ನಿಮ್ಮ ಮನೆ ಬಾಗಿಲಿಗೆ ವೈದ್ಯರು; ಕರ್ನಾಟಕ ಸರ್ಕಾರದಿಂದ ಪ್ರಾಯೋಗಿಕ ವೈದ್ಯಕೀಯ ಯೋಜನೆ
ಬೆಂಗಳೂರು, ಜುಲೈ 14: ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತಗಳನ್ನು ಸಂಪಾದಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ರೂಪಗೊಳ್ಳುವುದಕ್ಕೆ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಮೊದಲ ಹೆಜ್ಜೆ ಇರಿಸಿದೆ.
ಜನಸ್ನೇಹಿ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ "ನಿಮ್ಮ ಮನೆ ಬಾಗಿಲಿಗೆ ವೈದ್ಯರು" ಎಂಬ ಪ್ರಾಯೋಗಿಕ ವೈದ್ಯಕೀಯ ಯೋಜನೆಯನ್ನು ಪರಿಚಯಿಸುವುದಕ್ಕೆ ನಿರ್ಧರಿಸಲಾಗಿದೆ. ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐದು ಆಯ್ದ ಗ್ರಾಮಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸುತ್ತಿದೆ.
ಕರ್ನಾಟಕ ಸರ್ಕಾರದ ಈ ಯೋಜನೆಯು ಕೆಲವು ತಿಂಗಳ ಹಿಂದೆ ನಡೆದ ಮೆಗಾ ಆರೋಗ್ಯ ಮೇಳವನ್ನು ಹೋಲುತ್ತದೆ. ಅಂದಿನ ಮೇಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡಲಾಗಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ದಂತ ಚಿಕಿತ್ಸೆ ಮತ್ತು ಇತರ ಹಲವು ಕಾರ್ಯವಿಧಾನಗಳನ್ನು ಉಚಿತವಾಗಿ ನಡೆಸಲಾಯಿತು. ಇದು ಸರ್ಕಾರದ ಅತಿದೊಡ್ಡ ಏಕೈಕ ಉಚಿತ ಆರೋಗ್ಯ ಉಪಕ್ರಮವಾಗುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರೋಗ್ಯಕ್ಕೆ ವಿಶೇಷ ಆದ್ಯತೆ:
ಮನೆ ಬಾಗಿಲಿಗೆ ವೈದ್ಯರು ಯೋಜನೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮೇ ಎರಡನೇ ವಾರದಲ್ಲಿ ಇಡೀ ಬೆಂಗಳೂರು ಗ್ರಾಮಾಂತರ ಸಂಸದೀಯ ಕ್ಷೇತ್ರಕ್ಕೆ ಬೃಹತ್ ಆರೋಗ್ಯ ಶಿಬಿರವನ್ನು ನಾವು ನಡೆಸಿದ್ದೇವೆ. ಅಧಿಕಾರದಲ್ಲಿ ಇರುವ ಬಿಜೆಪಿಯು ಈಗ ಅದನ್ನು ಮಾಡುವುದಕ್ಕೆ ಹೊರಟಿದೆ, ಅವರೂ ಮಾಡಬಹುದು. ಆದರೆ ನಾವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಕೆಲಸ ಮಾಡುತ್ತೇವೆ. ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡುತ್ತೇವೆ," ಎಂದು ಹೇಳಿದ್ದಾರೆ.
ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದೇನು?:
"ಈ ಆರೋಗ್ಯ ಯೋಜನೆಗಳು ಚುನಾವಣೆಯ ಮೊದಲು ಗಿಮಿಕ್ ಆಗಿದೆ. ಬಿಜೆಪಿಯವರು ಇದರ ಬಗ್ಗೆ ಹೆಚ್ಚು ಗಂಭೀರವಾಗಿರುತ್ತಿದ್ದರೆ, ಅವರು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕಲ್ಯಾಣ-ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಬಹುದಿತ್ತು. ಆರೋಗ್ಯ ಮುಖ್ಯ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ, ನಾವು ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯಕ್ತಿಗಳಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಖಚಿತಪಡಿಸುತ್ತೇವೆ," ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.
ಎಲ್ಲಾ ಕ್ಷೇತ್ರದ ಸದಸ್ಯರಿಗೆ ಉಚಿತ ಆರೋಗ್ಯ ಸೇವೆ:
ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಆಂಬ್ಯುಲೆನ್ಸ್ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದು ಅದು ಪಕ್ಷಕ್ಕೆ ಸಾಕಷ್ಟು ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ. ಮೊಬೈಲ್ ಆರೋಗ್ಯ ಸೌಲಭ್ಯವನ್ನು ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಎಂದು ಕುಣಿಗಲ್ನ ಕಾಂಗ್ರೆಸ್ ಶಾಸಕ ಡಾ.ರಂಗನಾಥ ದೊಡ್ಡಯ್ಯ ಹೇಳಿದರು. ಅವರ ಎಲ್ಲಾ ಕ್ಷೇತ್ರದ ಸದಸ್ಯರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು.
ಸರ್ಕಾರದ ಉಚಿತ ಆರೋಗ್ಯ ಸೇವೆ ಕುರಿತು ಬಿಜೆಪಿ ಮುಖ್ಯ ಸಚೇತಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ತಿಂಗಳಿಗೊಮ್ಮೆ ಗ್ರಾಮಗಳಿಗೆ ಉಚಿತ ಆರೋಗ್ಯ ಸೇವೆ ನೀಡುವ ಉಪಕ್ರಮವಾಗಿದೆ. ಇದನ್ನು ಇಡೀ ಬೆಂಗಳೂರು ಜಿಲ್ಲೆಗೆ ವಿಸ್ತರಿಸಬೇಕು ಎಂದರು.












Click it and Unblock the Notifications