ಬ್ರದರ್ ಡಿಕೆ: ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಇದ್ದರೆ ಸಾಕು!
ಬೆಂಗಳೂರು, ಅಕ್ಟೋಬರ್ 28 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಶಾಸಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ.
ಕಳೆದ 48 ಗಂಟೆಗಳಲ್ಲಿ ರಾಜ್ಯವನ್ನು ಆವರಿಸಿಕೊಂಡಿರುವ ಈ ರಾಜಕೀಯ ಬೆಳವಣಿಗೆಯ ನೆರಳಿನಲ್ಲಿ ಮನುಷ್ಯ ಸಂಬಂಧದ ತಂತೊಂದು ಸುಪ್ತವಾಗಿ ಮಿಡಿಯುತ್ತಿದೆ. ಅದು ಅಣ್ಣ- ತಮ್ಮನ ನಡುವಿನ ಬಾಂಧವ್ಯ. ಅಣ್ಣ ಸಂಕಷ್ಟದಲ್ಲಿದ್ದಾಗ ಬೆನ್ನೆಲುಬಾಗಿ ನಿಂತ ತಮ್ಮನ ಕತೆ ಇದು.
ಡಿ. ಕೆ. ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದಾಗ ನ್ಯಾಯಾಲಯ ಆವರಣದಲ್ಲಿ ಡಿ. ಕೆ. ಸುರೇಶ್ ಕಣ್ಣೀರು ಹಾಕಿದ್ದರು. ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿದ ದಿನದಿಂದ ಅವರ ಬಿಡುಗಡೆಗೆ ಡಿ. ಕೆ. ಸುರೇಶ್ ಮಾಡಿದ ಪ್ರಯತ್ನಗಳು ಜನರ ಕಣ್ಣ ಮುಂದಿವೆ. ಅವೇ ಈಗ ರಾಜಕೀಯದ ಆಚೆಗೆ ಗಮನ ಸೆಳೆಯುತ್ತಿವೆ.
ಆಗಸ್ಟ್ 30ರಂದು ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಲು ಹೊರಟಾಗ ಅವರ ಜೊತೆಗೆ ದೆಹಲಿಗೆ ತೆರಳಿದ್ದ ಡಿ. ಕೆ. ಸುರೇಶ್, ಅಣ್ಣನ ಜೊತೆಗೆ ನಿಂತಿದ್ದರು. ಡಿ. ಕೆ. ಸುರೇಶ್ ನಿವಾಸದಿಂದಲೇ ನಾಲ್ಕು ದಿನ ವಿಚಾರಣೆಗೆ ತೆರಳಿದ್ದ ಡಿ. ಕೆ. ಶಿವಕುಮಾರ್ ನಂತರ ಬಂಧನಕ್ಕೆ ಒಳಗಾದರು.

ಮುಂದಿನ 50 ದಿನಗಳಲ್ಲಿ ಡಿ. ಕೆ. ಸುರೇಶ್ ಕರ್ನಾಟಕಕ್ಕೆ ಬಂದಿದ್ದು ಒಮ್ಮೆ ಮಾತ್ರ. ಡಿ. ಕೆ. ಶಿವಕುಮಾರ್ ಬಂಧನವಾದ ಬಳಿಕ ಜಾರಿ ನಿರ್ದೇಶನಾಲಯದಿಂದ ಹೊರಬಂದ ಡಿ. ಕೆ. ಸುರೇಶ್ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಣ್ಣೀರು ಹಾಕಿದರು, ಮುಂದೆ ಮಾತನಾಡಲು ಸಾಧ್ಯವಾಗದೇ ತೆರಳಿದರು.
ಕರ್ನಾಟಕದ ರಾಜಕೀಯದಲ್ಲಿ ಡಿಕೆ ಬ್ರದರ್ಸ್ ಎಂದು ಕರೆಸಿಕೊಳ್ಳುವ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಪರಿಸ್ಥಿತಿ ಕಂಡು ರಾಜ್ಯದ ಹಲವು ಜನರು ಕನಿಕರಪಟ್ಟರು. ಅಣ್ಣನಿಗೆ ಹೆಗಲು ಕೊಟ್ಟ ನಿಂತ ಡಿ. ಕೆ. ಸುರೇಶ್ ಸಹ ಮೂರು ದಿನ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಬೇಕಾಯಿತು.
ಕೋಟ್ಯಾಂತರ ರೂಪಾಯಿ ವ್ಯವಹಾರ, ರಾಜಕೀಯ ಶಕ್ತಿ, ಲಕ್ಷಾಂತರ ಅಭಿಮಾನಿಗಳು ಏನೇ ಇರಲಿ ಡಿ. ಕೆ. ಸುರೇಶ್ ಪಾಲಿಗೆ ಸಹೋದರ ಡಿ. ಕೆ. ಶಿವಕುಮಾರ್, ಬಂಧನ ಜೀವನದ ಮತ್ತೊಂದು ತಿರುವು ಅನ್ನಿಸಿದ್ದರೆ ಅದು ಸಹಜ ಕೂಡ. ಅಣ್ಣನ ಸ್ಥಿತಿ ಕಂಡು ನಿಜಕ್ಕೂ ಕಂಗಾಲಾದವರಂತೆ ಕಂಡ ಸುರೇಶ್, ಅಣ್ಣನನ್ನು ಬಿಡಿಸಬೇಕು ಎಂದು ಪಣತೊಟ್ಟು ದೆಹಲಿಯಲ್ಲಿ ಕುಳಿತರು.
ಡಿ. ಕೆ. ಶಿವಕುಮಾರ್ ಅನಾರೋಗ್ಯದಿಂದ ಆರ್ಎಂಎಲ್ ಆಸ್ಪತ್ರೆಗೆ ದಾಖಲಾದಾಗ ಡಿ. ಕೆ. ಸುರೇಶ್ ಕಣ್ಣುಗಳು ನಿದ್ರೆ ಇಲ್ಲದೆ ಊದಿಕೊಂಡಿದ್ದವು. ಅಣ್ಣನ ಸ್ಥಿತಿ ಬಗ್ಗೆ ಮನಸ್ಸಲ್ಲಿ ಅಪಾರವಾದ ನೋವಿದ್ದರೂ ಡಿ. ಕೆ. ಸುರೇಶ್ ಎಲ್ಲವನ್ನು ನಿಭಾಯಿಸಿದರು.
ಒಂದು ಕಡೆ ಅಣ್ಣನ ಯೋಗ ಕ್ಷೇಮ ನೋಡಿಕೊಳ್ಳುವುದು, ಮತ್ತೊಂದು ಕಡೆ ವಕೀಲರನ್ನು ಭೇಟಿ ಮಾಡುವುದು, ರಾಜ್ಯದಲ್ಲಿನ ಡಿ. ಕೆ. ಶಿವಕುಮಾರ್ ಅಭಿಮಾನಿಗಳನ್ನು ಸಮಾಧಾನ ಪಡಿಸುವುದು, ಬರುತ್ತಿದ್ದ ಟೀಕೆಗಳನ್ನು ಎದುರಿಸುವುದು, ವಯಸ್ಸಾದ ತಾಯಿ, ಅಣ್ಣನ ಕುಟುಂಬದವರಿಗೆ ಧೈರ್ಯ ತುಂಬುವುದು ಹೀಗೆ ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಎಲ್ಲರಿಗೂ ಇರಬೇಕು ಅನ್ನಿಸುವ ಹಾಗೆ ಸುರೇಶ್ ನಡೆದುಕೊಂಡರು.

ಡಿ. ಕೆ. ಶಿವಕುಮಾರ್ ತಿಹಾರ್ ಜೈಲು ಸೇರಿದ ಮೇಲೆ ಡಿ. ಕೆ. ಸುರೇಶ್ ರಾಜ್ಯಕ್ಕೆ ವಾಪಸ್ ಬರಲಿಲ್ಲ. ಅಣ್ಣನನ್ನು ಬಿಡಿಸಿ ಅವರ ಜೊತೆಯೇ ಬರುವೆ ಎಂದು ಶಪಥ ಮಾಡಿ ದೆಹಲಿಯಲ್ಲಿ ಕುಳಿತರು. ನಿರಂತರವಾಗಿ ಜೈಲಿಗೆ ಭೇಟಿ ಕೊಟ್ಟು ಅಣ್ಣ ನೀಡಿದ ಸೂಚನೆಗಳನ್ನು ಪಾಲಿಸುತ್ತಿದ್ದರು.
ಎಲ್ಲಾ ಕಷ್ಟಗಳಿಗೆ ಫಲ ಸಿಕ್ಕ ಗಳಿಗೆ ದೆಹಲಿ ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಿತ್ತು. ಆಗ ಆನಂದದಿಂದ ಡಿ. ಕೆ. ಸುರೇಶ್ ನ್ಯಾಯಾಲಯದ ಆವರಣದಲ್ಲಿಯೇ ಕಣ್ಣೀರಿಟ್ಟರು. ಜೈಲಿಗೆ ಹೋಗಿ ಅಣ್ಣನನ್ನು ಬರಮಾಡಿಕೊಂಡು ದೆಹಲಿಯ ತಮ್ಮ ಮನೆಗೆ ಕರೆದುಕೊಂಡು ಬಂದರು.
ಕೆಪಿಸಿಸಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸುವಾಗ, "ಡಿ. ಕೆ. ಸುರೇಶ್ ನನ್ನ ಸಹೋದರನಲ್ಲಿ ನನ್ನ ಮಗ" ಎಂದು ಹೇಳಿದ್ದು, ಡಿ. ಕೆ. ಸುರೇಶ್ ಪಟ್ಟ ಕಷ್ಟಕ್ಕೆ ಸಿಕ್ಕಫಲ. ಕೋಟ್ಯಾಂತರ ರೂಪಾಯಿ ಆಸ್ತಿ ಇರಲಿ, ರಾಜಕೀಯ ಸ್ಥಾನಮಾನ ಎಷ್ಟೇ ಇರಲಿ ಸಹೋದರ, ಸಂಬಂಧಿಕರು ಎಂಬುದು ಎಷ್ಟು ಮುಖ್ಯ ಎಂಬುದನ್ನು ಡಿಕೆಶಿ ಬದ್ರರ್ಸ್ ಸಾರಿ ಹೇಳಿದರು.












Click it and Unblock the Notifications