ವಿಧಾನಸೌಧದಿಂದ ಸರ್ಕಾರಿ ಕಚೇರಿಗಳು ಕಾಸು ಕಾಸು ಎಂದು ಕನವರಿಸುತ್ತಿವೆ: ಡಿಕೆಶಿ ಆರೋಪವೇನು?
ಕೋಲಾರ,ಫೆಬ್ರವರಿ3: ಈ ಸರ್ಕಾರದ ಅವಧಿಯಲ್ಲಿ ವಿಧಾನಸೌಧದಿಂದ ಸರ್ಕಾರಿ ಕಚೇರಿಗಳು ಕಾಸು ಕಾಸು ಎಂದು ಕನವರಿಸುತ್ತಿವೆ. ನಮ್ಮ ರಾಜ್ಯ ತಲೆ ತಗ್ಗಿಸುವಂತೆ ಭ್ರಷ್ಟಾಚಾರ ನಡೆಯುತ್ತಿದೆ. ಈ ಕಳಂಕವನ್ನು ನಾವು ತೊಡೆದುಹಾಕಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಶುಕ್ರವಾರ ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು,ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದರು. ಸಚಿವರಿಗೆ ಲಂಚ ನೀಡಲಾಗದೇ ಗುತ್ತಿಗೆದಾರ ಸತ್ತಿದ್ದಾನೆ. ನೇಮಕಾತಿಗಳಲ್ಲಿ ಅಕ್ರಮ ಮಾಡಿ ಐಪಿಎಸ್ ಅಧಿಕಾರಿ ಜೈಲು ಸೇರಿದ್ದಾರೆ.
ಕಲಬೆರಕೆ ಹಾಲು ಮಾರಾಟ: ದೂರು ದಾಖಲಾಗಿ 32 ವರ್ಷಗಳ ನಂತರ ಆರೋಪಿಗೆ ಆರು ತಿಂಗಳ ಜೈಲು ಶಿಕ್ಷೆ
60 ದಿನಗಳಲ್ಲಿ ಚುನಾವಣೆ ಬರುತ್ತಿದೆ. ಬಿಜೆಪಿ ಆಡಳಿತ ಹೇಗಿದೆ, ಕಾಂಗ್ರೆಸ್ ಆಡಳಿತ ಹೇಗಿತ್ತು ಎಂದು ನೀವು ಅವಲೋಕಿಸಬೇಕು. ನಾವು ಉತ್ತಮ ಆಡಳಿತ ನೀಡಿದರೂ ಜನ ನಮಗೆ ಆಶೀರ್ವಾದ ಮಾಡಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೆಂಬಲ ನೀಡಿದರೂ ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಉತ್ತಮ ಆಡಳಿತ ನೀಡುವುದಾಗಿ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಜನಧನ್ ಮೂಲಕ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ನಿಮ್ಮ ಖಾತೆಗೆ ಹಣ ಬಂದಿದೆಯಾ? ಇನ್ನು ಇಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಇದ್ದ ಕಾರ್ಖಾನೆ ಮುಚ್ಚಿ ಹೋಗಿದೆ. ಕೇಂದ್ರ ಸರ್ಕಾರ ಖಾಸಗಿಕರಣ ಮಾಡುತ್ತಿದೆ. ಈ ಸರ್ಕಾರ ಜನರಿಗೆ ಹೇಗೆ ದ್ರೋಹ ಬಗೆಯುತ್ತಿದೆ ಎಂದು ನಮ್ಮ ನಾಯಕರು ಹೇಳಿದ್ದಾರೆ.
ಈ ಸರ್ಕಾರ ಕೋವಿಡ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಲಿಲ್ಲ. ಇದಕ್ಕೆ ಉತ್ತರವನ್ನು ಚುನಾವಣೆಯಲ್ಲಿ ನೀಡಬೇಕು. ಬಿಜೆಪಿ ನಾಯಕರು ಎಷ್ಟೇ ಹಣ ಖರ್ಚು ಮಾಡಿದರೂ ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದೀರಿ. ನಾವು ಈ ಹಿಂದೆ ಕೊಟ್ಟಿದ್ದ 165 ವಚನಗಳನ್ನು ಉಳಿಸಿಕೊಂಡಿದ್ದೇವೆ. ಬಿಜೆಪಿ 600 ಭರವಸೆ ನೀಡಿ ಶೇ.10 ರಷ್ಟು ಈಡೇರಿಸಿಲ್ಲ.
ಅಧಿಕಾರ ಇದ್ದಾಗ ಏನೂ ಮಾಡದವರು ಅಧಿಕಾರ ಹೋದ ನಂತರ ಏನು ಮಾಡುತ್ತಾರೆ. ಪುರಂದರದಾಸರು ಹೇಳಿದಂತೆ, ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಬಿಜೆಪಿ ಸರ್ಕಾರ ಈಗ ಬಜೆಟ್ ನಲ್ಲಿ ಏನೇ ಘೋಷಣೆ ಮಾಡಿದರೂ ಅದು ಜಾರಿಯಾಗುವುದಿಲ್ಲ. ಕಳೆದ ಬಜೆಟ್ ನಲ್ಲಿ ಘೋಷಿಸಿದ ಶೇ.50ರಷ್ಟು ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಜೆಟ್ ನಲ್ಲಿ ಬರುವ ಘೋಷಣೆಗಳನ್ನು ನಂಬಬೇಡಿ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ 2 ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ. ಬೆಳಗಾವಿಯಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರ ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ. ಕೋಲಾರ ಜಿಲ್ಲೆಯ ಒಟ್ಟು 3,20,916 ಮನೆಗಳಲ್ಲಿ ವಿದ್ಯುತ್ ಸಂಪರ್ಕವಿದ್ದು, 3,12,532 ಲಕ್ಷ ಮನೆಗಳು ಪ್ರತಿ ತಿಂಗಳು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತವೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳು ಕೇವಲ 8300 ಸಾವಿರ ಮಾತ್ರ. ಈ ಎಲ್ಲ ಮನೆಗಳಿಗೂ 200 ಯುನಿಟ್ ವಿದ್ಯುತ್ ನೀಡಲು ನಿರ್ಧರಿಸಿದ್ದೇವೆ.
ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು.
ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರು. ಖಚಿತ. ಇದು ಕಾಂಗ್ರೆಸ್ ಪಕ್ಷದ ವಚನ. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕರ್ತರು ಪ್ರತಿ ಮನೆ, ಮನೆಗೆ ತಲುಪಿಸಬೇಕು ಎಂದು ಹೇಳಿದರು.