ಕಾರ್ಯಕರ್ತರು, ನಾಯಕರಿಗೆ ಯಡಿಯೂರಪ್ಪ ಮನವಿ ಏನು?
ಬೆಂಗಳೂರು, ಜುಲೈ 28 : ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರು, ಹಿತೈಷಿಗಳು ಅಭಿನಂದನೆ ಸಲ್ಲಿಸಲು ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಅಭಿನಂದನೆ ಸಲ್ಲಿಸಲು ಬರುವವರಿಗೆ ಯಡಿಯೂರಪ್ಪ ಮನವಿಯೊಂದನ್ನು ಮಾಡಿದ್ದಾರೆ. "ನಿಮ್ಮ ಹಾರೈಕೆಯೇ ನನಗೆ ಬಹುದೊಡ್ಡ ಉಡುಗೊರೆ ದಯವಿಟ್ಟು ಸಹಕರಿಸಿ" ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದರು. ಡಾಲರ್ಸ್ ಕಾಲೋನಿಯ 'ಧವಳಗಿರಿ' ನಿವಾಸ ಕಾರ್ಯಕರ್ತರಿಂದ, ನಾಯಕರಿಂದ ತುಂಬಿ ಹೋಗಿದೆ. ಹಾರ, ಶಾಲು, ಹೂಗುಚ್ಛ ಹಿಡಿದು ನಾಯಕರು ಸಾಲುಗಟ್ಟಿ ನಿಂತಿದ್ದಾರೆ.
ಯಡಿಯೂರಪ್ಪ ಟ್ವೀಟ್
"ನನ್ನನ್ನು ಭೇಟಿ ಮಾಡಿ ಶುಭಕೋರಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಇಂತಹ ಸಂದರ್ಭದಲ್ಲಿ ನೀವುಗಳು ಹೂಗುಚ್ಚ, ಹಾರ, ಶಾಲುಗಳನ್ನು ತರುವ ಮೂಲಕ ವೆಚ್ಚ ಮಾಡುವುದು ಬೇಡ. ನಿಮ್ಮ ಹಾರೈಕೆಯೇ ನನಗೆ ಬಹುದೊಡ್ಡ ಉಡುಗೊರೆ ದಯವಿಟ್ಟು ಸಹಕರಿಸಿ" ಎಂದು ಹೇಳಿದ್ದಾರೆ.

ಮೋದಿ ಹಾದಿಯಲ್ಲಿ ಯಡಿಯೂರಪ್ಪ : ಬಿ. ಎಸ್. ಯಡಿಯೂರಪ್ಪ ನರೇಂದ್ರ ಮೋದಿ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮೋದಿ ಅವರು ಸಹ ತಮ್ಮನ್ನು ಸ್ವಾಗತಿಸಲು ಬರುವವರು ಹೂಗುಚ್ಛ ತರಬೇಡಿ. ಒಂದು ಹೂ ಕೊಡಿ ಅಥವ ಪುಸ್ತಕ ಕೊಡಿ ಎಂದು ಮನವಿ ಮಾಡಿದ್ದರು.












Click it and Unblock the Notifications