. ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಾರೆ. ಕಳೆದ ಬಾರಿ ತಮ್ಮ ಮಗನಿಗೆ ಟಿಕೆಟ್ ಕೊಡದೆ ತಾವೇ ಸ್ಪರ್ಧಿಸಿದ್ದರೆ ಗೆಲ್ಲುತ್ತಿದ್ದರು. ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟರು. ತಮ್ಮ ಕ್ಷೇತ್ರ ಚಾಮುಂಡೇಶ್ವರಿಯಿಂದ ಸ್ಪರ್ಧಿಸಬೇಕು. ಅದು ಬಿಟ್ಟು ಇಲ್ಲಿಗೆ ಬಂದರೆ ನಾವೇನು ಮಾಡಬೇಕು''? ಎಂದು ಚಿಮ್ಮನಕಟ್ಟಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರೂ ಅಲ್ಲಿಯೇ ಉತ್ತರ ನೀಡಿದ್ದಾರೆ. '' ನನಗೆ ಜನರು ಎಲ್ಲಿ ಪ್ರೀತಿಯಿಂದ ಕರೆಯುತ್ತಾರೋ ಅಲ್ಲಿ ಸ್ಪರ್ಧಿಸುತ್ತೇನೆ. ಮುಂದಿನ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ'' ಎಂದು ಈಗಾಗಲೇ ಹೇಳಿದ್ದಾರೆ.
ಹೊಸ ಕ್ಷೇತ್ರಗಳ ತಲಾಷ್:
2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ತಮ್ಮ ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದರೆ, ಬಾದಾಮಿಯಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. ಸುದೀರ್ಘ ರಾಜಕೀಯ ಜೀವನ ನಡೆಸಿದ, ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಧೈರ್ಯವಾಗಿ ಗೆದ್ದುಬರುವಂತಹ ಒಂದು ಕ್ಷೇತ್ರವೂ ಇಲ್ಲದಿರುವುದು ಯೋಚಿಸಬೇಕಾದ ವಿಷಯ.
ಸಿದ್ದರಾಮಯ್ಯ ಕೆಲವು ದಿನಗಳಿಂದ ಬೆಂಗಳೂರಿನ ಚಾಮರಾಜಪೇಟೆಯ ಕ್ಷೇತ್ರದ ಕಡೆ ಹೆಚ್ಚಿನ ಒಲವು ತೋರಿಸಿದ್ದರು. ಮುಸ್ಲಿಂ ಸಮುದಾಯದ ಪ್ರಾಭಲ್ಯ ಇರುವ ಚಾಮರಾಜಪೇಟೆ ಮೊದಲಿನಿಂದಲೂ ಕಾಂಗ್ರೆಸ್ನ ಭದ್ರಕೋಟೆ. 1957ರಿಂದ ಇದುವರೆಗೆ ಚಾಮರಾಜಪೇಟೆಯಲ್ಲಿ ಆರು ಬಾರಿ ಕಾಂಗ್ರೆಸ್ ಗೆದ್ದರೆ, ಮೂರು ಬಾರಿ ಜನತಾ ಪರಿವಾರದ ಶಾಕರು ಆಯ್ಕೆಯಾಗಿದ್ದಾರೆ. ಹಿಂದೆ ಜೆಡಿಎಸ್ ಮೂಲಕ ಶಾಸಕರಾಗಿ, ಸಚಿವರಾಗಿದ್ದ ಜಮೀರ್ ಆಹ್ಮದ್ ಈಗ ಕಾಂಗ್ರೆಸ್ನ ಪ್ರಮುಖ ಅಲ್ಪಸಂಖ್ಯಾತರ ನಾಯಕ ಆಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವುದು ಅಲ್ಲದೆ, ಸಿದ್ದರಾಮಯ್ಯ ಅವರಿಗೆ 2023ರಲ್ಲಿ ಕ್ಷೇತ್ರ ಬಿಟ್ಟು ಕೊಡುವುದಾಗ ಘೋಷಿಸಿದ್ದಾರೆ.
ಈ ಮಧ್ಯೆ ಮತ್ತೆ ಚಾಮುಂಡೇಶ್ವರಿಗೆ ಹೋಗಿ ನೆಲೆ ಕಂಡುಕೊಳ್ಳಲು ಮಾಜಿ ವೈರಿ ಜಿ.ಟಿ. ದೇವೇಗೌಡ ಅವರೊಂದಿಗೂ ಸಿದ್ದರಾಮಯ್ಯ ಈಗ ಸ್ನೇಹ ಸಂಪಾದಿಸಿದ್ದಾರೆ. ಇದಲ್ಲದೆ, ಬೆಂಗಳೂರಿನ ಶಿವಾಜಿನಗರ ಇಲ್ಲವೇ ಪುಲಿಕೇಶಿನಗರದ ಬಗ್ಗೆಯೂ ಸಿದ್ದರಾಮಯ್ಯ ಕಣ್ಣು ಹಾಯಿಸುತ್ತಿದ್ದಾರೆ.
ಅಪ್ಪನಿಗಾಗಿ ಯತೀಂದ್ರ ಕ್ಷೇತ್ರ ತ್ಯಾಗ?
ಈ ಮಧ್ಯೆ ಸಿದ್ದರಾಮಯ್ಯನವರ ಸಂಕಟ ನೋಡಲಾಗದ ಅವರ ಪುತ್ರ, ಶಾಸಕ ಡಾ. ಯತೀಂದ್ರ 'ನನ್ನ ತಂದೆಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಲು ಸಿದ್ದನಿದ್ದೇನೆ' ಎಂದು ಮಂಗಳವಾರ ಹೇಳಿಕೆ ನೀಡಿದ್ದಾರೆ. ಯಯಾತಿ ಮರು ಯೌವನ ಪಡೆಯಲು ತನ್ನ ಯೌವನವನ್ನೇ ತ್ಯಾಗ ಮಾಡಿದ ಪುರುವಿನ ರೀತಿ ಯತೀಂದ್ರ ರಾಜ್ಯದ ಜನರ ಮುಂದೆ ಕಾಣಿಸಿಕೊಂಡಿದ್ದಾರೆ.
'ಬಾದಾಮಿ ಸೇರಿದಂತೆ ಐದಾರು ಕ್ಷೇತ್ರಗಳಲ್ಲಿ ಅಪ್ಪನಿಗೆ ಅವಕಾಶ ಇದೆ. ಅಲ್ಲಿನ ಜನರೂ ಒತ್ತಾಯ ಮಾಡುತ್ತಿದ್ದಾರೆ. 2023ರಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತಾರೆ. ಬೇಕಿದ್ದರೆ ನಾನೂ ಸಹ ನನ್ನ ವರುಣಾ ಕ್ಷೇತ್ರವನ್ನು ಅಪ್ಪನಿಗಾಗಿ ಬಿಟ್ಟುಕೊಡುತ್ತೇನೆ' ಎಂದು ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮತ್ತೊಂದು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಉತ್ಕಟ ಇಚ್ಛೆ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಪಕ್ಷದೊಳಗಿನ ಕೊಕ್ಕೆಗಳನ್ನು ಮೆಟ್ಟಿ ನಿಲ್ಲುವುದು ಒಂದು ಕಡೆಯಾದರೆ, ಯಾವ ಕ್ಷೇತ್ರದಲ್ಲಿ ನಿಂತರೆ ಗೆಲುವು ಸುಲಭ ಎಂಬ ಆಲೋಚನೆ ಮತ್ತೊಂದು ಕಡೆಯಾಗಿದೆ. ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
Recommended Video