ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ನೀಡಬೇಡಿ: ಮಾಯಾವತಿ ಆಕ್ರೋಶ
ಬೆಂಗಳೂರು, ಫೆಬ್ರವರಿ 17: ಇಂದು ನಗರದಲ್ಲಿ ವಿಕಾಸ ಪರ್ವದ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದ ಜಾತ್ಯಾತೀತ ಜನತಾದಳ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿವೆ.
ಲಕ್ಷಾಂತರ ಜನರು ನೆರೆದಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ವರಿಷ್ಠೆ ಮಾಯಾವತಿ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ 'ವಿಕಾಸ ಪರ್ವ' ಬೃಹತ್ ಸಮಾವೇಶ
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದಲಿತರಿಗೆ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, "ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಕರ್ನಾಟಕದ ಜನರು ಮತ ನೀಡದೆ ಬುದ್ಧಿ ಕಲಿಸಬೇಕು," ಎಂದು ಕರೆ ನೀಡಿದ್ದಾರೆ.
"ದಲಿತರು, ಮುಸ್ಲಿಮರು, ರೈತರು, ಕಾರ್ಮಿಕರ ಕಲ್ಯಾಣ ಆಗಬೇಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ. ಈ ಎರಡೂ ಪಕ್ಷಗಳು ಜಾತಿವಾದಿ ಮನಸ್ಥಿತಿಯಿಂದ ಹೊರಬರುವವರೆಗೆ ಅವರ ವಿರುದ್ಧ ನಮ್ಮ ಹೋರಾಟ ನಿಲ್ಲದು," ಎಂದು ತೀವ್ರ ವಾಗ್ದಾಳಿ ನಡೆಸಿದರು.
"ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸರಿಯಾದ ಗೌರವ ಸಿಕ್ಕಿಲ್ಲ, ಈಗಲೂ ಸಿಗುತ್ತಿಲ್ಲ," ಎಂದು ಬೆಹನ್ ಜೀ ಹರಿಹಾಯ್ದರು.
ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ
ಮುಖ್ಯವಾಗಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಾಯಾವತಿ, "ಕಾಂಗ್ರೆಸ್ ಪಕ್ಷವು ಕುತಂತ್ರದಿಂದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಅಂಬೇಡ್ಕರ್ ಅವರಿಗೆ ಭಾರತ ರತ್ನ ಗೌರವ ನೀಡಲೂ ಕಾಂಗ್ರೆಸ್ ಒಪ್ಪಲಿಲ್ಲ. ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಅವರು ತೀರಿಕೊಂಡಾಗ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ, ರಾಷ್ಟ್ರ ಶೋಕ ಕೂಡ ಘೋಷಣೆ ಮಾಡಲಿಲ್ಲ. ಕಾಂಗ್ರೆಸ್ ಸದಾ ದಲಿತ ವಿರೋಧಿಯಾಗಿ ನಡೆದುಕೊಂಡಿದೆ," ಎಂದು ಕಿಡಿಕಾರಿದ ಮಾಯಾವತಿ ಕರ್ನಾಟಕದ ಜನರು ಕಾಂಗ್ರೆಸ್ ಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.
ನಂತರ ಕೇಂದ್ರ ಸರಕಾರದ ಮೇಲೂ ಹರಿಹಾಯ್ದ ಮಾಯಾವತಿ, "ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಕಪ್ಪು ಹಣ ವಾಪಸ್ ತರುತ್ತೇನೆ ಎಂದರು. ಆದರೆ ಬಡವರ ಮನೆಗೆ ಒಂದು ರೂಪಾಯಿಯೂ ಬಂದು ತಲುಪಲಿಲ್ಲ," ಎಂದರು. ಅಪನಗದೀಕರಣ, ಜಿಎಸ್ಟಿಯನ್ನು ತೆಗಳಿದ ಅವರು, "ಉದ್ಯೋಗ ಕೊಡಿ ಎಂದರೆ ಮೋದಿ ಅವರು ಪಕೋಡಿ ಮಾರಿ ಎನ್ನುತ್ತಾರೆ," ಎಂದರು ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯದ ಕಾಂಗ್ರೆಸ್ ಸರ್ಕಾರದ ಕೆಟ್ಟ ನಿರ್ಧಾರಗಳಿಂದ ರಾಜ್ಯದ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ತಡೆಯಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಜೆಡಿಎಸ್ ಮತ್ತು ಬಿಎಸ್ಪಿಯ ಮೈತ್ರಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವಂತೆ ಮಾಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಿ ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡಿ," ಎಂದು ನೆರೆದಿದ್ದ ಜನರಲ್ಲಿ ಮಾಯಾವತಿ ಮನವಿ ಮಾಡಿಕೊಂಡರು.