"ಜನವರಿ 6ಕ್ಕೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕಾರ"
ಬೆಳಗಾವಿ ಅಧಿವೇಶನದ ನಡುವೆ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೇ ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಕ್ಲಾರಿಟಿ ಕೊಟ್ಟಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರು ಮತ್ತೆ ದೆಹಲಿ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ಹೊಸ ವರ್ಷಕ್ಕೆ ಹೊಸ ಸಿಎಂ ಎಂದು ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿದೆ. ಆದರೆ ಶಾಸಕರೊಬ್ಬರು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ದಿನಾಂಕವನ್ನೇ ಘೋಷಿಸಿದ್ದಾರೆ. ಜನವರಿ 6ರಂದೇ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಮಂಡ್ಯದ ಕಾಂಗ್ರೆಸ್ ನಾಯಕರು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿ ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗುವ ನೆಪದಲ್ಲಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿತ ಶಾಸಕರ ಗುಂಪು ಹೈಕಮಾಂಡ್ ಭೇಟಿಗೆ ಮುಂದಾಗಿದೆ. ಈ ಮೂಲಕ ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಡ ಹೇರಲು ತಂತ್ರ ರೂಪಿಸಿರುವ ಗುಸಗುಸು ಕೇಳಿಬರುತ್ತಿದೆ. ಆದರೆ ಜನವರಿ 6ಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಆಗಿ ಪಟ್ಟಾಭಿಷೇಕವಾಗಲಿದೆ ಎಂದು ಅವರ ಆಪ್ತರೂ ಆದ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆಶಿಗೆ 6 & 9 ಅದೃಷ್ಟ ಸಂಖ್ಯೆ
ಡಿ.ಕೆ.ಶಿವಕುಮಾರ್ ಅವರಿಗೆ ಜನವರಿ 6 ಮತ್ತು 9 ಅದೃಷ್ಟ ಸಂಖ್ಯೆ. ಇನ್ನು ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಡಿಕೆ ಶಿವಕುಮಾರ್ ಅವರ ಹೋರಾಟಕ್ಕೆ ಹಾಗೂ ಶ್ರಮಕ್ಕೆ ಪ್ರತಿಫಲ ಸಿಗಬೇಕು. ಹೀಗಾಗಿ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು. ಅವರಿಗೆ ಅವಕಾಶ ಸಿಗಲೇಬೇಕು. ಇದಕ್ಕೆ ಹೈಕಮಾಂಡ್ ಕೂಡ ಸ್ಪಂದಿಸುತ್ತಿದೆ. ಹೀಗಾಗಿ ಬಹುತೇಕ ಜನವರಿ 6ರಂದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಈ ಬಗ್ಗೆ ನನಗೆ ಶೇ 99ರಷ್ಟು ವಿಶ್ವಾಸವಿದೆ ಎಂದಿದ್ದಾರೆ ಶಾಸಕ ಇಕ್ಬಾಲ್ ಹುಸೇನ್.
ಇನ್ನು ಡಿ.ಕೆ.ಶಿವಕುಮಾರ್ ಅವರೊಂದಿಗೆ ನಾನು ಕೂಡ ದೆಹಲಿಗೆ ಹೋಗಿ ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಆದರೆ ನಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಿಲ್ಲ. ಈಗಾಗಲೇ ನಾವು ನಮ್ಮ ಮನವಿ ಏನು ಎಂದು ಅವರಿಗೆ ತಿಳಿಸಿದ್ದೇವೆ. ಹೀಗಾಗಿ ಅವರಿಂದ ಒಳ್ಳೆಯ ಸ್ಪಂದನೆ ಸಿಗುವ ವಿಶ್ವಾಸವೂ ಇದೆ. ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇನ್ನು ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿರಬಹುದು. ಯಾರು ಏನಾದರೂ ಹೇಳಲಿ, ರಾಜ್ಯದ ಜನ ಹಾಗೂ ನಮ್ಮ ಭಾಗದ ಶಾಸಕರು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಅವರು ಸಿಎಂ ಆಗುವುದು ಖಚಿತ ಎಂದಿದ್ದಾರೆ.












Click it and Unblock the Notifications